ದಕ್ಷಿಣ ಭಾರತೀಯ ಚಿತ್ರರಂಗದಿಂದ ಕಲಿಯಬೇಕು-ಆಮಿರ್ ಖಾನ್

ಮುಂಬೈ:ಬಾಲಿವುಡ್ನ ಸ್ಟಾರ್ ನಟರ ಸಿನಿಮಾಗಳು ಕೂಡ ಬಾಕ್ಸ್ ಆಫೀಸ್ನಲ್ಲಿ ಸೋಲುತ್ತಿವೆ. ಆಮಿರ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಮುಂತಾದ ಹೀರೋಗಳ ಸಿನಿಮಾಗಳು ನೆಲ ಕಚ್ಚಿವೆ. ಇದಕ್ಕೆ ಕಾರಣ ಏನು ಎಂದು ಚರ್ಚೆ ಮಾಡಲಾಗುತ್ತಿದೆ. ನಟ ಆಮಿರ್ ಖಾನ್ ಅವರು ಈ ಕುರಿತು ಮಾತನಾಡಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹಿಂದಿ ಸಿನಿಮಾಗಳ ಪರಿಸ್ಥಿತಿ ಬಗ್ಗೆ ಅವರು ವಿವರಿಸಿದ್ದಾರೆ. ಬಾಲಿವುಡ್ನ (Bollywood) ಬಿಸ್ನೆಸ್ ಮಾದರಿ ಸರಿ ಇಲ್ಲ. ದಕ್ಷಿಣ ಭಾರತದ ಚಿತ್ರರಂಗವನ್ನು ನೋಡಿ ಬಾಲಿವುಡ್ ಮಂದಿ ಕಲಿಯಬೇಕು ಎಂದು ಆಮಿರ್ ಖಾನ್ ಹೇಳಿದ್ದಾರೆ.
‘ಎಲ್ಲಕ್ಕಿಂತ ಮೊದಲು ನಾವು ಒಳ್ಳೆಯ ಸಿನಿಮಾಗಳನ್ನು ಮಾಡಬೇಕು. ಹಿಂದಿ ಸಿನಿಮಾದ ನಿರ್ದೇಶಕರು, ಬರಹಗಾರರು, ನಿರ್ಮಾಪಕರು ಸಾಕಷ್ಟು ಕಲಿಯುವುದು ಇದೆ. ಸದ್ಯಕ್ಕೆ ನಮ್ಮ ಬಿಸ್ನೆಸ್ ಮಾಡೆಲ್ ವಿಚಿತ್ರವಾಗಿದೆ. ನಾವು ಜನರನ್ನು ಚಿತ್ರಮಂದಿರಕ್ಕೆ ಕರೆಯುತ್ತೇವೆ. ಆದರೆ ಅವರು ಥಿಯೇಟರ್ಗೆ ಬರದೇ ಇದ್ದರೆ, ಕೂಡಲೇ ನಾವು ಒಟಿಟಿಯಲ್ಲಿ ರಿಲೀಸ್ ಮಾಡುತ್ತೇವೆ. ಇದರಿಂದಾಗಿ ನಮ್ಮ ಸಿನಿಮಾಗೆ ತೊಂದರೆ ಆಗಿದೆ’ ಎಂದಿದ್ದಾರೆ ಆಮಿರ್ ಖಾನ್.
ಕೊವಿಡ್ ಕೂಡ ಸಿನಿಮಾ ಮೇಲೆ ಪರಿಣಾಮ ಬೀರಿವೆ ಎಂದು ಆಮಿರ್ ಖಾನ್ ಅಭಿಪ್ರಾಯಪಟ್ಟಿದ್ದಾರೆ. ಕೊವಿಡ್ನಿಂದಾಗಿ ಜನರು ಸಿನಿಮಾ ನೋಡುವ ರೀತಿಯೇ ಬದಲಾಗಿದೆ. ನಿರ್ಮಾಪಕರು ನೇರವಾಗಿ ಒಟಿಟಿಗೆ ಸಿನಿಮಾ ಮಾಡಲು ಶುರು ಮಾಡಿದ್ದಾರೆ. ಜನರಿಗೂ ಮನೆಯಲ್ಲೇ ಮನರಂಜನೆ ಪಡೆಯುವುದು ಅಭ್ಯಾಸ ಆಗಿದೆ. ಸಿನಿಮಾ ಬಿಡುಗಡೆಯಾಗಿ ಒಟಿಟಿಗೆ ಬರಲು 6 ತಿಂಗಳು ಅಂತರ ಇರಬೇಕು ಎಂದು ಆಮಿರ್ ಖಾನ್ ಹೇಳಿದ್ದಾರೆ.
ಸದ್ಯ ಆಮಿರ್ ಖಾನ್ ಅವರು ‘ಸಿತಾರೆ ಜಮೀನ್ ಪರ್’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ. ಹೊಸ ಕಲಾವಿದರಿಗೆ ಈ ಚಿತ್ರದಲ್ಲಿ ಅವಕಾಶ ನೀಡಲಾಗಿದೆ. ಜೂನ್ 20ರಂದು ‘ಸಿತಾರೆ ಜಮೀನ್ ಪರ್’ ಸಿನಿಮಾ ಬಿಡುಗಡೆ ಆಗಲಿದೆ. ಇದು ಆಮಿರ್ ಖಾನ್ ಅವರ ಕಮ್ಬ್ಯಾಕ್ ಸಿನಿಮಾ ಎಂಬ ಕಾರಣಕ್ಕೆ ಜನರಿಗೆ ನಿರೀಕ್ಷೆ ಇದೆ.
ಆಮಿರ್ ಖಾನ್ ಅವರು 2022ರಲ್ಲಿ ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೀನಾಯವಾಗಿ ಸೋತಿತು. ಆ ಬಳಿಕ ಆಮಿರ್ ಖಾನ್ ಹೊಸ ಸಿನಿಮಾ ಒಪ್ಪಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡರು.