ಕೊಪ್ಪಳದಲ್ಲಿ ಕಾಂಗ್ರೆಸ್ ಕಚೇರಿ ಗಲಾಟೆ: ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮೊದಲ ಆರೋಪಿ

ಕೊಪ್ಪಳ: ಕಾಂಗ್ರೆಸ್ ಕಚೇರಿ ಮುಂದೆ ಗಲಾಟೆ ಮಾಡಿ ಕಲ್ಲು ಎಸೆದ ಘಟನೆಗೆ ಸಂಬಂಧಿಸಿದಂತೆ ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ಗುರುವಾರ 16 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ.ಗುತ್ತಿಗೆದಾರ ಕಾಂಗ್ರೆಸ್ ಪಕ್ಷದ ಮುಖಂಡ ಮಲ್ಲಿಕಾರ್ಜುನ ಪೂಜಾರ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.
ಬಿಜೆಪಿಯ ಪ್ರಮುಖರಾದ ಜಯಶ್ರೀ ಆರೇರ, ವಾಣಿಶ್ರೀ ಮಠದ, ಅಂದಪ್ಪ ಯಮ್ಮನವರ, ಚನ್ನಬಸವರಾಜ ಗಾಳಿ, ದೀಪಕ್ ಭಾಟಿಯಾ, ರವಿಚಂದ್ರ ಮಾಲಿಪಾಟೀಲ, ಪ್ರಶಾಂತ ಕರುಗಲ್, ಅಶೋಕ ಗುಡದಳ್ಳಿ, ಶೋಭಾ ನಗರಿ, ಪ್ರಭುರಾಜ ಪಾಟೀಲ ಹುಲಗಿ, ಕೀರ್ತಿ ಪಾಟೀಲ, ಮಲ್ಲಮ್ಮ ಬೇವೂರ, ಪುಟ್ಟರಾಜ್ ಚೆಕ್ಕಿ, ವೀಣಾ ಬನ್ನಿಗೋಳ, ಮಧುಶ್ರೀ ಅವರ ವಿರುದ್ಧ ದೂರು ದಾಖಲಾಗಿದೆ.
ಆರೋಪಿಗಳು ಹೇಮಲತಾ ನಾಯಕ ಅವರ ನೇತೃತ್ವದಲ್ಲಿ ಗುಂಪು ಕಟ್ಟಿಕೊಂಡು ಬಂದು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ನುಗ್ಗಿ ಕಚೇರಿಯ ಗೇಟ್ ಹಾಗೂ ಗ್ಲಾಸ್ಗಳನ್ನು ಹೊಡೆದು ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿ ಹಾಳು ಮಾಡಿದ್ದಾರೆ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ.ಮೊಳಗಿದ ಘೋಷಣೆ: ಎಫ್ಐಆರ್ ದಾಖಲಾಗುವ ಮೊದಲು ಕಾಂಗ್ರೆಸ್ ಮುಖಂಡರು ನಗರ ಪೊಲೀಸ್ ಠಾಣೆಗೆ
ತೆರಳಿ ಡಿವೈಎಸ್ಪಿ ಮುತ್ತಣ್ಣ ಸವರಗೋಳ ಅವರಿಗೆ ದೂರು ಸಲ್ಲಿಸಿದರು. ಠಾಣೆಯ ಮುಂದೆ ಕುಳಿತು ಬಿಜೆಪಿ ಹಾಗೂ ಹೇಮಲತಾ ನಾಯಕ ವಿರುದ್ಧ ಘೋಷಣೆ ಕೂಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ನ ಬ್ಲಾಕ್ ಘಟಕದ ಅಧ್ಯಕ್ಷ ಕೃಷ್ಣ ಗಲಬಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಗೊಂಡಬಾಳ, ನಗರ ಘಟಕದ ಅಧ್ಯಕ್ಷ ಕಾಟನ್ ಪಾಷಾ, ಮುಖಂಡರಾದ ಅಕ್ಷರಪಾಷಾ ಪಲ್ಟನ್, ಮಲ್ಲಿಕಾರ್ಜುನ ಪೂಜಾರ, ಮಂಜುನಾಥ ಗೊಂಡಬಾಳ, ಸುರೇಶ ದಾಸರಡ್ಡಿ, ಪದ್ಮಾವತಿ ಕಂಬಳಿ, ಸಲೀಂ ಗೊಂಡಬಾಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
