ಅತ್ಯಾಚಾ*ರ ಮತ್ತು ಜೀವಬೆದರಿಕೆ ಆರೋಪ; ಸ್ವಯಂಘೋಷಿತ ದೇವಮಾನವ ಹೃಷಿಕೇಶ್ ವೈದ್ಯ ಬಂಧನ

ಪುಣೆ: ಲೈಂಗಿಕ ದೌರ್ಜನ್ಯ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣದಲ್ಲಿ ಮಹಾರಾಷ್ಟ್ರದ ವಸಾಯಿ ಮೂಲದ ಸ್ವಯಂ ಘೋಷಿತ ದೇವಮಾನವ ಹೃಷಿಕೇಶ್ ವೈದ್ಯ (39) ನನ್ನು ಏಪ್ರಿಲ್ 6ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೃಷಿಕೇಶ್ ವೈದ್ಯನನ್ನು ಶನಿವಾರ ಮುಂಜಾನೆ ಪಿಂಪ್ರಿಯಿಂದ ಬಂಧಿಸಿ, ಬಳಿಕ ಪುಣೆಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಯನ್ನು ಏಪ್ರಿಲ್ 6ರವರೆಗೆ ಪೊಲೀಸ್ ಕಸ್ಟಡಿಗೆ ನೀಡುವಂತೆ ಆದೇಶಿಸಿದರು ಎಂದು ಪುಣೆಯ ಉಪ ಪೊಲೀಸ್ ಆಯುಕ್ತ (ಅಪರಾಧ) ನಿಖಿಲ್ ಪಿಂಗಳೆ ತಿಳಿಸಿದ್ದಾರೆ.

ಈ ವಾರದ ಆರಂಭದಲ್ಲಿ ಪುಣೆ ಮೂಲದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ವಸಾಯಿಯ ಮಾಣಿಕ್ ಪುರ ಪೊಲೀಸರು ಸ್ವಯಂ ಘೋಷಿತ ದೇವಮಾನವ ಹೃಷಿಕೇಶ್ ವೈದ್ಯನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 64 (ಅತ್ಯಾಚಾರ) ಮತ್ತು 351 (2) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಘಟನೆ ನಡೆದ ಸ್ಥಳ ಪುಣೆಯ ಮಂಜರಿ ವ್ಯಾಪ್ತಿಗೆ ಸೇರಿದ್ದರಿಂದ ಪ್ರಕರಣವನ್ನು ಮಂಜರಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು.
ಸಾಮಾಜಿಕ ಮಾಧ್ಯಮಗಳ ಮೂಲಕ ವೈದ್ಯನನ್ನು ಸಂಪರ್ಕಿಸಿದ್ದಾಗಿ ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಕೆಲವು ಆಚರಣೆಗಳನ್ನು ಮಾಡುವ ನೆಪದಲ್ಲಿ ವೈದ್ಯ ಪುಣೆಗೆ ಭೇಟಿ ನೀಡಿ, ಡಿಸೆಂಬರ್ 2023ರಲ್ಲಿ ಮಂಜರಿಯಲ್ಲಿರುವ ಲಾಡ್ಜ್ ನಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರುದಾರರು ಹೇಳಿದ್ದಾರೆ.
ಕಳೆದ ವರ್ಷ ಮೇ ತಿಂಗಳಲ್ಲಿ ಮಹಿಳೆಯನ್ನು ವಸಾಯಿಗೆ ಕರೆಸಿ, ಆಕೆಯ ಆಕ್ಷೇಪಾರ್ಹ ಫೊಟೋಗಳನ್ನು ಪತಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿ ಮತ್ತೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪವೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆಯನ್ನು ಯಾರಿಗಾದರೂ ಬಹಿರಂಗಪಡಿಸಿದರೆ ಆಕೆಯ ಪತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಹೃಷಿಕೇಶ್ ವೈದ್ಯನನ್ನು ಪತ್ತೆಹಚ್ಚಲು ಪುಣೆ ನಗರ ಪೊಲೀಸರು ಶುಕ್ರವಾರ ನಾಲ್ಕು ತಂಡಗಳನ್ನು ರಚಿಸಿದ್ದರು. ಶನಿವಾರ ಬೆಳಗಿನ ಜಾವ ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದರು. ಬಳಿಕ ಆತನನ್ನು ಬಿಗಿ ಭದ್ರತೆಯಲ್ಲಿ ವಾನೋವರಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ಸರ್ಕಾರದ ಪರವಾಗಿ ವಾದಿಸಿದ ಸಾರ್ವಜನಿಕ ಅಭಿಯೋಜಕಿ ಕವಿತಾ ಕಾಂಬ್ಳೆ ಅವರು ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರಿದರು. ಪ್ರಕರಣದ ತನಿಖೆಗಾಗಿ ಆರೋಪಿಯ ಸಾಮರ್ಥ್ಯ ಪರೀಕ್ಷೆ ನಡೆಸಬೇಕಿದ್ದು, ಅಪರಾಧದಲ್ಲಿ ಬಳಸಲಾದ ವಾಹನವನ್ನು ಇನ್ನೂ ವಶಪಡಿಸಿಕೊಳ್ಳಲಾಗಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಇದಲ್ಲದೆ, ಆರೋಪಿಯು ದೂರುದಾರರ ಆಕ್ಷೇಪಾರ್ಹ ಫೊಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾನೆಯೇ ಹಾಗೂ ಪ್ರಕರಣದಲ್ಲಿ ಇತರ ಸಹಚರರು ಇದ್ದಾರೆಯೇ ಎಂಬುದರ ಕುರಿತು ತನಿಖೆ ಅಗತ್ಯವಿದೆ ಎಂದು ಅವರು ಹೇಳಿದರು.
ಇದಕ್ಕೆ ಪ್ರತಿಯಾಗಿ, ಆರೋಪಿ ಪರ ವಕೀಲರಾದ ಸಾಜಿದ್ ಶೇಖ್, ಪವನ್ ಕುಲಕರ್ಣಿ ಮತ್ತು ರಾಮ್ ಜಿ ಕೋಥಿ ಅವರು ಆರೋಪಿಯನ್ನು ತಪ್ಪಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ವಾದಿಸಿದರು.
ಎರಡೂ ಕಡೆಯವರ ವಾದಗಳನ್ನು ಆಲಿಸಿದ ಬಳಿಕ, ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ (ಜೆಎಂಎಫ್ಸಿ) ಬಿಎಸ್ ಜಗದಾಳೆ ಅವರು ಹೃಷಿಕೇಶ್ ವೈದ್ಯ ನನ್ನು ಎಪ್ರಿಲ್ 6ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ಆದೇಶಿಸಿದರು.