ಮುಂಬೈ ಮಳೆ ಅವಾಂತರ: ಮೇಯರ್ ಕಣ್ಣೆದುರೇ ತೆರೆದ ಮ್ಯಾನ್ಹೋಲ್ಗೆ ಬಿದ್ದ ಕಾರ್ಮಿಕ!

ಮುಂಬೈ: ಮುಂಗಾರು ಪ್ರವೇಶದ ಬೆನ್ನಲ್ಲೇ ಮಹಾರಾಷ್ಟ್ರದಾದ್ಯಂತ ಭಾರಿ ಮಳೆಯಾಗುತ್ತಿದ್ದು, ವರ್ಷಧಾರೆ ನಡುವೆಯೇ ವಾಣಿಜ್ಯ ನಗರಿ ಮುಂಬೈನಲ್ಲಿ ನಾನಾ ಅವಾಂತರಗಳು ಸೃಷ್ಟಿಯಾಗಿದೆ.
ನೈಋತ್ಯ ಮುಂಗಾರು ಮಂಗಳವಾರ ಮುಂಬೈ ತಲುಪಿದ್ದು, ಸಾಮಾನ್ಯ ಆಗಮನ ದಿನಾಂಕಕ್ಕಿಂತ ಸುಮಾರು ಎರಡು ವಾರ ತಡವಾಗಿ ನಗರ ಪ್ರವೇಶಿಸಿದೆ.
ಭಾರೀ ಮಳೆಯಿಂದಾಗಿ ನಗರದ ಹಲವು ಭಾಗಗಳಲ್ಲಿ ಜಲಾವೃತ, ಸಂಚಾರ ದಟ್ಟಣೆ ಹಾಗೂ ಗೋಡೆ ಕುಸಿತ ಸೇರಿದಂತೆ ಹಲವು ಹಾನಿಗಳು ಸಂಭವಿಸಿವೆ.
ಭಾರಿ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಹಿನ್ನಲೆಯಲ್ಲಿ ಮುಂಬೈ ಮೇಯರ್ ರಿತು ತಾವಡೆ ಅವರು ಬುಧವಾರ ಬೆಳಗ್ಗೆ ಮಳೆಯ ಪರಿಸ್ಥಿತಿಯನ್ನು ಪರಿಶೀಲಿಸಲು ಸ್ಥಳಕ್ಕೆ ತೆರಳಿದ್ದ ವೇಳೆ ಅವರ ಕಣ್ಣೆದುರೇ ವ್ಯಕ್ತಿಯೊಬ್ಬ ತೆರೆದಿದ್ದ ಮ್ಯಾನ್ಹೋಲ್ಗೆ ಬಿದ್ದ ಘಟನೆ ನಡೆದಿದೆ.ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗಲೇ ಘಟನೆ
ಮುಂಬೈ ಮೇಯರ್ ರಿತು ತಾವಡೆ ಅವರು ಬುಧವಾರ ಬೆಳಗ್ಗೆಯೇ ದಾದರ್, ಹಿಂದ್ ಮಾತಾ ಹಾಗೂ ಗಾಂಧಿ ಮಾರ್ಕೆಟ್ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದರು. ಈ ವೇಳೆ ತೆರೆದಿದ್ದ ಚರಂಡಿಗೆ ವ್ಯಕ್ತಿಯೊಬ್ಬ ಬಿದ್ದಿದ್ದಾನೆ. ಆತ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)ಯೊಂದಿಗೆ ಸಂಬಂಧ ಹೊಂದಿರುವ ಸ್ವಚ್ಛತಾ ಕಾರ್ಮಿಕ ಎಂದು ಗುರುತಿಸಲಾಗಿದೆ.
ತೀವ್ರ ಮುಜುಗರ, ಅಮಾನತು ಎಚ್ಚರಿಕೆ!

ಈ ಘಟನೆಯ ಬಳಿಕ ಮೇಯರ್ ಸಂಬಂಧಿತ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಯಾವುದೇ ವಾರ್ಡ್ನಲ್ಲಿ ತೆರೆದ ಮ್ಯಾನ್ಹೋಲ್ ಪತ್ತೆಯಾದರೆ ಆ ವಾರ್ಡ್ನ ಅಮಾನತುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.ಅಲ್ಲದೆ ಚರಂಡಿಯಲ್ಲಿದ್ದ ತ್ಯಾಜ್ಯವನ್ನು ತೆರವುಗೊಳಿಸಲು ಮ್ಯಾನ್ಹೋಲ್ ಮುಚ್ಚಳವನ್ನು ತೆರೆಯಲಾಗಿತ್ತು ಎಂದು ರಿತು ತಾವ್ಡೆ ಸ್ಪಷ್ಟನೆ ನೀಡಿದ್ದಾರೆ. “ಆ ವ್ಯಕ್ತಿ ಎಚ್ಚರಿಕೆ ಫಲಕವನ್ನು ಓದಿ, ಮ್ಯಾನ್ಹೋಲ್ ಸುತ್ತ ನಾವು ಹಾಕಿದ್ದ ತಡೆಗೋಡೆಗಳನ್ನು ಗಮನಿಸಬೇಕಾಗಿತ್ತು.
‘ಎಚ್ಚರಿಕೆಯಿಂದಿರಿ’ ಎಂದು ಸ್ಪಷ್ಟವಾಗಿ ಸೂಚನೆ ನೀಡಿದ್ದರೆ ಜನರು ಕೂಡ ಜಾಗರೂಕರಾಗಿರಬೇಕು. ಬಿಎಂಸಿ ಅಳವಡಿಸಿರುವ ಸೂಚನಾ ಫಲಕಗಳು ಮತ್ತು ಪ್ರಕಟಣೆಗಳನ್ನು ಮುಂಬೈ ನಿವಾಸಿಗಳು ಗಮನಿಸಬೇಕು ಎಂದು ನಾನು ಮನವಿ ಮಾಡುತ್ತೇನೆ,” ಎಂದು ರಿತು ತಾವ್ಡೆ ಅವರು ಹೇಳಿದ್ದಾರೆ.
ಮಳೆ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಬೃಹನ್ಮುಂಬೈ ಮಹಾನಗರ ಪಾಲಿಕೆ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ರಸ್ತೆಗಳಲ್ಲಿ ಸಂಗ್ರಹವಾಗಿರುವ ನೀರನ್ನು ತೆರವುಗೊಳಿಸಲು ಹಲವು ಪಂಪ್ಗಳನ್ನು ನಿಯೋಜಿಸಲಾಗಿದೆ. ಅಲ್ಲದೆ ಚರಂಡಿಗಳಲ್ಲಿ ನೀರಿನ ಹರಿವಿಗೆ ಅಡ್ಡಿಯಾಗಿರುವ ತ್ಯಾಜ್ಯವನ್ನು ಕೂಡ ತೆರವುಗೊಳಿಸಲಾಗುತ್ತಿದೆ ಎಂದು ರಿತು ತಾವಡೆ ತಿಳಿಸಿದ್ದಾರೆ.