ಅಂಗನವಾಡಿ ಕೇಂದ್ರದಲ್ಲಿ ಆಟವಾಡುತ್ತಿದ್ದ ಬಾಲಕಿಗೆ ಹಾವು ಕಡಿತ; ಮಗುವಿನ ಸ್ಥಿತಿ ಗಂಭೀರ!

ಸಾಂದರ್ಭಿಕ ಚಿತ್ರ

ಬೆಳ್ತಂಗಡಿ : ಅಂಗನವಾಡಿ ಕೇಂದ್ರದ ಕೊಠಡಿಯೊಳಗೆ ಆಟಿಕೆಗಳ ಮಧ್ಯೆ ಅಡಗಿದ್ದ ವಿಷಕಾರಿ ಹಾವೊಂದು ಆಟವಾಡುತ್ತಿದ್ದ ನಾಲ್ಕು ವರ್ಷದ ಮಗುವಿಗೆ ಕಚ್ಚಿ ಗಂಭೀರವಾಗಿ ಅಸ್ವಸ್ಥಗೊಂಡಿರುವ ಘಟನೆ ಸೌತಡ್ಕ ಸಮೀಪದ ಮಲ್ಲಿಗೆಮಜಲು ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ. ಮಲ್ಲಿಗೆಮಜಲು ಮಸೀದಿಯ ಅಧ್ಯಕ್ಷ ಸಿಯಾಬ್ ಅವರ ಪುತ್ರಿ ಫಾತಿಮತ್ ಸಹದಿಯಾ (4) ಹಾವು ಕಚ್ಚಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿ.
ಮಂಗಳವಾರ ಎಂದಿನಂತೆ ಬಾಲಕಿ ಫಾತಿಮತ್ ಸಹದಿಯಾ ಅಂಗನವಾಡಿ ಕೇಂದ್ರಕ್ಕೆ ಬಂದಿದ್ದಳು. ಕೊಠಡಿಯೊಳಗೆ ಮಕ್ಕಳು ಆಟವಾಡುವ ಪ್ಲಾಸ್ಟಿಕ್ ಆಟಿಕೆ ಸಾಮಗ್ರಿಗಳನ್ನಿಟ್ಟಿದ್ದ ಜಾಗದಲ್ಲಿ ಆಕೆ ಆಟವಾಡುತ್ತಿದ್ದಳು. ಈ ವೇಳೆ ಆಟಿಕೆಗಳ ನಡುವೆ ಅಡಗಿ ಕುಳಿತಿದ್ದ ಹಾವೊಂದು ಬಾಲಕಿಯ ಕೈಗೆ ಕಚ್ಚಿದೆ. ತಕ್ಷಣವೇ ಮಗು ಜೋರಾಗಿ ಅಳಲು ಆರಂಭಿಸಿದೆ. ಮಗುವಿನ ಚೀರಾಟ ಕೇಳಿ ಧಾವಿಸಿ ಬಂದ ಅಂಗನವಾಡಿ ಸಹಾಯಕಿ ಪರಿಶೀಲಿಸಿದಾಗ ಹಾವಿನ ಕಡಿತದ ಗುರುತು ಪತ್ತೆಯಾಗಿದೆ. ತಕ್ಷಣವೇ ಅವರು ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ಪೋಷಕರು ಹಾಗೂ ಸ್ಥಳೀಯರು ಸೇರಿ ತಕ್ಷಣವೇ ಮಗುವನ್ನು ಕೊಕ್ಕಡದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ವೈದ್ಯರ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವಿಷದ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಬಾಲಕಿಯನ್ನು ಮಂಗಳೂರಿನ ಜಿಲ್ಲಾ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಸ್ತುತ ಮಕ್ಕಳ ತೀವ್ರ ನಿಗಾ ಘಟಕದಲ್ಲಿ (ICU) ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.