ಪ್ರಧಾನಿ ಮೋದಿಗೆ ಪ್ರಶ್ನೆ ಕೇಳಿದ್ದನ್ನು ಸಮರ್ಥಿಸಿಕೊಂಡ ನಾರ್ವೆ ಪತ್ರಕರ್ತೆ ಹೆಲ್ಲೆ ಲಿಂಗ್!

ಓಸ್ಕೋ: ಪ್ರಧಾನಿ ನರೇಂದ್ರ ಮೋದಿ ಅವರ ನಾರ್ವೆ ಭೇಟಿಯ ವೇಳೆ ಕೇಳಿದ ಪ್ರಶ್ನೆಯನ್ನು ಸಮರ್ಥಿಸಿಕೊಂಡಿರುವ ನಾರ್ವೇಯ ಪತ್ರಕರ್ತೆ ಹೆಲ್ಲೆ ಲಿಂಗ್, ಪ್ರಬಲ ರಾಜಕೀಯ ನಾಯಕರನ್ನು ಪ್ರಶ್ನಿಸುವುದು ಮುಕ್ತ ಪತ್ರಿಕಾ ವ್ಯವಸ್ಥೆಯ ಕರ್ತವ್ಯ ಎಂದು ಹೇಳಿದ್ದಾರೆ.
ನಾರ್ವೆಯ ದಿನಪತ್ರಿಕೆ ಡಾಗ್ವಾವಿಸೆನ್ನಲ್ಲಿ ಪ್ರಕಟವಾದ ಲೇಖನದಲ್ಲಿ “ವಿಶ್ವದ ಅತ್ಯಂತ ಮುಕ್ತ ಪತ್ರಿಕೆಯಿಂದ ಕೇಳುವ ಪ್ರಶ್ನೆಗಳಿಗೆ ನೀವು ಏಕೆ ಉತ್ತರಿಸುವುದಿಲ್ಲ?” ಎಂದು ಪ್ರಧಾನಿ ಮೋದಿಗೆ ತಾವು ಕೇಳಿದ ಪ್ರಶ್ನೆ ಪತ್ರಿಕಾ ಸ್ವಾತಂತ್ರ್ಯದ ಭಾಗವಾಗಿತ್ತು ಎಂದು ಲಿಂಗ್ ಹೇಳಿದ್ದಾರೆ.

“ರವಿವಾರ ನಾರ್ವೆಯ ಸಂವಿಧಾನ ದಿನವನ್ನು ಆಚರಿಸಿದ ನಾನು, ಸೋಮವಾರ ಪತ್ರಿಕಾ ಸ್ವಾತಂತ್ರ್ಯದ ಹಕ್ಕನ್ನು ಬಳಸದೆ ಇರಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.
ವೈರಲ್ ಆದ ಪ್ರಶ್ನೆ:
ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಈ ವಾರ ಓಪ್ಲೋಗೆ ಭೇಟಿ ನೀಡಿದ್ದರು. ನಾರ್ವೆ ಪ್ರಧಾನಿ ಜೋನಾಸ್ ಗಹರ್ ಸ್ಟೋರ್ ಅವರೊಂದಿಗೆ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಇಬ್ಬರು ನಾಯಕರು ಪ್ರಶ್ನೆಗಳಿಗೆ ಅವಕಾಶ ನೀಡದೆ ತೆರಳಿದ್ದರು.
