ಕೇರಳಕ್ಕೆ ಮುಂಗಾರು ಮಳೆ ಪ್ರವೇಶ ವಿಳಂಬ; ಕೃಷಿಕರಲ್ಲಿ ಆತಂಕ!

ಕೇರಳ : ಮೇ ತಿಂಗಳ ಕೊನೆಯವಾರದಲ್ಲಿ ಕೇರಳಕ್ಕೆ ಪ್ರವೇಶಿಸಬೇಕಿದ್ದ ಮುಂಗಾರು ಮಳೆ ಈ ಬಾರಿ ಇನ್ನೂ ಎಂಟ್ರಿ ಕೊಟ್ಟಿಲ್ಲ. ಈಗಾಗಲೇ ಎಲ್ ನಿನೋ ಪ್ರಭಾವದಿಂದ ಈ ಬಾರಿ ಮುಂಗಾರು ಮಳೆಯಲ್ಲಿ ಅಭಾವ ಉಂಟಾಗಲಿದೆ ಎಂದು ಹವಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ. ಅದರ ನಡುವೆ ಇನ್ನೂ ಮುಂಗಾರು ಮಳೆ ಎಂಟ್ರಿಕೊಡದೇ ಇರುವುದು ಕೃಷಿಕರಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ.
ಹವಾಮಾನ ಇಲಾಖೆಯ ಇತ್ತೀಚಿನ ಮಾಹಿತಿಯ ಪ್ರಕಾರ, ಮಾನ್ಸೂನ್ ಮಾರುತಗಳು ಅರಬ್ಬಿ ಸಮುದ್ರ, ಲಕ್ಷದ್ವೀಪ ಪ್ರದೇಶ, ಬಂಗಾಳಕೊಲ್ಲಿ ಮತ್ತು ಅಂಡಮಾನ್ ಸಮುದ್ರದ ಪ್ರಮುಖ ಭಾಗಗಳಿಗೆ ಮತ್ತಷ್ಟು ವ್ಯಾಪಿಸಿವೆ. ಸ್ವಲ್ಪ ಸ್ಲೋ ಆಗಿರುವ ಮುಂಗಾರು ಮಾರುತಗಳು ನೈಸರ್ಗಿಕವಾಗಿ ತನ್ನ ವೇಗ ಪಡೆದುಕೊಳ್ಳಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ಮಾರ್ಗ ಮಧ್ಯೆ ಎದುರಾಗಿದ್ದ ಸಾಗರ ಪರಿಸ್ಥಿತಿಗಳು ಮತ್ತು ವಾತಾವರಣದ ಏರುಪೇರುಗಳು ಈಗ ತಿಳಿಯಾಗುತ್ತಿವೆ. ಮುಂದಿನ 2 ರಿಂದ 3 ದಿನಗಳಲ್ಲಿ ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯ ಬಹುತೇಕ ಭಾಗಗಳಿಗೆ ಮಾನ್ಸೂನ್ ಮುನ್ನಡೆಯಲು ಅತ್ಯಂತ ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ. ಪ್ರಸ್ತುತ ಈ ಮಾನ್ಸೂನ್ ವ್ಯವಸ್ಥೆಯು ನೈಋತ್ಯ ಅರಬ್ಬಿ ಸಮುದ್ರದಿಂದ ಹಿಡಿದು ಇಡೀ ಬಂಗಾಳಕೊಲ್ಲಿಯ ಮೂಲಕ ಮ್ಯಾನ್ಮಾರ್ ದೇಶದವರೆಗೆ ವಿಸ್ತರಿಸಿದ್ದು, ಹಿಂದೂ ಮಹಾಸಾಗರ ಪ್ರದೇಶದ ಮೇಲೆ ತನ್ನನ್ನು ತಾನು ಬಲವಾಗಿ ಸಂಘಟಿಸಿಕೊಳ್ಳುತ್ತಿದೆ.
