ಪವಿತ್ರ ಸ್ಥಳದಲ್ಲಿ ವಿಕೃತ ವರ್ತನೆ: ಜನದಟ್ಟಣೆಯಲ್ಲಿ ಬಳಲುತ್ತಿದ್ದ ಯುವತಿಗೆ ಅಟ್ಟಹಾಸ ಮೆರೆದ ಗುಂಪು!

ಗುವಾಹಟಿ: ಭಕ್ತಿ ಮತ್ತು ಆಧ್ಯಾತ್ಮಿಕತೆಯ ಕೇಂದ್ರವಾಗಬೇಕಿದ್ದ ದೇವಸ್ಥಾನದ ಆವರಣವೊಂದು ಜನರ ವಿಕೃತ ವರ್ತನೆಗೆ ಸಾಕ್ಷಿಯಾಗಿದೆ. ಅಸ್ಸಾಂನ ಗುವಾಹಟಿಯಲ್ಲಿರುವ ಪ್ರಸಿದ್ಧ ಕಾಮಾಕ್ಯ ದೇವಸ್ಥಾನ(Temple)ದ ಆವರಣದಲ್ಲಿ ಯುವಕ-ಯುವತಿ ಮೇಲೆ ಕೆಲವರು ನೀರಿನ ಬಾಟಲಿಗಳನ್ನು ಎಸೆದು, ಹೀಯಾಳಿಸಿ ಅವಮಾನಿಸಿರುವ ಆಘಾತಕಾರಿ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.ಲಭ್ಯವಿರುವ ವರದಿಗಳ ಪ್ರಕಾರ, ವಾರ್ಷಿಕ ‘ಅಂಬುಬಾಚಿ ಮೇಳ’ ನಡೆಯುತ್ತಿರುವುದರಿಂದ ಕಾಮಾಕ್ಯ ದೇವಾಲಯದಲ್ಲಿ ಭಕ್ತರ ಭಾರಿ ಜನಸಂದಣಿ ಇತ್ತು. ಈ ತೀವ್ರ ಜನದಟ್ಟಣೆಯ ನಡುವೆ ಸಿಲುಕಿದ್ದ ಯುವತಿಗೆ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.ತಕ್ಷಣವೇ ಆಕೆ ತನ್ನ ಸ್ನೇಹಿತ ಜನಸಂದಣಿಯಿಂದ ಪಾರಾಗಿ ಸುರಕ್ಷಿತ ಜಾಗಕ್ಕೆ ಹೋಗಲು ಆವರಣದಿಂದ ಹೊರನಡೆಯಲು ಪ್ರಯತ್ನಿಸಿದ್ದಾಳೆ. ಇಬ್ಬರು ಜನಸಂದಣಿಯಿಂದ ಹೊರಬರುತ್ತಿರುವುದನ್ನು ನೋಡಿದ ಗುಂಪಿನಲ್ಲಿದ್ದ ಕೆಲವು ಕಿಡಿಗೇಡಿಗಳು ಯಾವುದೇ ಕಾರಣವಿಲ್ಲದೆ ಅವರ ಮೇಲೆ ಕೂಗಾಡಿ ಹೀಯಾಳಿಸಲು ಆರಂಭಿಸಿದ್ದಾರೆ. ಅಷ್ಟಕ್ಕೇ ನಿಲ್ಲಿಸದ ಕೆಲವರು ಅವರ ಮೇಲೆ ನೀರಿನ ಬಾಟಲಿಗಳನ್ನು ಎಸೆದಿದ್ದಾರೆ. ಇದರಲ್ಲಿ ಒಂದು ನೀರಿನ ಬಾಟಲಿ ನೇರವಾಗಿ ಯುವತಿಗೆ ತಲೆಗೆ ಬಲವಾಗಿ ಬಡಿದಿದೆ.ನೋವು ತಡೆಯಲಾರದೆ ಆ ಯುವತಿ ತಕ್ಷಣವೇ ಗೋಡೆಯ ಮೇಲೆಯೇ ಕುಳಿತು ಕಣ್ಣೀರು ಹಾಕಿದ್ದಾಳೆ. ಆಕೆಯ ಮುಖದಲ್ಲಿದ್ದ ಆಘಾತ ಮತ್ತು ನೋವು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಸ್ನೇಹಿತ ಹತಾಶ ಸ್ಥಿತಿಯಲ್ಲೂ ಆಕೆಯನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.ಭಕ್ತರ ನಡವಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ಒಂದು ಕಡೆ ಭಕ್ತರು ಜಗನ್ಮಾತೆಯ ಆಶೀರ್ವಾದ ಪಡೆಯಲು ಗಂಟೆಗಟ್ಟಲೆ ಕಾಯುತ್ತಾ, ಮತ್ತೊಂದೆಡೆ ಕಣ್ಣೆದುರೇ ಕಷ್ಟದಲ್ಲಿದ್ದ ಇನ್ನೊಬ್ಬ ಯುವತಿಗೆ ಹೀಗೆ ಕ್ರೂರವಾಗಿ ಹೀಯಾಳಿಸಿ ಗಾಯಗೊಳಿಸಿರುವ ವಿರೋಧಾಭಾಸದ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವಸ್ಥಾನದ ಆವರಣದಲ್ಲಿ ಇವರ ಜೊತೆ ಅಸಭ್ಯವಾಗಿ ವರ್ತಿಸಿದವರನ್ನು ಸಿಸಿಟಿವಿ ಮೂಲಕ ತಕ್ಷಣವೇ ಗುರುತಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಅಸ್ಸಾಂ ಸರ್ಕಾರ ಹಾಗೂ ಪೊಲೀಸರನ್ನು ಒತ್ತಾಯಿಸಿದ್ದಾರೆ. ಇನ್ನು ಕೆಲವರು, ಲಕ್ಷಾಂತರ ಜನ ಸೇರುವ ಇಂತಹ ದೊಡ್ಡ ಮೇಳಗಳಲ್ಲಿ ಸೂಕ್ತ ಜನಸಂದಣಿ ನಿರ್ವಹಣೆ ಮತ್ತು ತುರ್ತು ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ದೇವಸ್ಥಾನದ ಮಂಡಳಿಗೆ ಆಗ್ರಹಿಸಿದ್ದಾರೆ.
