ರಾಷ್ಟ್ರೀಯ ಪ್ರಶಸ್ತಿ ಪಡೆದ ನಟಿ ರೂಪಶ್ರೀ ವರ್ಕಾಡಿ ಹರ್ಷ: ‘ಮಿಥ್ಯ’ ಚಿತ್ರದ ಗೆಲುವು ಜೀವನದ ಮರೆಯಲಾರದ ಅನುಭವ!

ಮಂಗಳೂರು : ‘ನನ್ನ ಅಭಿನಯಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಸಿಗುತ್ತದೆ ಎಂಬ ಕಲ್ಪನೆಯೂ ನನಗಿರಲಿಲ್ಲ. ವೃತ್ತಿ ಜೀವನದ ಸಾಕಷ್ಟು ಏಳುಬೀಳುಗಳ ನಡುವೆ ದೊರಕಿರುವ ಈ ಪ್ರಶಸ್ತಿ ಅತ್ಯಂತ ಆನಂದ ತಂದಿದೆ’ ಎಂದು ಕಲಾವಿದೆ ಹಾಗೂ ನಟಿ ರೂಪಶ್ರೀ ವರ್ಕಾಡಿ ಸಂತಸ ಹಂಚಿಕೊಂಡರು.

‘ಮಿಥ್ಯ’ ಕನ್ನಡ ಚಿತ್ರದ ಅಭಿನಯಕ್ಕಾಗಿ ‘ಅತ್ಯುತ್ತಮ ಪೋಷಕ ನಟಿ’ ರಾಷ್ಟ್ರೀಯ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ನಗರದ ಪ್ರೆಸ್ಕ್ಲಬ್ನಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ಸುಮಂತ್ ಭಟ್ ಹಾಗೂ ಇದೇ ಚಿತ್ರಕ್ಕಾಗಿ ‘ಅತ್ಯುತ್ತಮ ಬಾಲನಟ’ ರಾಷ್ಟ್ರೀಯ ಪ್ರಶಸ್ತಿ ಪಡೆದ ಅತೀಶ್ ಅವರೊಂದಿಗೆ ರೂಪಶ್ರೀ ಮಾತನಾಡಿದರು. ‘ಕಳೆದ ಎರಡೂವರೆ ದಶಕಗಳಿಗೂ ಹೆಚ್ಚಿನ ಕಾಲದ ಕಲಾ ಪಯಣದಲ್ಲಿ ಕನ್ನಡ ಹಾಗೂ ತುಳು ಭಾಷೆಗಳ 700ಕ್ಕೂ ಅಧಿಕ ನಾಟಕಗಳಲ್ಲಿ 4 ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡಿದ ಸಾರ್ಥಕತೆ ನನ್ನದಾಗಿದೆ. ರಂಗ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ಬೈಲ್ ಅವರ ‘ಸಂಸಾರದ ಸರ್ಕಸ್’ ನಾಟಕದ ಮೂಲಕ ವೃತ್ತಿಪರ ರಂಗಭೂಮಿಗೆ ಕಾಲಿಟ್ಟ ನಾನು, ಕ್ರಿಸ್ಟಿಫರ್ ನೀನಾಸಂ ಹಾಗೂ ವಿದ್ದು ಉಚ್ಚಿಲ್ ರಂಗಾಯಣ ಅವರಿಂದ ರಂಗ ತರಬೇತಿ ಪಡೆದಿದ್ದೇನೆ’ ಎಂದು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡರು.
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮದ ಹರೀಶ್ ಹಾಗೂ ದಿ. ಹೇಮಾವತಿ ದಂಪತಿಯ ಪುತ್ರಿಯಾಗಿರುವ ರೂಪಶ್ರೀ ಅವರು ತುಳು, ಕನ್ನಡ, ಕೊಂಕಣಿ, ಬ್ಯಾರಿ, ಅರೆಭಾಷೆ ಸೇರಿದಂತೆ ವಿವಿಧ ಭಾಷೆಗಳ 85ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಅಭಿನಯಿಸಿದ್ದ ‘ಬಯಾರಿ’ ಚಿತ್ರಕ್ಕೆ ಸ್ವರ್ಣ ಕಮಲ, ‘ಜೀಟಿಗೆ’ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಹಾಗೂ ‘ಟ್ರಿಪಲ್ ತಲಾಖ್’ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಲಭಿಸಿದೆ.