ಪಶ್ಚಿಮ ಬಂಗಾಳ: ಟಿಎಂಸಿ ರೌಡಿ ನಾಯಕ ‘ಪುಷ್ಪಾ’ ಜಹಾಂಗೀರ್ ಖಾನ್ಗೆ ಪೊಲೀಸರ ಶಾಕ್; ಸಾರ್ವಜನಿಕವಾಗಿ ಬಿಗ್ ಪರೇಡ್

ಫಾಲ್ವಾ (ಪಶ್ಚಿಮ ಬಂಗಾಳ): ತೃಣಮೂಲ ಕಾಂಗ್ರೆಸ್ (TMC) ನಾಯಕ ಜಹಾಂಗೀರ್ ಖಾನ್ ನನ್ನು ಸ್ಥಳೀಯ ಪೊಲೀಸರು ರವಿವಾರ ಫಾಲ್ವಾದ ವಿವಿಧ ಪ್ರದೇಶಗಳಲ್ಲಿ ಸಾರ್ವಜನಿಕವಾಗಿ ಪರೇಡ್ ನಡೆಸಿದರು. ಸುಲಿಗೆ, ಕೊಲೆ ಹಾಗೂ ಕ್ರಿಮಿನಲ್ ಬೆದರಿಕೆ ಆರೋಪಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಹಲವು ಪ್ರಕರಣಗಳ ತನಿಖೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ವಾರದೊಳಗೆ ಪೆರೇಡ್ ನಡೆಯುತ್ತಿರುವುದು ಇದು ಎರಡನೇ ಬಾರಿ.
‘ಪುಷ್ಪಾ’ ಎಂಬ ಅಡ್ಡಹೆಸರಿನಿಂದ ಪರಿಚಿತರಾಗಿರುವ ಜಹಾಂಗೀರ್ ಖಾನ್ ನನ್ನು ವಿವಿಧ ಘಟನಾ ಸ್ಥಳಗಳಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೊಗಳಲ್ಲಿ ಕಪ್ಪು ಟಿ-ಶರ್ಟ್ ಮತ್ತು ಶಾರ್ಟ್ಸ್ ಧರಿಸಿದ್ದ ಖಾನ್ ಅವರು ಸ್ಥಳೀಯರ ಎದುರು ಕೈಮುಗಿದು ಕ್ಷಮೆಯಾಚಿಸುತ್ತಿರುವುದು ಕಂಡುಬಂದಿದೆ. ಕೆಲವು ದೃಶ್ಯಗಳಲ್ಲಿ ಅವರು ಕಿವಿ ಹಿಡಿದುಕೊಂಡು ಜನರೊಂದಿಗೆ ಮಾತನಾಡುತ್ತಿರುವುದೂ ಗೋಚರಿಸಿದೆ.
ಈ ಹಿಂದೆ ಜೂನ್ 11ರಂದು ಸಹ ಭಾರೀ ಭದ್ರತೆಯ ನಡುವೆ ಇದೇ ರೀತಿಯ ಕಾರ್ಯಾಚರಣೆ ನಡೆಸಲಾಗಿತ್ತು. ಆಗ ಖಾನ್ ಅವರನ್ನು ಬಿಳಿ ಟಿ-ಶರ್ಟ್ ಮತ್ತು ಶಾರ್ಟ್ಸ್ ಧರಿಸಿ ಫಾಲ್ವಾದ ವಿವಿಧ ಪ್ರದೇಶಗಳಲ್ಲಿ ಕರೆದೊಯ್ಯಲಾಗಿತ್ತು.
ಜೂನ್ 8ರಂದು ನೇಪಾಳ ಗಡಿಗೆ ಸಮೀಪದ ಡಾರ್ಜಿಲಿಂಗ್ ಜಿಲ್ಲೆಯ ಪಾನಿಟಾಂಕಿ ಪ್ರದೇಶದ ಹೋಟೆಲ್ ನಿಂದ ಖಾನ್ ಅವರನ್ನು ಬಂಧಿಸಲಾಗಿತ್ತು. ಎರಡು ದಿನಗಳಿಂದ ಅವರು ಕುಟುಂಬದೊಂದಿಗೆ ಅಲ್ಲಿ ತಲೆಮರೆಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಖಾನ್ ವಿರುದ್ಧ ದಾಖಲಾಗಿದ್ದ ಹಲವು ಎಫ್ಐಆರ್ ಗಳಿಗೆ ಸಂಬಂಧಿಸಿದಂತೆ ಬಲವಂತದ ಕ್ರಮಗಳಿಂದ ನೀಡಲಾಗಿದ್ದ ಮಧ್ಯಂತರ ರಕ್ಷಣೆಯನ್ನು ಕಲ್ಕತ್ತಾ ಹೈಕೋರ್ಟ್ ಹಿಂಪಡೆದ ಬಳಿಕ ಅವರು ನಾಪತ್ತೆಯಾಗಿದ್ದರು. ನಂತರ ಪೊಲೀಸರು ಅವರನ್ನು ಬಂಧಿಸಿದ್ದರು.
ಫಾಲ್ಟಾ ಪೊಲೀಸ್ ಠಾಣೆಯಲ್ಲಿ ಖಾನ್ ವಿರುದ್ಧ ಏಳು ಎಫ್ಐಆರ್ಗಳು ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಡ್ಡಾ ಬೆಂಗಾವಲು ವಾಹನದ ದಾಳಿ ಪ್ರಕರಣ ಮರುತನಿಖೆ
2020ರ ಡಿಸೆಂಬರ್ ನಲ್ಲಿ ಆಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಬೆಂಗಾವಲು ವಾಹನದ ಮೇಲೆ ನಡೆದಿದ್ದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ತನಿಖೆ ಆರಂಭಿಸಲಾಗಿದೆ ಎಂದು ಡೈಮಂಡ್ ಹಾರ್ಬರ್ ಪೊಲೀಸ್ ಮೂಲಗಳು ತಿಳಿಸಿವೆ.
ಈ ಪ್ರಕರಣದ ಎಫ್ಐಆರ್ನಲ್ಲಿ ಆರೋಪಿಯಾಗಿ ಜಹಾಂಗೀರ್ ಖಾನ್ ಹೆಸರೂ ಇದೆ. ಎಫ್ಐಆರ್ನಲ್ಲಿ ಹೆಸರಿಸಲಾದ ಎಲ್ಲರ ಪಾತ್ರವನ್ನು ಮರುಪರಿಶೀಲಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ತಿಂಗಳು ಹೌರಾ ಪೊಲೀಸರು ಮಾಜಿ TMC ನಾಯಕ ಶಮೀಮ್ ಅಹ್ಮದ್, ಮಾಜಿ ಗೃಹರಕ್ಷಕ ದಳದ ಸದಸ್ಯ ಶಾಹಿನ್ ಮೊಲ್ಲಾ ಹಾಗೂ ಸ್ಥಳೀಯ ಆರೋಪಿತ ದರೋಡೆಕೋರ ಆಕಾಶ್ ಸಿಂಗ್ ನನ್ನು ಸಾರ್ವಜನಿಕವಾಗಿ ಮೆರವಣಿಗೆ ನಡೆಸಿದ್ದರು.
ಚುನಾವಣೋತ್ತರ ಹಿಂಸಾಚಾರ, ಸುಲಿಗೆ ಮತ್ತು ಇತರ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಇವರನ್ನು ಕೈಕೋಳ ಹಾಕಿ ಅವರ ನಿವಾಸಗಳಿರುವ ಪ್ರದೇಶಗಳಲ್ಲಿ ಕರೆದೊಯ್ಯಲಾಗಿತ್ತು. ಕೆಲವರನ್ನು ಹಗ್ಗಗಳಿಂದ ಕಟ್ಟಲಾಗಿದ್ದು, ಅವರು ಕೇವಲ ಒಳಉಡುಪು ಮತ್ತು ಬಾಕ್ಸರ್ ಶಾರ್ಟ್ಸ್ ಧರಿಸಿದ್ದರು.