ಬೆಂಗಳೂರು: ಅಳುತ್ತಿದ್ದ 11 ತಿಂಗಳ ಮಗುವನ್ನು ಕಾಲಿನಿಂದ ಒದ್ದು, ನೆಲಕ್ಕೆ ಅಪ್ಪಳಿಸಿ ಕೊಂದ ಪಾಪಿ ಪೋಷಕರು!

ಬೆಂಗಳೂರು : ಜಗಳದ ನಡುವೆ ಅಳುತ್ತಿದ್ದ 11 ತಿಂಗಳ ಹೆಣ್ಣು ಮಗುವಿಗೆ ಕಾಲಿನಿಂದ ಒದ್ದು, ಬಲವಾಗಿ ನೆಲಕ್ಕೆ ಎಸೆದು ಭೀಕರವಾಗಿ ಕೊಲೆ ಮಾಡಿರುವ ಅತ್ಯಂತ ಪೈಶಾಚಿಕ ಘಟನೆ ಪೂರ್ವ ಬೆಂಗಳೂರಿನ ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿತಗಾನೂರು ಗ್ರಾಮದಲ್ಲಿ ಜರುಗಿದೆ. ಕೃತ್ಯ ಎಸಗಿದ ಬಳಿಕ ಮಗು “ಹಾಸಿಗೆಯಿಂದ ಬಿದ್ದು ಸಾನ್ನಪ್ಪಿದೆ” ಎಂದು ಕಟ್ಟುಕಥೆ ಕಟ್ಟಿ ಪೊಲೀಸರ ಹಾದಿ ತಪ್ಪಿಸಲು ಯತ್ನಿಸಿದ್ದ ಪಾಪಿ ತಂದೆ-ತಾಯಿಯನ್ನು ಅವಲಹಳ್ಳಿ ಪೊಲೀಸರು ಮರಣೋತ್ತರ ಪರೀಕ್ಷೆಯ (Post-Mortem) ವರದಿ ಆಧಾರದ ಮೇಲೆ ಕೊಲೆ ಆರೋಪದಡಿ ಬಂಧಿಸಿದ್ದಾರೆ. ಬಂಧಿತರನ್ನು ಕಿತಗಾನೂರು ಗ್ರಾಮದ ನಿವಾಸಿಗಳಾದ ಶೇಖಪ್ಪ (ತಂದೆ) ಹಾಗೂ ವಿಜಯಲಕ್ಷ್ಮಿ (ತಾಯಿ) ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಜೂನ್ 9ರಂದು ಈ ಘಟನೆ ನಡೆದಿತ್ತು. ಅಂದು ಮಗು ಅಸ್ವಸ್ಥಗೊಂಡಿದೆ ಎಂದು ಪೋಷಕರು ಪೂರ್ವ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ವೈದ್ಯರು ಮಗು ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದರು. ಈ ವೇಳೆ ತಂದೆ ಶೇಖಪ್ಪ ಪೊಲೀಸರಿಗೆ ದೂರು ನೀಡಿ, “ನನ್ನ ಪತ್ನಿ ವಿಜಯಲಕ್ಷ್ಮಿ ಮಗುವಿಗೆ ಹಾಲುಣಿಸುವಾಗ ನಿದ್ರೆಗೆ ಜಾರಿದ್ದಾಳೆ. ಈ ವೇಳೆ ಮಗು ಆಕಸ್ಮಿಕವಾಗಿ ಹಾಸಿಗೆಯಿಂದ ಕೆಳಗೆ ಬಿದ್ದು ಮೃತಪಟ್ಟಿದೆ” ಎಂದು ಸುಳ್ಳು ಕಥೆ ಹೇಳಿದ್ದನು. ಪೊಲೀಸರು ಆರಂಭದಲ್ಲಿ ಇದನ್ನು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು.