ನಾರ್ವೆ ಪ್ರಧಾನಿ ಜೋನಾಸ್ ಗಹರ್ ಸ್ಟೋರ್ ಅವರೊಂದಿಗೆ ನಡೆದ ಜಂಟಿ ಪತ್ರಿಕಾಗೋಷ್ಠಿಯ ಬಳಿಕ ಪ್ರಧಾನಿ ಮೋದಿ ತೆರಳುತ್ತಿದ್ದ ವೇಳೆ, ಡಾಗ್ವಾವಿಸೆನ್ ಪತ್ರಿಕೆಯ ವರದಿಗಾರ್ತಿ ಹೆಲ್ಲೆ ಲಿಂಗ್, “ವಿಶ್ವದ ಅತ್ಯಂತ ಮುಕ್ತ ಪತ್ರಿಕೆಯಿಂದ ಕೇಳುವ ಪ್ರಶ್ನೆಗಳಿಗೆ ನೀವು ಏಕೆ ಉತ್ತರಿಸುವುದಿಲ್ಲ?” ಎಂದು ಪ್ರಶ್ನಿಸಿದರು. ಈ ಘಟನೆಯ ವಿಡಿಯೊವನ್ನು ಅವರು ಬಳಿಕ ಎಕ್ಸ್ನಲ್ಲಿ ಹಂಚಿಕೊಂಡಿದ್ದು, ಅದು ವೈರಲ್ ಆಗಿತ್ತು.
ನಾರ್ವೆ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಅಗ್ರಸ್ಥಾನದಲ್ಲಿರುವುದನ್ನೂ ಭಾರತ ಕೆಳಮಟ್ಟದಲ್ಲಿರುವುದನ್ನೂ ಉಲ್ಲೇಖಿಸಿದ ಅವರು, “ಸರ್ಕಾರವನ್ನು ಪ್ರಶ್ನಿಸುವುದು ನಮ್ಮ ಕೆಲಸ” ಎಂದು ಹೇಳಿದ್ದಾರೆ.
‘ಪತ್ರಿಕೋದ್ಯಮ ಕೆಲವೊಮ್ಮೆ ಕಠಿಣವಾಗುತ್ತದೆ’:
ತಮ್ಮ ಲೇಖನದಲ್ಲಿ ಲಿಂಗ್, ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಪತ್ರಕರ್ತರಿಗೆ ನಾಯಕರನ್ನು ನೇರವಾಗಿ ಪ್ರಶ್ನಿಸುವ ಅವಕಾಶ ಇರಬೇಕು ಎಂದು ಹೇಳಿದ್ದಾರೆ.
“ಪತ್ರಿಕೋದ್ಯಮದಲ್ಲಿ ಕೆಲವೊಮ್ಮೆ ಕಠಿಣ ಪ್ರಶ್ನೆಗಳನ್ನೂ ಕೇಳಬೇಕಾಗುತ್ತದೆ. ನಾವು ಉತ್ತರಗಳನ್ನು ಹುಡುಕುವುದು ನಮ್ಮ ಕೆಲಸ” ಎಂದು ಅವರು ಎಕ್ಸ್ನಲ್ಲಿ ಬರೆದಿದ್ದಾರೆ.
“ಯಾವುದೇ ಸಂದರ್ಶನದಲ್ಲಿ ವಿಶೇಷವಾಗಿ ಅಧಿಕಾರದಲ್ಲಿರುವವರು ಪ್ರಶ್ನೆಗೆ ನೇರವಾಗಿ ಉತ್ತರಿಸದಿದ್ದರೆ, ಸ್ಪಷ್ಟ ಉತ್ತರ ಪಡೆಯಲು ನಾನು ಮತ್ತೆ ಪ್ರಶ್ನಿಸುತ್ತೇನೆ. ಅದು ನನ್ನ ಕರ್ತವ್ಯ” ಎಂದು ಅವರು ಹೇಳಿದ್ದಾರೆ.
