ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ನಾಗಾ-ಕುಕಿ ಸಮುದಾಯಗಳ ನಡುವೆ ಸಂಘರ್ಷ; ಮೂವರ ಸಾ*ವು

ಗುವಾಹಟಿ: ಜನಾಂಗೀಯ ಹಿಂಸೆಯಿಂದ ತತ್ತರಿಸಿರುವ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಮೂವರು ಸಂಘರ್ಷಕ್ಕೆ ಬಲಿಯಾಗಿದ್ದಾರೆ. ತಂಗುಲ್ ನಾಗಾ ಸಮುದಾಯಕ್ಕೆ ಸೇರಿದ ಒಬ್ಬ ಹಾಗೂ ಕುಕಿ-ಜೋ ಸಮುದಾಯಕ್ಕೆ ಸೇರಿದ ಇಬ್ಬರು ಗುಂಡೇಟಿನಿಂದ ಮೃತಪಟ್ಟಿದ್ದಾರೆ. ಮಣಿಪುರದ ಉಬ್ರುಲ್ ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ ನಾಗಾ ಹಾಗೂ ಕುಕಿ ಸಮುದಾಯಗಳ ನಡುವಿನ ಗುಂಡಿನ ಕಾಳಗದಲ್ಲಿ ಇತರ ಐದು ಮಂದಿ ಗಾಯಗೊಂಡಿದ್ದಾರೆ.
ಇದೇ ವೇಳೆ ಮ್ಯಾನ್ಮಾರ್ ಕುಕಿ ನ್ಯಾಷನಲ್ ಆರ್ಮಿ-ಬರ್ಮಾ (ಕೆಎನ್-ಬಿ) ಸಂಘಟನೆಯ ಐದು ಮಂದಿಯನ್ನು ಕೆಮ್ಯಾಂಗ್ ಜಿಲ್ಲೆಯಲ್ಲಿ ಹತ್ಯೆ ಮಾಡಿರುವುದಾಗಿ ಎನ್ಎಸ್ಸಿಎನ್ ಸಂಘಟನೆಯ ಒಂದು ಬಣ ಹೇಳಿಕೆ ನೀಡಿದೆ. ಆದರೆ ಈ ಬಗ್ಗೆ ಅಧಿಕೃತ ದೃಢೀಕರಣ ಸಿಕ್ಕಿಲ್ಲ.
ಉಬ್ರುಲ್ ಜಿಲ್ಲೆಯಲ್ಲಿ ಹತರಾದವರಲ್ಲಿ 29 ವರ್ಷದ ತಂಗುಲ್ ನಾಗಾ ಹಾಗೂ ಹೊರ್ಷೋಕ್ಕಿ ಜಮಾಂಗ್ ಸೇರಿದ್ದಾರೆ. ಜಮಾಂಗ್ ಅವರನ್ನು ಸಶಸ್ತ್ರ ಕುಕಿ ಉಗ್ರರು ಹತ್ಯೆ ಮಾಡಿದ್ದು, ಶುಕ್ರವಾರ ಮುಂಜಾನೆ ಸಿನಕತೇಯಿ ಬಳಿ ನಡೆದ ದಾಳಿಯಲ್ಲಿ ಕಾರ್ಯಾಚರಣೆ ಒಪ್ಪಂದ ಮಾಡಿಕೊಂಡ ಶಂಕೆಯಿಂದ ಈ ಕೃತ್ಯ ಎಸಗಲಾಗಿದೆ ಎಂದು ತಂಗುಲ್ ನಾಗಾ ಲಾಂಗ್ (ಟಿಎನ್ಎಲ್) ಅಧಿಕೃತ ಹೇಳಿಕೆ ನೀಡಿದೆ.
ಜಮಾಂಗ್ ನಾಗಾ ವಿಲೇಜ್ ಗಾರ್ಡ್ ಸದಸ್ಯರಾಗಿದ್ದು, ಸಿನಕತೇಯಿ ಸಂಘರ್ಷದ ವೇಳೆ ಗ್ರಾಮದಲ್ಲಿ ಈ ಸಂಘಟನೆ ಗಸ್ತು ತಿರುಗುತ್ತಿತ್ತು ಎಂದು ಹೇಳಲಾಗಿದೆ.
ಕುಕಿ ಸಮುದಾಯದ ಇಬ್ಬರು ಹತರಾಗಿದ್ದು, ಮುಲಾಮ್ ಗ್ರಾಮದಲ್ಲಿ ಅವರ ಮೃತದೇಹಗಳನ್ನು ಭದ್ರತಾ ಪಡೆಗಳು ಪತ್ತೆ ಮಾಡಿವೆ. ಇವರನ್ನು ಪಾವೊಮಿನ್ನಿಲಿನ್ ಹಾಲಾಯ್ (19) ಮತ್ತು ಲೆತ್ತಲ್ ಸಿತ್ತೋಹು (43) ಎಂದು ಗುರುತಿಸಲಾಗಿದೆ.
