ಕಲಬೆರಕೆ ಎಣ್ಣೆ ಮಾರಾಟಕ್ಕೆ ಕಡಿವಾಣ: ಲೂಸ್ ಅಡುಗೆ ಎಣ್ಣೆ ಮಾರಾಟ ಸಂಪೂರ್ಣ ನಿಷೇಧಿಸಲು ಸರ್ಕಾರದ ಚಿಂತನೆ!

ಬೆಂಗಳೂರು: ಕಲಬೆರಕೆ ಅಡುಗೆ ಎಣ್ಣೆ ಮಾರಾಟದ ವಿರುದ್ಧ ಆಹಾರ ಸುರಕ್ಷತಾ ಇಲಾಖೆ ಸಮರ ಸಾರಿದೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಲೂಸ್ ಅಡುಗೆ ಎಣ್ಣೆ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ.

ಲೂಸ್ ಎಣ್ಣೆಯಲ್ಲಿ ಕಲಬೆರಕೆ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಅದಕ್ಕೆ ಕಡಿವಾಣ ಹಾಕಲು ಮಾಸ್ಟರ್ ಪ್ಲಾನ್ ರೂಪಿಸಲಾಗುತ್ತಿದೆ. ಈ ಸಂಬಂಧ ಆಹಾರ ಸುರಕ್ಷತಾ ಸಚಿವ ಯು.ಟಿ. ಖಾದರ್ ಅವರು ಅಧಿಕಾರಿಗಳ ಸಮಿತಿ ರಚಿಸುವಂತೆ ಸೂಚನೆ ನೀಡಿದ್ದಾರೆ. ಸಮಿತಿ ನೀಡುವ ವರದಿಯ ಆಧಾರದ ಮೇಲೆ ಲೂಸ್ ಎಣ್ಣೆ ಮಾರಾಟದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.ಲೂಸ್ ಅಡುಗೆ ಎಣ್ಣೆಯ ಗುಣಮಟ್ಟ, ಮೂಲ ಮತ್ತು ಮಾರಾಟ ವ್ಯವಸ್ಥೆ ಕುರಿತು ಅಧಿಕಾರಿಗಳು ಕಟ್ಟುನಿಟ್ಟಿನ ನಿಗಾ ವಹಿಸಲಿದ್ದಾರೆ. ಅಗ್ಗದ ದರದಲ್ಲಿ ಮಾರಾಟವಾಗುವ ಎಣ್ಣೆಯಲ್ಲಿ ಕಲಬೆರಕೆ ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ತಪಾಸಣೆ ನಡೆಸಲಾಗುವುದು. ಅನುಮಾನಾಸ್ಪದ ಎಣ್ಣೆಯ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿ ಆಧರಿಸಿ ಕಲಬೆರಕೆ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.ಇದರ ಜತೆಗೆ ಹೋಟೆಲ್ಗಳು ಮತ್ತು ಕ್ಲಬ್ಗಳ ಅಡುಗೆಮನೆಗಳ ಸ್ವಚ್ಛತೆ ಹಾಗೂ ಆಹಾರ ಸುರಕ್ಷತಾ ಮಾನದಂಡಗಳ ಮೇಲೂ ಇಲಾಖೆ ಗಮನ ಹರಿಸಿದೆ. ಅಡುಗೆಮನೆಗಳಲ್ಲಿ ಶುಚಿತ್ವ ಮತ್ತು ಹೈಜೀನ್ ಕಾಪಾಡಿಕೊಳ್ಳಲು ಸಂಬಂಧಪಟ್ಟ ಸಂಸ್ಥೆಗಳಿಗೆ 15 ದಿನಗಳ ಗಡುವು ನೀಡಲಾಗಿದೆ. ಈ ಅವಧಿಯಲ್ಲಿ ಅಗತ್ಯ ಸುಧಾರಣೆ ಮಾಡಿಕೊಳ್ಳದ ಹೋಟೆಲ್ಗಳು ಹಾಗೂ ಕ್ಲಬ್ಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಚಿವ ಯು.ಟಿ. ಖಾದರ್ ಎಚ್ಚರಿಕೆ ನೀಡಿದ್ದಾರೆ. ಕಲಬೆರಕೆ ಎಣ್ಣೆ ಮಾಫಿಯಾಗೆ ಕಡಿವಾಣ ಹಾಕುವುದರ ಜೊತೆಗೆ, ಸಾರ್ವಜನಿಕರಿಗೆ ಸುರಕ್ಷಿತ ಆಹಾರ ಒದಗಿಸುವ ನಿಟ್ಟಿನಲ್ಲಿ ತಪಾಸಣೆ ಮತ್ತಷ್ಟು ಚುರುಕುಗೊಳ್ಳಲಿದೆ.