ಬಂಗಾಳದಲ್ಲಿ ಪತನಗೊಂಡ ದೀದಿ ಸಾಮ್ರಾಜ್ಯ: ಮಮತಾ ಆಕ್ರೋಶದ ನಡುವೆಯೇ ಮೊದಲ ಬಾರಿಗೆ ಅಧಿಕಾರಕ್ಕೇರಿದ ಬಿಜೆಪಿ

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳ ಬಳಿಕ ಅಧಿಕಾರ ಕಳೆದುಕೊಂಡಿರುವ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಬಿಜೆಪಿ ಗೆಲುವನ್ನು ಅನೈತಿಕ ಗೆಲುವು ಎಂದಿದ್ದಾರೆ. ಬಿಜೆಪಿ ಹಾಗೂ ಭಾರತದ ಚುನಾವಣಾ ಆಯೋಗ ಸೇರಿಕೊಂಡು 100 ಸ್ಥಾನಗಳನ್ನು ಲೂಟಿ ಮಾಡಿವೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
“100 ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಲೂಟಿ ಮಾಡಿದೆ. ಚುನಾವಣಾ ಆಯೋಗ ಬಿಜೆಪಿಯ ಆಯೋಗವಾಗಿದೆ” ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.
“ನಾನು ಸಿಒ ಮತ್ತು ಮನೋಜ್ ಅಗರ್ವಾಲ್ ಅವರಿಗೂ ದೂರು ನೀಡಿದ್ದೆ. ಆದರೆ ಅವರು ಏನೂ ಮಾಡಲಿಲ್ಲ. ಇದನ್ನು ಗೆಲುವು ಎಂದು ನೀವು ಭಾವಿಸುತ್ತೀರಾ? ಇದು ಅನೈತಿಕ ಜಯ. ನೈತಿಕ ವಿಜಯವಲ್ಲ. ಚುನಾವಣಾ ಆಯೋಗವು ಕೇಂದ್ರೀಯ ಪಡೆಗಳು ಮತ್ತು ಪ್ರಧಾನಿ ಹಾಗೂ ಗೃಹಸಚಿವರ ಜತೆಗೆ ಏನು ಮಾಡಿದೆಯೋ ಅದೆಲ್ಲವೂ ಕಾನೂನುಬಾಹಿರ. ಇದು ಲೂಟಿ, ಲೂಟಿ, ಲೂಟಿ. ನಾವು ಮತ್ತೆ ಪುಟಿದೇಳುತ್ತೇವೆ” ಎಂದು ಮಮತಾ ಆಕ್ರೋಶ ವ್ಯಕ್ತಪಡಿಸಿದರು.
ಮಮತಾ ಅವರ ಭದ್ರಕೋಟೆಯನ್ನು ಭೇದಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ತನ್ನ ಸ್ವಂತ ಬಲದಲ್ಲಿ ಮೊದಲ ಬಾರಿಗೆ ಬಂಗಾಳದಲ್ಲಿ ಅಧಿಕಾರಕ್ಕೇರಿದೆ.
“ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಿದೆ! 2026ರ ಪಶ್ಚಿಮ ಬಂಗಾಳ ಚುನಾವಣೆ ಸದಾ ನೆನಪಿನಲ್ಲಿ ಉಳಿಯುವಂಥದ್ದು. ಜನರ ಅಧಿಕಾರ ಉಳಿದಿದೆ ಮತ್ತು ಬಿಜೆಪಿಯ ಒಳ್ಳೆಯ ಆಡಳಿತದ ರಾಜಕೀಯ ಫಲ ನೀಡಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್ ಪೋಸ್ಟ್ ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
