ಕದ್ರಿ ಶ್ರೀ ಯೋಗೇಶ್ವರ ಮಠದಲ್ಲಿ ವೈಭವದ ‘ಶ್ರೀಮದ್ ಲಕ್ಷ್ಮೀನಾರಾಯಣ ಮಹಾಯಾಗ’ ಆರಂಭ!

ಮಂಗಳೂರು: ನಗರದ ಕದ್ರಿ ಮರದ ಶ್ರೀ ಯೋಗೇಶ್ವರ ಮಠದಲ್ಲಿ ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಳ್ಳಲಾಗಿರುವ ಐದು ದಿನಗಳ ಬೃಹತ್ ‘ಶ್ರೀಮದ್ ಲಕ್ಷ್ಮೀನಾರಾಯಣ ಮಹಾಯಾಗ’ಕ್ಕೆ ಇಂದು ವಿಧ್ಯುಕ್ತ ಚಾಲನೆ ದೊರೆತಿದೆ. ಈ ಧಾರ್ಮಿಕ ಮಹೋತ್ಸವದ ಆರಂಭದ ಅಂಗವಾಗಿ ಇಂದು ಬೆಳಿಗ್ಗೆ ಅದ್ಧೂರಿ ಕಳಶಯಾತ್ರೆ ಜರುಗಿತು.

ಇಂದು (ಆಗಸ್ಟ್ 24) ಬೆಳಿಗ್ಗೆ 8 ಗಂಟೆಗೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಿಂದ ಹೊರಟ ಭವ್ಯ ಕಳಶಯಾತ್ರೆ, ಪ್ರಮುಖ ಬೀದಿಗಳ ಮೂಲಕ ಸಾಗಿ ಕದ್ರಿ ಶ್ರೀ ಯೋಗೇಶ್ವರ ಮಠದ ಆವರಣದಲ್ಲಿ ನಿರ್ಮಿಸಲಾದ ಯಾಗಶಾಲೆಯನ್ನು ತಲುಪಿತು. ನೂರಾರು ಭಕ್ತರು, ಮಹಿಳೆಯರು ಸಾಂಪ್ರದಾಯಿಕ ಉಡುಪಿನಲ್ಲಿ ಪಾಲ್ಗೊಂಡು ಕಳಶ ಹೊತ್ತು ಸಾಗಿದ್ದು ವಿಶೇಷ ಮೆರುಗು ನೀಡಿತು.
ಜಗದಾಚಾರ್ಯ ಸ್ವಾಮಿ ಅಖಿಲೇಶ್ಜೀ ಮಹಾರಾಜ್ ಸೇವಾ ಸಂಸ್ಥಾನ (ರಿ.) ಹಾಗೂ ದ ಸ್ಯಾಫ್ರನ್ ಫ್ರಂಟ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಈ ಮಹಾಯಾಗವನ್ನು ಆಯೋಜಿಸಲಾಗಿದೆ. ಉತ್ತರ ಪ್ರದೇಶದ ವಾರಣಾಸಿಯ (ವಿಂಧ್ಯಾಚಲ) ಪ್ರಸಿದ್ಧ ಪುರೋಹಿತರಾದ ಆಚಾರ್ಯ ಶ್ರೀ ಲವಕುಶ್ ಮಿಶ್ರಾಜಿ ಅವರ ದಿವ್ಯ ಪೌರೋಹಿತ್ಯದಲ್ಲಿ ವೈದಿಕ ವಿಧಿವಿಧಾನಗಳು ಆರಂಭಗೊಂಡಿವೆ.
ಬರುವ ಐದು ದಿನಗಳ ಕಾಲ (ಆಗಸ್ಟ್ 28 ರವರೆಗೆ) ಮಠದ ಆವರಣದಲ್ಲಿ ನಿತ್ಯವೂ ವಿಶೇಷ ಹೋಮ-ಹವನಗಳು, ಜಪ-ತಪ ಹಾಗೂ ಪೂಜಾ ವಿಧಿವಿಧಾನಗಳು ವಿಜೃಂಭಣೆಯಿಂದ ಮುಂದುವರಿಯಲಿವೆ.