ಹವಾಮಾನ ಇಲಾಖೆಯು ಈ ಹಿಂದೆ ಮೇ 26 ರ ಸುಮಾರಿಗೆ, ಅಂದರೆ ಸಾಮಾನ್ಯ ದಿನಾಂಕಕ್ಕಿಂತ (ಜೂನ್ 1) ಐದು ದಿನ ಮುಂಚಿತವಾಗಿಯೇ ಮಾನ್ಸೂನ್ ಕೇರಳ ಕರಾವಳಿಯನ್ನು ಅಪ್ಪಳಿಸಲಿದೆ ಎಂದು ಮುನ್ಸೂಚನೆ ನೀಡಿತ್ತು. ಆದರೆ, ಬಂಗಾಳಕೊಲ್ಲಿಯಲ್ಲಿ ಇತ್ತೀಚೆಗೆ ಸೃಷ್ಟಿಯಾದ ಚಂಡಮಾರುತದ (Cyclone) ಕಾರಣದಿಂದಾಗಿ ಮಾನ್ಸೂನ್ ಮಾರುತಗಳು ತಾತ್ಕಾಲಿಕವಾಗಿ ದುರ್ಬಲಗೊಂಡಿದ್ದವು. ಹೀಗಾಗಿ ಕೇರಳದಲ್ಲಿ ನಿರಂತರ ಮಳೆ ಚಟುವಟಿಕೆಗಳು ಕಾಣಿಸದೆ ಆಗಮನ ವಿಳಂಬವಾಗಿತ್ತು.
ಆದಾಗ್ಯೂ, ಪ್ರಸ್ತುತ ಕಂಡುಬಂದಿರುವ ಈ ನಿಧಾನಗತಿಯು ದೊಡ್ಡ ಕಳವಳಕಾರಿ ಸಂಗತಿಯೇನಲ್ಲ ಎಂದು ಹವಾಮಾನ ತಜ್ಞರು ಸ್ಪಷ್ಟಪಡಿಸಿದ್ದಾರೆ. ಮಾನ್ಸೂನ್ ಈಗಾಗಲೇ ದಕ್ಷಿಣ ಬಂಗಾಳಕೊಲ್ಲಿ ಮತ್ತು ಅಂಡಮಾನ್ ಸಮುದ್ರದ ಬಹುತೇಕ ಭಾಗಗಳನ್ನು ಆವರಿಸಿದ್ದು, ಈಗ ವಾಯುವ್ಯ ದಿಕ್ಕಿನತ್ತ ವೇಗವಾಗಿ ಚಲಿಸುತ್ತಿದೆ. ಆರಂಭಿಕ ಮುನ್ಸೂಚನೆಗಿಂತ ಸ್ವಲ್ಪ ತಡವಾಗಿದ್ದರೂ, ಪ್ರಸ್ತುತ ಮಾನ್ಸೂನ್ ಚಲನೆ ತನ್ನ ಸಾಮಾನ್ಯ ಮಾರ್ಗಕ್ಕೆ ಅತ್ಯಂತ ಹತ್ತಿರದಲ್ಲಿದೆ.
ಸಾಮಾನ್ಯವಾಗಿ ನೈಋತ್ಯ ಮಾನ್ಸೂನ್ ಜೂನ್ 27 ರ ಸುಮಾರಿಗೆ ದೇಶದ ರಾಜಧಾನಿ ದೆಹಲಿಯನ್ನು ತಲುಪುತ್ತದೆ. ಪ್ರಸ್ತುತ ಹವಾಮಾನ ನಕ್ಷೆಯನ್ನು ಗಮನಿಸಿದರೆ ಜೂನ್ 25 ರಿಂದ 30 ರ ನಡುವೆ ಯಾವುದೇ ದಿನ ದೆಹಲಿಗೆ ಮಾನ್ಸೂನ್ ಪ್ರವೇಶಿಸುವ ಸಾಧ್ಯತೆಯಿದೆ. ಭಾರತದಾದ್ಯಂತ ಮಾನ್ಸೂನ್ ಚಲನೆಯು ಕೆಲವೊಮ್ಮೆ ಆರಂಭಿಕ ಹಂತದ ನಂತರ ಹಠಾತ್ತನೆ ವೇಗವನ್ನು ಪಡೆದುಕೊಳ್ಳುತ್ತದೆ. ಹೀಗಾಗಿ ಜೂನ್ ಮೊದಲ ವಾರದವರೆಗೂ ಈ ನಿಧಾನಗತಿ ಮುಂದುವರಿಯದಿದ್ದರೆ, ದೇಶದ ಉಳಿದ ಭಾಗಗಳ ಮಾನ್ಸೂನ್ ಕಾಲಮಿತಿಯು ಎಂದಿನಂತೆಯೇ ಇರಲಿದೆ ಎಂದು ತಜ್ಞರು ಆಶಾವಾದ ವ್ಯಕ್ತಪಡಿಸಿದ್ದಾರೆ.