ಮಂಗಳೂರು: ಸೌದಿ ಅರೇಬಿಯಾದಲ್ಲಿ ಕುತ್ತಾರುವಿನ ಕನ್ನಡಿಗ ಯುವಕ ಹೃದಯಾಘಾತದಿಂದ ಸಾ*ವು – ಬೆಚ್ಚಿಬಿದ್ದ ಕುಟುಂಬ!

ಉಳ್ಳಾಲ : ಐದು ತಿಂಗಳ ಹಿಂದಷ್ಟೇ ಕೆಲಸಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದ ಮಂಗಳೂರು ಸಮೀಪದ ಕುತ್ತಾರು ನಿವಾಸಿ, ಅವಿವಾಹಿತ ಯುವಕನೋರ್ವ ಮಂಗಳವಾರ ಬೆಳಿಗ್ಗೆ ತಾನು ತಂಗಿದ್ದ ಕೊಠಡಿಯಲ್ಲೇ ದಿಢೀರನೆ ಮೃತಪಟ್ಟ ಘಟನೆ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯಂತೆ ಯುವಕ ಹೃದಯಾಘಾತದಿಂದ (Heart Attack) ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಕುತ್ತಾರುವಿನ ಕೊರಗಜ್ಜನ ಆದಿ ಕ್ಷೇತ್ರದ ಬಳಿಯ ನಿವಾಸಿ ಶರತ್ ಕುಮಾರ್ (35) ಮೃತಪಟ್ಟ ದುರದೃಷ್ಟಕರ ಯುವಕ.

ಶರತ್ ಅವರು ಕೇವಲ ಐದು ತಿಂಗಳ ಹಿಂದಷ್ಟೇ ಸೌದಿ ಅರೇಬಿಯಾಕ್ಕೆ ತೆರಳಿದ್ದು, ಅಲ್ಲಿನ ಕನ್ಸ್ಟ್ರಕ್ಷನ್ ಕಂಪನಿಯೊಂದರಲ್ಲಿ ಸೂಪರ್ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಅವರು ತಮಿಳುನಾಡು ಮೂಲದ ಸಹೋದ್ಯೋಗಿ ಮಿತ್ರನ ಜೊತೆಗೆ ಕಂಪನಿಯ ಕೊಠಡಿಯಲ್ಲಿ ಉಳಿದುಕೊಂಡಿದ್ದರು. ಸೋಮವಾರ ರಾತ್ರಿ 11 ಗಂಟೆಯ ಸುಮಾರಿಗೆ ಕೊಠಡಿ ಸಹವರ್ತಿ ಬಂದಾಗ ಶರತ್ ಮಲಗಿದ್ದರು. ಮಂಗಳವಾರ ಬೆಳಿಗ್ಗೆ ಕೆಲಸಕ್ಕೆ ಬೇಗನೆ ತೆರಳಬೇಕಿದ್ದ ಕಾರಣ ಶರತ್ ಅಲಾರಾಂ ಇಟ್ಟು ಮಲಗಿದ್ದರು. ಬೆಳಿಗ್ಗೆ ಅಲಾರಾಂ ಸದ್ದು ಬಾರಿಸಿದರೂ ಶರತ್ ಎದ್ದೇಳಲಿಲ್ಲ. ಅನುಮಾನಗೊಂಡು ಕೊಠಡಿ ಸಹವರ್ತಿ ಪರಿಶೀಲಿಸಿದಾಗ ಶರತ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಶರತ್ ಅವರು ಸೋಮವಾರ ತಡರಾತ್ರಿವರೆಗೂ ಮಂಗಳೂರಿನಲ್ಲಿದ್ದ ತಮ್ಮ ಅಣ್ಣನ ಜೊತೆ ಫೋನ್ನಲ್ಲಿ ಮಾತನಾಡಿದ್ದರು ಎನ್ನಲಾಗಿದೆ. ಆದರೆ ಬೆಳಗಾಗುವುದರೊಳಗೆ ಈ ದುರಂತ ಸಂಭವಿಸಿದ್ದು, ಕುಟುಂಬಸ್ಥರಿಗೆ ಹಾಗೂ ಬಂಧು-ಮಿತ್ರರಿಗೆ ಭಾರಿ ಆಘಾತ ಉಂಟುಮಾಡಿದೆ. ಮೃತದೇಹವನ್ನು ಪ್ರಸ್ತುತ ಮರಣೋತ್ತರ ಪರೀಕ್ಷೆಗಾಗಿ ಸೌದಿಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಾಥಮಿಕ ವರದಿಗಳ ಪ್ರಕಾರ ಹೃದಯಾಘಾತವೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಮೃತದೇಹವನ್ನು ತಾಯ್ನಾಡಿಗೆ ತರಲು ಬೇಕಾದ ಪ್ರಕ್ರಿಯೆಗಳನ್ನು ಸಂಬಂಧಿಕರು ಹಾಗೂ ಅನಿವಾಸಿ ಕನ್ನಡಿಗರು ನಡೆಸುತ್ತಿದ್ದಾರೆ. ಮೃತ ಶರತ್ ಕುಮಾರ್ ಅವರು ತಾಯಿ ಹಾಗೂ ಏಕೈಕ ಅಣ್ಣನನ್ನು ಅಗಲಿದ್ದಾರೆ.