ದಿಲ್ಲಿಯಲ್ಲಿ ಐಎಸ್ಐ ಬೆಂಬಲಿತ ಉಗ್ರ ಸಂಚು ಭೇದಿಸಿದ ಪೊಲೀಸ್: ಶಹಝಾದ್ ಭಟ್ಟಿ ಇಬ್ಬರು ಶೂಟರ್ಗಳ ಬಂಧನ

ಹೊಸದಿಲ್ಲಿ : ಪಾಕಿಸ್ತಾನದ ಮೂಲದ ಭೂಗತ ಪಾತಕಿ ಹಾಗೂ ಐಎಸ್ಐ ಪರ ಕೆಲಸ ಮಾಡುತ್ತಿರುವ ಶಹಝಾದ್ ಭಟ್ಟಿ ಆಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರನ್ನು ದಿಲ್ಲಿ ಪೊಲೀಸ್ನ ವಿಶೇಷ ಘಟಕ ಬಂಧಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಇದರೊಂದಿಗೆ ದಿಲ್ಲಿ-ಎನ್ಸಿಆರ್ ವಲಯದಲ್ಲಿ ಗುಂಡಿನ ದಾಳಿ, ಗ್ರೆನೇಡ್ ದಾಳಿ ಮತ್ತು ನಿರ್ದಿಷ್ಟ ವ್ಯಕ್ತಿಗಳನ್ನು ಗುರಿಯಾಗಿರಿಸಿ ಹತ್ಯೆಗೈಯುವ ಕ್ರಿಮಿನಲ್ ಪಿತೂರಿಯನ್ನು ಪೊಲೀಸರು ಬಯಲಿಗೆಳೆದಿದ್ದಾರೆ.
ಬಂಧಿತ ಆರೋಪಿಗಳನ್ನು ರಾಜ್ವೀರ್ (21) ಹಾಗೂ ವಿವೇಕ್ ಬಂಜಾರ (19) ಎಂದು ಗುರುತಿಸಲಾಗಿದೆ. ಇಬ್ಬರೂ ಮಧ್ಯಪ್ರದೇಶದ ಗ್ವಾಲಿಯರ್ನ ನಿವಾಸಿಗಳು.

“ಇವರ ಬಂಧನ ದಿಲ್ಲಿ ಹಾಗೂ ಸಮೀಪದ ಪ್ರದೇಶಗಳಲ್ಲಿ ದಾಳಿಯ ಯೋಜನೆಯನ್ನು ವಿಫಲಗೊಳಿಸಿದೆ. ಈ ಬಂಧನಗಳಿಂದ ಭಟ್ಟಿ ರೂಪಿಸಿದ್ದ ಅತಿ ದೊಡ್ಡ ಸಂಚು ಬಹಿರಂಗಗೊಂಡಿದೆ. ಭಟ್ಟಿ ಐಎಸ್ಐಗೆ ಸಂಪರ್ಕ ಹೊಂದಿರುವವರೊಂದಿಗೆ ಸೇರಿ ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದ. ಅವರನ್ನು ದಿಲ್ಲಿ-ಎನ್ಸಿಆರ್ನಲ್ಲಿ ಹಿಂಸಾಚಾರದ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದ” ಎಂದು ಪೊಲೀಸ್ ಉಪ ಆಯುಕ್ತ (ವಿಶೇಷ ಘಟಕ) ಪ್ರವೀಣ್ ಕುಮಾರ್ ತ್ರಿಪಾಠಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಗ್ರೆನೇಡ್ ದಾಳಿ ಮತ್ತು ಹತ್ಯೆಗಳನ್ನು ನಡೆಸುವ ಬಗ್ಗೆ ಮಾಹಿತಿ ಬಂದ ನಂತರ ಮಾರ್ಚ್ 31ರಂದು ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.