ಜೂನ್ 22ರಂದು ಬಂದ ಮಗುವಿನ ಮರಣೋತ್ತರ ಪರೀಕ್ಷೆಯ ವರದಿಯು ಪೊಲೀಸರಿಗೆ ಭಾರಿ ಆಘಾತ ನೀಡಿದೆ. ಮಗುವಿನ ದೇಹದ ಒಳಾಂಗಣದಲ್ಲಿ ತೀವ್ರ ರಕ್ತಸ್ರಾವವಾಗಿದ್ದು, ಉಸಿರಾಟದ ತೊಂದರೆಯಿಂದ ಸಾವು ಸಂಭವಿಸಿದೆ ಎಂದು ವರದಿ ಹೇಳಿತ್ತು. ಅಷ್ಟೇ ಅಲ್ಲದೆ, ಮಗುವಿನ ಮುಖ, ಎದೆ, ಕಾಲುಗಳು ಹಾಗೂ ಖಾಸಗಿ ಅಂಗಗಳ ಮೇಲೂ ಹಲವು ಗಾಯದ ಗುರುತುಗಳಿರುವುದು ಪತ್ತೆಯಾಗಿತ್ತು. ತನಿಖಾಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಮಗು ಬಿದ್ದಿದೆ ಎನ್ನಲಾದ ಹಾಸಿಗೆಯ ಎತ್ತರ ಕೇವಲ ಎರಡು ಅಡಿ ಮಾತ್ರವಿತ್ತು. ಅಷ್ಟು ಸಣ್ಣ ಎತ್ತರದಿಂದ ಬಿದ್ದರೆ ಒಳಾಂಗಣ ರಕ್ತಸ್ರಾವ ಹಾಗೂ ದೇಹದ ತುಂಬೆಲ್ಲಾ ಗಾಯಗಳಾಗಲು ಸಾಧ್ಯವೇ ಇಲ್ಲ ಎಂಬುದನ್ನು ಮನಗಂಡ ಪೊಲೀಸರು ಹೆತ್ತವರನ್ನು ಸ್ಟೇಷನ್ನಲ್ಲಿ ತೀವ್ರ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಂದಿದೆ.
ಜೂನ್ 9ರಂದು ಮಧ್ಯಾಹ್ನ ಊಟದ ಸಮಯದಲ್ಲಿ ಶೇಖಪ್ಪ ಮತ್ತು ವಿಜಯಲಕ್ಷ್ಮಿ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಮಗು ಜೋರಾಗಿ ಅಳಲು ಪ್ರಾರಂಬಿಸಿದಾಗ, ಕೋಪದ ಉತ್ತುಂಗಕ್ಕೇರಿದ ತಾಯಿ ವಿಜಯಲಕ್ಷ್ಮಿ ಹೆತ್ತ ಮಗುವಿಗೆ ಕಾಲಿನಿಂದ ಜೋರಾಗಿ ಒದ್ದಿದ್ದಾಳೆ. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ತಂದೆ ಶೇಖಪ್ಪ, ಮಗುವನ್ನು ಎತ್ತಿ ಬಲವಾಗಿ ನೆಲಕ್ಕೆ ಅಪ್ಪಳಿಸಿದ್ದಾನೆ. ತೀವ್ರವಾಗಿ ಒಳಾಂಗದ ಗಾಯಗಳಿಗೆ ತುತ್ತಾದ ಕಂದಮ್ಮ ಕೊನೆಯುಸಿರೆಳೆದಿತ್ತು. ತನಿಖೆಯ ವೇಳೆ ತಾಯಿ ವಿಜಯಲಕ್ಷ್ಮಿಗೆ ಪಕ್ಕದ ಮನೆಯ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧವಿತ್ತು ಎಂಬ ಗಂಭೀರ ಆರೋಪಗಳೂ ಕೇಳಿಬಂದಿದ್ದು, ಹೆತ್ತ ಕಂದಮ್ಮನನ್ನು ರಾಕ್ಷಸರಂತೆ ಕೊಂದ ಈ ಪಾಪಿ ಪೋಷಕರನ್ನು ಪೊಲೀಸರು ಕಠಿಣ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.