ತಾವು ವಿದೇಶಿ ಸರ್ಕಾರದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪಗಳನ್ನು ಲಿಂಗ್ ತಳ್ಳಿ ಹಾಕಿದ್ದು, “ನಾನು ಯಾವುದೇ ದೇಶದ ಗೂಢಚಾರಿಯಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಎಂಇಎ ಬ್ರಿಫಿಂಗ್ನಲ್ಲೂ ವಾಗ್ವಾದ:
ಈ ಘಟನೆ ಬಳಿಕ ಓಸ್ತೋದಲ್ಲಿ ನಡೆದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ಬೀಫಿಂಗ್ನಲ್ಲೂ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಭಾರತದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿ ಮತ್ತು “ಪತ್ರಕರ್ತರು ಭಾರತ ಸರ್ಕಾರವನ್ನು ಏಕೆ ನಂಬಬೇಕು” ಎಂದು ಲಿಂಗ್, ಎಂಇಎ ಕಾರ್ಯದರ್ಶಿ (ಪಶ್ಚಿಮ) ಸಿಬಿ ಜಾರ್ಜ್ ಅವರನ್ನು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಾರ್ಜ್, ಭಾರತದ ಚುನಾವಣೆಗಳು, ನ್ಯಾಯಾಂಗ ವ್ಯವಸ್ಥೆ ಕೋವಿಡ್ ಲಸಿಕೆ ರಾಜತಾಂತ್ರಿಕತೆ ಮತ್ತು ಸಂವಿಧಾನಾತ್ಮಕ ರಕ್ಷಣೆಗಳನ್ನು ಉಲ್ಲೇಖಿಸಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಮರ್ಥಿಸಿದರು.
ಲಿಂಗ್ ನಿರಂತರವಾಗಿ “ನಿರ್ದಿಷ್ಟ ಉತ್ತರ” ಕೇಳಿದಾಗ, “ದಯವಿಟ್ಟು ಅಡ್ಡಿಪಡಿಸಬೇಡಿ” ಹಾಗೂ “ಹೇಗೆ ಉತ್ತರಿಸಬೇಕು ಎಂದು ಹೇಳಬೇಡಿ” ಎಂದು ಜಾರ್ಜ್ ಪ್ರತಿಕ್ರಿಯಿಸಿದರು.
ಜಾರ್ಜ್ ಉತ್ತರಿಸುತ್ತಿದ್ದ ವೇಳೆ ಲಿಂಗ್ ಹೊರನಡೆದಿದ್ದಾರೆ ಎಂಬ ಸಾಮಾಜಿಕ ಜಾಲತಾಣದ ಹೇಳಿಕೆಗಳಿಗೂ ಅವರು ಸ್ಪಷ್ಟನೆ ನೀಡಿದ್ದು, “ನಾನು ಕೇವಲ ನೀರು ಕುಡಿಯಲು ತೆರಳಿದ್ದೆ” ಎಂದು ತಿಳಿಸಿದ್ದಾರೆ.
ರಾಜಕೀಯ ಪ್ರತಿಕ್ರಿಯೆ:
ಈ ಘಟನೆ ಭಾರತದಲ್ಲೂ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಮರೆಮಾಡಲು ಏನೂ ಇಲ್ಲದಿದ್ದರೆ, ಭಯಪಡಲು ಏನೂ ಇರುವುದಿಲ್ಲ” ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಅವರನ್ನು ಟೀಕಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ಜಂಟಿ ಕಾರ್ಯಕ್ರಮದಲ್ಲಿ ನಾರ್ವೆ ಪ್ರಧಾನಿಯೂ ಪ್ರಶ್ನೆಗಳಿಗೆ ಉತ್ತರಿಸಿರಲಿಲ್ಲ ಎಂದು ಹೇಳಿ, “ಒಬ್ಬ ಪತ್ರಕರ್ತೆಯ ಅಸಂಗತ ಹೇಳಿಕೆಯನ್ನು ಅನಗತ್ಯವಾಗಿ ವಿಸ್ತರಿಸಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.
ಆದರೆ, ನಾರ್ವೆ ಪ್ರಧಾನಿ ನಂತರ ಭಾರತೀಯ ಮಾಧ್ಯಮ ತಂಡ ಸೇರಿದಂತೆ ಪತ್ರಕರ್ತರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ್ದರು ಎಂದು ಲಿಂಗ್ ಸ್ಪಷ್ಟಪಡಿಸಿದ್ದಾರೆ.