ಕಣ್ಣೆದುರೇ ಕರಗಿಹೋದ ಸ್ವಪ್ನಲೋಕ: ವಯನಾಡ್ ಮಹಾವಿಪತ್ತಿಗೆ ಎರಡು ವರ್ಷ

ಕಲ್ಪೆಟ್ಟಾ: ಅದು ಮಲಗಿದ್ದ ಊರನ್ನು ಕೆಲವೇ ನಿಮಿಷಗಳಲ್ಲಿ ಸ್ಮಶಾನವನ್ನಾಗಿಸಿದ ಆ ಕರಾಳ ರಾತ್ರಿ. ‘ಅಪ್ಪಾ… ಅಮ್ಮಾ…’ ಎನ್ನುವಷ್ಟರಲ್ಲಿ ಎಲ್ಲವೂ ಮಣ್ಣಿನ ಅಡಿಗೆ ಸೇರಿಹೋಗಿತ್ತು. ಕೇರಳದ ವಯನಾಡ್ ಜಿಲ್ಲೆಯ ಮುಂಡಕ್ಕೈ ಮತ್ತು ಚೂರಲ್ಮಲ ಪ್ರದೇಶಗಳಲ್ಲಿ ಭೀಕರ ಭೂಕುಸಿತ ಸಂಭವಿಸಿ ಇಂದಿಗೆ ಸರಿಯಾಗಿ ಎರಡು ವರ್ಷಗಳೇ ಕಳೆದಿವೆ. ಆ ದುರಂತ ಸೃಷ್ಟಿಸಿದ ಅನಾಹುತದ ಗುರುತುಗಳು ಕಾಲ ಕಳೆದರೂ ಇಂದಿಗೂ ಹಸಿರಾಗಿವೆ; ಮನಸ್ಸಿನ ಗಾಯಗಳು ಎಂದಿಗೂ ಮಾಯದಂತಾಗಿವೆ.

ಕಣ್ಣೆದುರೇ ಕರಗಿಹೋದ ಸ್ವಪ್ನಲೋಕ
2024ರ ಜುಲೈ 30ರ ಆ ಮಳೆಯ ರಾತ್ರಿ ನೂರಾರು ಜೀವಗಳನ್ನು ಮಾತ್ರವಲ್ಲ, ನಂಬಿ ಬದುಕಿದ್ದ ನೂರಾರು ಕುಟುಂಬಗಳ ಕನಸಿನ ಮನೆಗಳನ್ನು, ನೆಮ್ಮದಿಯ ಜೀವನವನ್ನು ಮಣ್ಣುಪಾಲು ಮಾಡಿತ್ತು. ಇಂದು ಉಸಿರಾಡುತ್ತಿರುವವರೆಲ್ಲರೂ ತಮ್ಮವರ ನೆನಪುಗಳನ್ನು ಹೊತ್ತುಕೊಂಡೇ ಬದುಕುತ್ತಿದ್ದಾರೆ. “ಮನೆ ಇತ್ತು, ಒಲವಿತ್ತು, ನಗುವಿನ ಸಂಸಾರವಿತ್ತು… ಇಂದು ಯಾರೂ ಇಲ್ಲ, ಉಳಿದಿರುವುದು ಕೇವಲ ಆ ಕರಾಳ ರಾತ್ರಿಯ ಕಣ್ಣೀರು ಮಾತ್ರ” ಎನ್ನುವ ಸಂತ್ರಸ್ತರ ಆಕ್ರಂದನ ಇಂದಿಗೂ ಕರಳು ಚುರುಕಿಸುವಂತೆ ಮಾಡುತ್ತದೆ.
ಪುನರ್ವಸತಿ ಟೌನ್ಶಿಪ್ ನಿರ್ಮಾಣಕ್ಕೆ ವೇಗಸಂತ್ರಸ್ತ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಕೇರಳ ಸರ್ಕಾರವು ಕಲ್ಪೆಟ್ಟಾದ ಎಲ್ಸ್ಟೋನ್ ಎಸ್ಟೇಟ್ನಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ವಿಶೇಷ ಪುನರ್ವಸತಿ ಟೌನ್ಶಿಪ್ ಅನ್ನು ನಿರ್ಮಿಸುತ್ತಿದೆ. ಈಗಾಗಲೇ ಮೊದಲ ಹಂತದಲ್ಲಿ ನೂರಾರು ಫಲಾನುಭವಿಗಳಿಗೆ ಹೊಸ ಮನೆಗಳ ಕೀಲಿಕೈಗಳನ್ನು ಹಸ್ತಾಂತರಿಸಲಾಗಿದೆ. ಇದರೊಂದಿಗೆ ವಸತಿ ಪ್ರದೇಶದಲ್ಲಿ ಆರೋಗ್ಯ ಕೇಂದ್ರಗಳು, ಅಂಗನವಾಡಿ, ಆಟದ ಮೈದಾನ ಹಾಗೂ ಸಾರ್ವಜನಿಕ ಮಾರುಕಟ್ಟೆ ನಿರ್ಮಾಣ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಇನ್ನೂ ಆರದ ನೋವು ಮತ್ತು ಸುರಕ್ಷತೆಯ ಸವಾಲುಗಳುಮನೆಗಳನ್ನು ಕಳೆದುಕೊಂಡವರಿಗೆ ಹೊಸ ಆಶ್ರಯ ಸಿಕ್ಕಿದ್ದರೂ, ಅಂದು ಕಳೆದುಕೊಂಡ ಆಪ್ತರ ಅಗಲಿಕೆಯ ನೋವು ಮತ್ತು ಪ್ರಾಕೃತಿಕ ವಿಕೋಪದ ಭೀತಿ ಸ್ಥಳೀಯರನ್ನು ಕಾಡುತ್ತಲೇ ಇದೆ. ಮಳೆಗಾಲ ಆರಂಭವಾದರೆ ಸಾಕು, ಇಂದಿಗೂ ಆತಂಕದಲ್ಲೇ ದಿನ ಕಳೆಯುವಂತಾಗಿದೆ ಎಂದು ಸಂತ್ರಸ್ತರು ತಮ್ಮಳಲು ತೋಡಿಕೊಳ್ಳುತ್ತಾರೆ. ಮತ್ತೊಂದೆಡೆ, ಎರಡನೇ ಹಂತದ ಪುನರ್ವಸತಿ ಕೆಲಸಗಳನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸ್ಥಳೀಯ ಸಮಿತಿಗಳು ಮತ್ತು ಸಂತ್ರಸ್ತರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.