“ಅರಸೀಕೆರೆ: ಎಟಿಎಂ ಹಣ ದೋಚಲು ಯತ್ನಿಸಿದ ಆರೋಪಿ ಅರೆಸ್ಟ್; ಸಿನಿಮೀಯ ರೀತಿಯಲ್ಲಿ ದಾಳಿ ನಡೆಸಿದ ಪೊಲೀಸರು!

ಹಾಸನ: ಎಟಿಎಂ ಕೇಂದ್ರದಲ್ಲಿ ಹಣ ಕಳವು ಮಾಡಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ಸಿನಿಮೀಯ ರೀತಿಯಲ್ಲಿ ದಾಳಿ ನಡೆಸಿ, ಓರ್ವ ಆರೋಪಿಯನ್ನು ಬಂಧಿಸಿದ ಘಟನೆ ಅರಸೀಕೆರೆಯಲ್ಲಿ ಶುಕ್ರವಾರ ಮುಂಜಾವ ನಡೆದಿದೆ. ಇನ್ನೋರ್ವ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಅರಸೀಕೆರೆ ನಗರದ ವಾಚನಾಲಯ ರಸ್ತೆಯಲ್ಲಿರುವ ಕರ್ಣಾಟಕ ಬ್ಯಾಂಕ್ ಎಟಿಎಂನಿಂದ ಕಳವಿಗೆ ಯತ್ನ ನಡೆದಿದೆ. ಆವೇಝ್ ಖಾನ್ ಬಂಧಿತ ಆರೋಪಿ. ಆತನ ಸಹಚರ ಸುಹೈಲ್ ಎಂಬಾತ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ: ಶುಕ್ರವಾರ ಬೆಳಗಿನ ಜಾವ ಈ ಘಟನೆ ನಡೆದಿದೆ. ಆರೋಪಿಗಳು ಎಟಿಎಂ ವ್ಯವಸ್ಥೆಯನ್ನು ಹಾನಿಗೊಳಿಸಿ, ಅಲ್ಲಿನ ಸಿಸಿಟಿವಿ ಕ್ಯಾಮರಾಗಳನ್ನು ಧ್ವಂಸಗೊಳಿಸುವ ಮೂಲಕ ಎಟಿಎಂನಲ್ಲಿದ್ದ ಹಣವನ್ನು ದೋಚಲು ಸಂಚು ಯತ್ನಿಸಿದ್ದಾರೆ. ಈ ವೇಳೆ ಎಟಿಎಂ ನಿರ್ವಹಣೆ ಮತ್ತು ಹಣ ತುಂಬುವ ಜವಾಬ್ದಾರಿ ಹೊಂದಿರುವ ಹೈದರಾಬಾದ್ ನ ಎನ್.ಸಿ.ಆರ್. ಕಾರ್ಪೊರೇಶನ್ ಇಂಡಿಯಾ ಪ್ರೈ.ಲಿ. ನಿಯಂತ್ರಣ ಕೇಂದ್ರಕ್ಕೆ ಎಚ್ಚರಿಕೆ ಸಂದೇಶ (Alert) ರವಾನೆಯಾಗಿದೆ.
ಸಂದೇಶ ಗಮನಿಸಿದ ಕಂಪೆನಿಯ ಪ್ರತಿನಿಧಿಗಳು ತಕ್ಷಣವೇ ಅರಸೀಕೆರೆ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಎಟಿಎಂ ಕೇಂದ್ರದ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿ ಆವೇಝ್ ಖಾನ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸುಹೈಲ್ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
