ಕಲಬುರಗಿ ಜೈಲಿನಿಂದ ಸಿನಿಮೀಯ ಶೈಲಿಯಲ್ಲಿ ಪರಾರಿ: ಮೂವರು ಖತರ್ನಾಕ್ ಕೈದಿಗಳ ಎಸ್ಕೇಪ್!

ಕಲಬುರಗಿ: ಜಿಲ್ಲೆಯ ಕೇಂದ್ರ ಕಾರಾಗೃಹದ ಬ್ಯಾರಕ್ ಕಂಬಿಗಳನ್ನು ಕಟ್ ಮಾಡಿ, ಮೂವರು ಸಜಾ ಕೈದಿಗಳು ಮಂಗಳವಾರ (ಜು 14) ಮುಂಜಾನೆ ಸುಮಾರು 3 ಗಂಟೆಗೆ ಜೈಲಿನ ಕಾಂಪೌಂಡ್ ಗೋಡೆ ಹಾರಿ ಸಿನಿಮೀಯ ಶೈಲಿಯಲ್ಲಿ ಪರಾರಿಯಾಗಿದ್ದಾರೆ.

ಮಸ್ತಾನ್, ಸಂತೋಷ್ ಹಾಗೂ ಸಾಗರ್ ಪರಾರಿಯಾದ ಖತರ್ನಾಕ್ ಕೈದಿಗಳಾಗಿದ್ದು, ಇವರು ಬೀದರ್ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದರು. ಕೈದಿಗಳು ಜೈಲಿನಿಂದ ಹೊರಬಂದು ಬಿಂದಾಸ್ ಆಗಿ ನಡೆದುಕೊಂಡು ಹೋಗಿ ಕಾರ್ ಹತ್ತಿ ಬೀದರ್ ಕಡೆಗೆ ಎಸ್ಕೇಪ್ ಆಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತಪ್ಪಿಸಿಕೊಂಡ ಆರೋಪಿಗಳು ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಮೂಲಕ ಪರಾರಿಯಾಗಿದ್ದರು. ಘಟನೆ ಬೆನ್ನಲ್ಲೇ ಅಲರ್ಟ್ ಆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಕಲಬುರಗಿಯ ಕಪನೂರ ಕೈಗಾರಿಕಾ ಪ್ರದೇಶದಲ್ಲಿ ಒರ್ವ ಆರೋಪಿಯ ಕಾಲಿಗೆ ಗುಂಡು ಹೊಡೆದು ಖೆಡ್ಡಾಗೆ ಕೆಡವಿದ್ದಾರೆ. ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.