ಉಡುಪಿ: ಕ್ರೇನ್ಗೆ ಬೊಲೊರೊ ಕಾರು ಹಿಂಭಾಗದಿಂದ ಢಿಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಚಾಲಕ ಸಾ*ವು!

ಉಡುಪಿ : ಕಟಪಾಡಿ ಕಡೆಯಿಂದ ಕುಂದಾಪುರದತ್ತ ತೆರಳುತ್ತಿದ್ದ ಬೊಲೊರೊ ಕಾರೊಂದು ಕ್ರೇನ್ಗೆ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ, ತೀವ್ರವಾಗಿ ಗಾಯಗೊಂಡಿದ್ದ ಕಾರು ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿಯ ಅಂಬಲಪಾಡಿಯ ಪೆಟ್ರೋಲ್ ಬಂಕ್ ಬಳಿ ಸೆಪ್ಟೆಂಬರ್ 7ರಂದು ಸಂಭವಿಸಿದೆ. ಕುಂದಾಪುರ ತಾಲೂಕಿನ ಕಂಡ್ಲೂರು ನಿವಾಸಿ ನಿಸಾರ್ ಅಹ್ಮದ್ (39) ಅಪಘಾತದಲ್ಲಿ ಕೊನೆಯುಸಿರೆಳೆದ ದುರ್ದೈವಿ.

ನಿಸಾರ್ ಅಹ್ಮದ್ ಅವರು ತಮ್ಮ ಪರಿಚಯಸ್ಥರ ಜೊತೆ ಬೊಲೊರೊ ಕಾರಿನಲ್ಲಿ ಕಟಪಾಡಿ ಕಡೆಯಿಂದ ಕುಂದಾಪುರಕ್ಕೆ ಸಾಗುತ್ತಿದ್ದರು. ಕಾರು ಅಂಬಲಪಾಡಿ ಜಂಕ್ಷನ್ ಬಳಿಯ ಪೆಟ್ರೋಲ್ ಬಂಕ್ ಸಮೀಪ ತಲುಪಿದಾಗ, ಸರ್ವಿಸ್ ರಸ್ತೆಯಿಂದ ಮುಖ್ಯ ರಸ್ತೆಗೆ ಬಂದು ಸಂತೆಕಟ್ಟೆ ಕಡೆಗೆ ಸಾಗುತ್ತಿದ್ದ ಕ್ರೇನ್ಗೆ ಚಾಲಕನ ನಿಯಂತ್ರಣ ತಪ್ಪಿದ ಬೊಲೊರೊ ಕಾರು ಹಿಂಭಾಗದಿಂದ ಭೀಕರವಾಗಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು , ನಿಸಾರ್ ಅಹ್ಮದ್ ಹಾಗೂ ನಾಗರಾಜ್ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಸ್ಥಳೀಯರು ಇಬ್ಬರನ್ನೂ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಈ ಪೈಕಿ ನಾಗರಾಜ್ ಅವರು ಚಿಕಿತ್ಸೆಗೆ ಸ್ಪಂದಿಸಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆದರೆ, ತೀವ್ರ ಗಾಯಗೊಂಡಿದ್ದ ನಿಸಾರ್ ಅಹ್ಮದ್ ಅವರ ಪರಿಸ್ಥಿತಿ ಚಿಂತಾಜನಕವಾಗಿದ್ದರಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಸಾರ್ ಅಹ್ಮದ್ ಕೊನೆಯುಸಿರೆಳೆದಿದ್ದಾರೆ. ಘಟನೆ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.