ಹೈದರಾಬಾದ್: 20 ಕೋಟಿ ರೂ. ಅಕ್ರಮ ಆಸ್ತಿ ಸಂಪಾದಿಸಿದ ತಹಶೀಲ್ದಾರ್; ಎಸಿಬಿ ದಾಳಿಯಲ್ಲಿ ಬಯಲಾದ ಭ್ರಷ್ಟಾಚಾರ!

ಹೈದರಾಬಾದ್: ಲಂಚ ಪ್ರಕರಣವೊಂದಕ್ಕೆ ಸಂಬಂಧಿಸಿ ಬಂಧನದಲ್ಲಿರುವ ತೆಲಂಗಾಣದ ಕಂದಾಯ ಇಲಾಖೆಯ ಅಧಿಕಾರಿಣಿಯೊಬ್ಬರು, ನಗದು, ಆಭರಣ ಹಾಗೂ ಆಸ್ತಿಗಳು ಸೇರಿದಂತೆ 20 ಕೋಟಿ ರೂ. ಮೌಲ್ಯದ ಆಕ್ರಮ ಸಂಪತ್ತನ್ನು ಹೊಂದಿರುವುದನ್ನು ಭ್ರಷ್ಟಾಚಾರ ವಿರೋಧಿ ದಳ (ಎಸಿಬಿ)ದ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಶಮೀರ್ಪೇಟ್ನ ಜಂಟಿ ಸಬ್ರಿಜಿಸ್ಟ್ರಾರ್ ಹಾಗೂ ತಹಶೀಲ್ದಾರ್ ಟಿ. ಸುಚರಿತ ಅವರ ನಿವಾಸ ಸೇರಿದಂತೆ ನಾಲ್ಕು ಸ್ಥಳಗಳ ಮೇಲೆ ಎಸಿಬಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಅಧಿಕೃತ ಆದಾಯ ಮೂಲಗಳಿಗಿಂತಲೂ ಅಧಿಕ ಪ್ರಮಾಣದಲ್ಲಿ ಆಕೆ ಆಸ್ತಿ ಹೊಂದಿರುವುದನ್ನು ಪತ್ತೆಹಚ್ಚಿದ್ದಾರೆ. ಲಂಚ ಪ್ರಕರಣವೊಂದಕ್ಕೆ ಸಂಬಂಧಿಸಿ ಸುಚರಿತ ಅವರನ್ನು ಮೇ ತಿಂಗಳಲ್ಲಿ ಬಂಧಿಸಲಾಗಿದ್ದು, ಪ್ರಸಕ್ತ ಅವರನ್ನು ನ್ಯಾಯಾಂಗದ ರಿಮಾಂಡ್ನಲ್ಲಿರಿಸಲಾಗಿದೆ.

ಸುಚರಿತ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ದಳವು ಬುಧವಾರ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿತ್ತು. ಹಿಮಾಯತ್ ನಗರದಲ್ಲಿರುವ ಆಕೆಯ ನಿವಾಸ ಹಾಗೂ ಆಕೆಯ ಬಂಧುಗಳು, ಬೇನಾಮಿ ಅಸ್ತಿ ಮಾಲಕರು ಹಾಗೂ ಸಹಚರರಿಗೆ ಸೇರಿದ ಇತರ ಸ್ಥಳಗಳ ಮೇಲೆ ದಾಳಿ ನಡೆಸಲಾಗಿತ್ತು.
ಸುಚರಿತ ಅವರು ಸಿದ್ದಿಪೇಟ್ ಜಿಲ್ಲೆಯ ಧರ್ಮಕುಂಟ ಗ್ರಾಮದಲ್ಲಿ ಎರಡು ಎಕರೆ ಹಾಗೂ17 ಗುಂಟೆ ಕೃಷಿ ಭೂಮಿ, ನಗರದ ವಿವಿಧ ಸ್ಥಳಗಳಲ್ಲಿ ಮೂರು ಫ್ಲಾಟ್ಗಳು ಹಾಗೂ ಕೀಸಾರಾ ಹಾಗೂ ಖಾನಾಮೆತ್ನಲ್ಲಿ ಎರಡು ನಿವೇಶನಗಳು, 12 ಲಕ್ಷ ರೂ. ನಗದು, ಎರಡು ಕಾರುಗಳು, ಚಿನ್ನ ಹಾಗೂ ವಜ್ರದ ಆಭರಣಗಳು ಹಾಗೂ 38 ಲಕ್ಷ ರೂ. ಮೌಲ್ಯದ ಬ್ಯಾಂಕ್ ಠೇವಣಿಗಳನ್ನು ಕೂಡಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕಚೇರಿಯ ಕೆಲಸ ಮಾಡಿಸಿಕೊಳ್ಳುವುದಕ್ಕಾಗಿ ವ್ಯಕ್ತಿಯೊಬ್ಬರಿಂದ 30 ಲಕ್ಷ ರೂ. ಬೇಡಿಕೆಯೊಡ್ಡಿದ ಹಾಗೂ 2 ಲಕ್ಷ ರೂ.ಗಳ ಭಾಗಶಃ ಪಾವತಿಯನ್ನು ಸ್ವೀಕರಿಸಿದ ಆರೋಪದಲ್ಲಿ ಸುಚರಿತ ಅವರನ್ನು ಮೇ 26ರಂದು ಬಂಧಿಸಲಾಗಿತ್ತು.