ರಾಂಬನ್: ಗೋರಕ್ಷಕರ ದಾಳಿಗೆ ಹೆದರಿ ಹೊಳೆಗೆ ಹಾರಿದ್ದ ಯುವಕನಿಗಾಗಿ 4ನೇ ದಿನವೂ ಮುಂದುವರಿದ ಶೋಧ; ಇನ್ನೂ ಪತ್ತೆಯಾಗದ ಮೃತದೇಹ

ಶ್ರೀನಗರ,: ಸ್ವಘೋಷಿತ ಗೋರಕ್ಷಕರು ರವಿವಾರ ಬೆನ್ನಟ್ಟಿ ಹಲ್ಲೆ ನಡೆಸಿದ ಬಳಿಕ ಜಮ್ಮು ಹಾಗೂ ಕಾಶ್ಮೀರದ ರಾಂಬನ್ ಜಿಲ್ಲೆಯ ರಾಮೂ ಪ್ರದೇಶದ ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿರುವ ಹೊಳೆಗೆ ಹಾರಿ ನಾಪತ್ತೆಯಾದ ಯುವಕನ ಮೃತದೇಹ ಪತ್ತೆ ಹಚ್ಚಲು ನಡೆಸುತ್ತಿರುವ ಶೋಧ ಕಾರ್ಯಾಚರಣೆ ಬುಧವಾರ ಕೂಡ ಮುಂದುವರಿದಿದೆ.
ಈ ಯುವಕನನ್ನು 28 ವರ್ಷದ ತನ್ನೀರ್ ಅಹ್ಮದ್ ಚೋಪನ್ ಎಂದು ಗುರುತಿಸಲಾಗಿದೆ. ಈತ ರಾಂಬನ್ ಜಿಲ್ಲೆಯ ಪೋಗಲ್ನ ಮುಂಡಖಲ್ ಗ್ರಾಮದ ನಿವಾಸಿ. ಈತ ರವಿವಾರ ಜಮ್ಮುವಿನಿಂದ ತನ್ನ ಗ್ರಾಮಕ್ಕೆ ಒಂದು ಹಾಲು ಕೊಡುವ ಹಸು ಹಾಗೂ ಎರಡು ಕರುಗಳನ್ನು ಸಾಗಿಸುತ್ತಿದ್ದ ಈ ಸಂದರ್ಭ ನಕಲಿ ಗೋರಕ್ಷಕರು ಆತನನ್ನು ಬೆನ್ನಟ್ಟಿ ಹಲ್ಲೆ ನಡೆಸಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲು ಆತ ರಾಮೂ ಪ್ರದೇಶದಲ್ಲಿರುವ ಹೊಳೆಗೆ ಹಾರಿದ್ದಾನೆ ಎಂದು ಹೇಳಲಾಗಿದೆ.
ರಾಮೂವಿನ ಮಾಕರ್ಕೋಟೆಯ ಸಮೀಪ ಹೊಳೆಯಲ್ಲಿ ಆತನ ಮೃತದೇಹವನ್ನು ಪತ್ತೆ ಹಚ್ಚಲು ರವಿವಾರದಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಚೋಪನ್ ತಂದೆ ಜಮ್ಮು ಹಾಗೂ ಕಾಶ್ಮೀರ ಪೊಲೀಸ್ನಲ್ಲಿ ವಿಶೇಷ ಪೊಲೀಸ್ ಅಧಿಕಾರಿ (ಎಸ್ಪಿಒ) ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ತನ್ನೀರ್ ಮೃತದೇಹವನ್ನು ಪತ್ತೆ ಹಚ್ಚಲು ಎನ್ಡಿಆರ್ಎಫ್, ಎಸ್ಡಿಆರ್ಎಫ್, ಯುಡಿಆರ್ಎಫ್, ಪೊಲೀಸ್, ಕ್ಯುಆರ್ಟಿ, ನಾಗರಿಕ ಆಡಳಿತದ ಸಿಬ್ಬಂದಿ ಹಾಗೂ ಸ್ಥಳೀಯ ಸ್ವಯಂಸೇವಕರು ಶೋಧ ಕಾರ್ಯಾಚರಣೆಯನ್ನು ನಾಲ್ಕನೆಯ ದಿನವಾದ ಬುಧವಾರ ಕೂಡ ಮುಂದುವರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಲವಾದ ನೀರಿನ ಪ್ರವಾಹ ಹಾಗೂ ನೀರಿನ ಆಳ ರಕ್ಷಣಾ ಪ್ರಯತ್ನಕ್ಕೆ ಅಡ್ಡಿ ಉಂಟು ಮಾಡುತ್ತಿದೆ. ಆದ್ದರಿಂದ ಮೃತದೇಹ ಇದುವರೆಗೆ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತದೇಹ ಪತ್ತೆಯಾಗುವವರೆಗೆ ಶೋಧ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ರಾಂಬನ್ ಪೊಲೀಸ್ ಅಧೀಕ್ಷಕ ಅರುಣ್ ಗುಪ್ತಾ ತಿಳಿಸಿದ್ದಾರೆ.
