ಪತ್ನಿಯ ಕೊಲೆ ಮಾಡಿ ಮರದ ಪೆಟ್ಟಿಗೆಯಲ್ಲಿ ಹೂತು ಹಾಕಿದ ಪತಿ; ತಂದೆಯ ಕೃತ್ಯ ಬಯಲಿಗೆಳೆದ ಮಗ

ಸೂರತ್ : ಪತ್ನಿಯನ್ನ ಕೊಲೆ ಮಾಡಿ ಶವವನ್ನು ಮರದ ಪೆಟ್ಟಿಗೆಯಲ್ಲಿ ಹಾಕಿ ಸಿಮೆಂಟ್ನಿಂದ ಮುಚ್ಚಿ, ಪೊಲೀಸರ ದಾರಿ ತಪ್ಪಿಸಲು ನಾಪತ್ತೆ ದೂರು ದಾಖಲಿಸಿದ್ದ ಪತಿಯ ಕೃತ್ಯವೊಂದು ಸೂರತ್ನಲ್ಲಿ ಬೆಳಕಿಗೆ ಬಂದಿದೆ.

40 ವರ್ಷದ ವಿಶಾಲ್ ಸಾಲ್ವಿ ತನ್ನ ಪತ್ನಿ, ಆಹಾರ ತಜ್ಞೆ ಶಿಲ್ಪಾ ಸಾಲ್ವಿ (39) ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದನು. ನಾಲ್ಕು ದಿನಗಳಿಂದ ಪತ್ನಿ ಕಾಣಿಸುತ್ತಿಲ್ಲ ಎಂದು ಆತ ಪೊಲೀಸರಿಗೆ ತಿಳಿಸಿದ್ದ, ಆದರೆ ಆತನ ಮಗನಿಗೆ ಸಿಕ್ಕ ಒಂದು ಪತ್ರ ಪ್ರಕರಣದ ದಿಕ್ಕನ್ನೇ ಬದಲಿಸಿದೆ. ತಾನು ತಪ್ಪು ಮಾಡಿರುವುದಾಗಿ ವಿಶಾಲ್ ಬರೆದಿದ್ದ ಚೀಟಿಯನ್ನು ಮಗ ಪೊಲೀಸರಿಗೆ ನೀಡಿದ ಬೆನ್ನಲ್ಲೇ ತನಿಖೆ ಚುರುಕುಗೊಂಡಿದೆ.
ಸಲಬತ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪಾಳುಬಿದ್ದ ಮನೆಯೊಂದರಲ್ಲಿ ದುರ್ವಾಸನೆ ಬರುತ್ತಿದ್ದ ಮರದ ಪೆಟ್ಟಿಗೆಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆ ಪೆಟ್ಟಿಗೆಯನ್ನು ಒಡೆದು ನೋಡಿದಾಗ ಕಚ್ಚಾ ಸಿಮೆಂಟ್ನಿಂದ ಮುಚ್ಚಲ್ಪಟ್ಟಿದ್ದ ಶಿಲ್ಪಾ ಅವರ ಕೊಳೆತ ಶವ ಪತ್ತೆಯಾಗಿದೆ. ಪತ್ನಿಯ ನಡತೆಯ ಮೇಲೆ ಅನುಮಾನಗೊಂಡು ವಿಶಾಲ್ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿ ಸದ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.