ಪ್ರೇಮದ ಹೆಸರಲ್ಲಿ ಕೃತ್ಯ: ಕೆಫೆಯಲ್ಲಿ ಕುಳಿತು ಯೂಟ್ಯೂಬ್ ನೋಡಿ ಉದ್ಯಮಿಯ ಹತ್ಯೆಗೆ ಸ್ಕೆಚ್!

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ನಡೆದ 25 ವರ್ಷದ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal Death) ಅವರ ಭೀಕರ ಕೊಲೆ ಪ್ರಕರಣದಲ್ಲಿ ಪೊಲೀಸರ ತನಿಖೆಯಿಂದ ಅತ್ಯಂತ ಆಘಾತಕಾರಿ ಮತ್ತು ಸಿನಿಮೀಯ ಶೈಲಿಯ ವಿವರಗಳು ಹೊರಬಂದಿವೆ. ಕೇತನ್ ಅವರ ಭಾವಿ ಪತ್ನಿ ಸಿಯಾ ಗೋಯಲ್ ತನ್ನ ಪ್ರೇಮಿ ಚೇತನ್ ಚೌಧರಿ ಜೊತೆ ಸೇರಿ ಪುಣೆಯ ಕೆಫೆಯೊಂದರಲ್ಲಿ ಕಾಫಿ ಡೇಟ್ ಮಾಡುತ್ತಾ ಈ ಕೊಲೆಗೆ ಪಕ್ಕಾ ಪ್ಲಾನ್ ಮಾಡಿದ್ದಳು ಎಂಬುದು ಸಿಸಿಟಿವಿ ದೃಶ್ಯಾವಳಿ ಹಾಗೂ ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ.ಕೇತನ್ನ ಕೊಲೆಗೆ ಜೂನ್ 17ರಂದು ಪುಣೆಯ ಕೆಫೆಯೊಂದರಲ್ಲಿ ಇಬ್ಬರೂ ಒಟ್ಟಿಗೆ ಕುಳಿತು ಸಂಚು ರೂಪಿಸಿದ್ದರು. ಇದಾದ ಮರುದಿನವೇ (ಜೂನ್ 18) ಲೋಹಗಢ್ ಕೋಟೆಯ ಮೇಲೆ ಕರೆದುಕೊಂಡು ಹೋಗಿ, ಕಂದಕಕ್ಕೆ ತಳ್ಳಿ ಕೇತನ್ ಅವರನ್ನು ಕೊಲೆ ಮಾಡಲಾಗಿತ್ತು.ಕೆಫೆ ಡೇಟ್ನಲ್ಲೇ ಕೊಲೆಗೆ ಸಂಚು:
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸಿಯಾ ಗೋಯಲ್ ಮತ್ತು ಆಕೆಯ ಪ್ರೇಮಿ ಚೇತನ್ ಚೌಧರಿ ಜೂನ್ 17ರಂದು ಪುಣೆಯ ಪ್ರಸಿದ್ಧ ಕೆಫೆಯೊಂದರಲ್ಲಿ ಭೇಟಿಯಾಗಿದ್ದರು. ಇದು ಹೊರನೋಟಕ್ಕೆ ಸಾಮಾನ್ಯ ಪ್ರೇಮಿಗಳ ಕಾಫಿ ಡೇಟ್ನಂತೆ ಕಂಡರೂ, ಆ ಸಮಯದಲ್ಲಿ ಅವರಿಬ್ಬರೂ ಚರ್ಚಿಸುತ್ತಿದ್ದುದು ಕೇತನ್ ಅಗರ್ವಾಲ್ ಅವರನ್ನು ಹೇಗೆ ಕೊಲ್ಲಬೇಕು ಎಂಬುದರ ಬಗ್ಗೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಇಬ್ಬರೂ ಕೆಫೆಯಲ್ಲಿ ಕುಳಿತು ಮಾತನಾಡುತ್ತಿರುವ ಸಿಸಿಟಿವಿ ವಿಡಿಯೋ ಕೂಡ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಯೂಟ್ಯೂಬ್ ನೋಡಿ ಸ್ಥಳ ಫೈನಲ್:
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಈ ಕೊಲೆ ಸಂಚಿನಲ್ಲಿ ಸಿಯಾ ಗೋಯಲ್ ಪ್ರಮುಖ ಪಾತ್ರ ವಹಿಸಿದ್ದಳು. ಸಿಯಾ ತನ್ನ ಪ್ರೇಮಿ ಚೇತನ್ ಜೊತೆ ಲೋಹಗಢ್ ಕೋಟೆಯ ಸಂಪೂರ್ಣ ಭೌಗೋಳಿಕ ಮಾಹಿತಿಯನ್ನು ಹಂಚಿಕೊಂಡಿದ್ದಳು. ಆ ಕೋಟೆಯ ಯಾವ ಭಾಗದಿಂದ ತಳ್ಳಿದರೆ ಮನುಷ್ಯ ಬದುಕುಳಿಯಲು ಸಾಧ್ಯವಿಲ್ಲ ಎಂಬುದನ್ನು ಪತ್ತೆಹಚ್ಚಲು ಅವರಿಬ್ಬರೂ ಕೆಫೆಯಲ್ಲೇ ಕುಳಿತು ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಜಾಗವನ್ನು ಫೈನಲ್ ಮಾಡಿದ್ದರು.ಮರುದಿನವೇ ಪ್ಲಾನ್ ಜಾರಿ:
ಕೆಫೆಯಲ್ಲಿ ಸ್ಕೆಚ್ ಹಾಕಿದ ಮರುದಿನವೇ, ಅವರ ಪ್ಲಾನ್ ಪ್ರಕಾರ ಕೇತನ್ ಅಗರ್ವಾಲ್ ಅವರನ್ನು ಲೋಹಗಢ್ ಕೋಟೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಕೇತನ್ ಅವರನ್ನು ಆಳವಾದ ಕಂದಕಕ್ಕೆ ತಳ್ಳಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈಗಾಗಲೇ ಪೊಲೀಸರು ಸಿಯಾ ಗೋಯಲ್ ಮತ್ತು ಆಕೆಯ ಪ್ರೇಮಿ ಚೇತನ್ ಚೌಧರಿಯನ್ನು ಬಂಧಿಸಿದ್ದು, ಕೆಫೆಯ ಸಿಸಿಟಿವಿ ದೃಶ್ಯಾವಳಿ ಹಾಗೂ ಅವರ ಮೊಬೈಲ್ ಹಿಸ್ಟರಿಯನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
