ಬಿಹಾರ ಪ್ರವೇಶಿಸಿದ ಪಾಕ್ ಉಗ್ರರು – ಚುನಾವಣೆಗೂ ಮುನ್ನ ಎಚ್ಚರಿಕೆ

ಪಾಟ್ನಾ: ವಿಧಾನಸಭೆ ಚುನಾವಣೆಗೂ ಮುನ್ನ ಬಿಹಾರದಲ್ಲಿ ಭಯೋತ್ಪಾದಕರ ಆತಂಕ ಎದುರಾಗಿದೆ. ನೇಪಾಳ ಗಡಿಯ ಮೂಲಕ ಮೂವರು ಪಾಕಿಸ್ತಾನಿ ಭಯೋತ್ಪಾದಕರು ಬಿಹಾರ ರಾಜ್ಯವನ್ನು ಪ್ರವೇಶಿಸಿದ್ದಾರೆ ಎಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆಗಳು ರಾಜ್ಯದಲ್ಲಿ ತೀವ್ರ ಕಟ್ಟೆಚ್ಚರ ವಹಿಸಿವೆ.

ಬಿಹಾರ ಪೊಲೀಸರು ಗಡಿ ಪ್ರದೇಶಗಳಲ್ಲಿ ವಾಹನ ತಪಾಸಣೆಯನ್ನು ಚುರುಕುಗೊಳಿಸಿದ್ದು, ಎಲ್ಲಾ ಜಿಲ್ಲೆಗಳ ಪೊಲೀಸ್ ಠಾಣೆಗಳಿಗೂ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ. ಅಲ್ಲದೆ ಈ ಉಗ್ರರ ಬಗ್ಗೆ ಮಾಹಿತಿ ನೀಡಿದವರಿಗೆ 50,000 ರೂ. ಬಹುಮಾನ ನೀಡುವುದಾಗಿಯೂ ಘೋಷಿಸಲಾಗಿದೆ.
ಈ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿರುವ ಮೋತಿಹಾರಿ ಎಸ್ಪಿ ಸ್ವರ್ಣ ಪ್ರಭಾತ್, “ಇಂದು ಗುಪ್ತಚರ ಇಲಾಖೆಗಳಿಂದ ಮಾಹಿತಿ ಬಂದಿದ್ದು, ನಾವು ಅತ್ಯಂತ ಜಾಗರೂಕರಾಗಿದ್ದೇವೆ. ಗಡಿ ಭಾಗಗಳಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದೇವೆ. ಜಿಲ್ಲೆಯ ಎಲ್ಲಾ ಪೊಲೀಸ್ ಸಿಬ್ಬಂದಿ ಮತ್ತು ಠಾಣೆಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ. ಮೂವರು ಶಂಕಿತರ ಮೇಲೆ 50,000 ರೂ. ಬಹುಮಾನ ಘೋಷಿಸಲಾಗಿದೆ. ಅವರನ್ನು ಎಲ್ಲಾದರೂ ನೋಡಿದರೆ ತಕ್ಷಣ ಪೊಲೀಸರಿಗೆ ತಿಳಿಸುವಂತೆ ಜನರಲ್ಲಿ ಮನವಿ ಮಾಡಲಾಗಿದೆ. ನಾವು ಸಂಪೂರ್ಣ ಸನ್ನದ್ಧರಾಗಿದ್ದೇವೆ,” ಎಂದು ತಿಳಿಸಿದ್ದಾರೆ.
ಉಗ್ರರ ವಿವರ ಮತ್ತು ಪಾಸ್ಪೋರ್ಟ್ ಫೋಟೋ ಬಿಡುಗಡೆ
ಪೊಲೀಸರು ಈ ಮೂವರು ‘ವಾಂಟೆಡ್’ ಉಗ್ರರ ಪಾಸ್ಪೋರ್ಟ್ ಫೋಟೋಗಳನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಹಸನೈನ್, ಆದಿಲ್ ಮತ್ತು ಉಸ್ಮಾನ್ ಎಂದು ಗುರುತಿಸಲಾದ ಈ ಉಗ್ರರು ಕ್ರಮವಾಗಿ ಪಾಕಿಸ್ತಾನದ ರಾವಲ್ಪಿಂಡಿ, ಉಮರ್ಕೋಟ್ ಮತ್ತು ಬಹವಾಲ್ಪುರದ ನಿವಾಸಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.
ಗಮನಾರ್ಹವಾಗಿ, ಬಹವಾಲ್ಪುರವು ಜೈಶ್ – ಎ – ಮೊಹಮ್ಮದ್ ಉಗ್ರ ಸಂಘಟನೆಗೆ ತರಬೇತಿ ಮತ್ತು ಆಶ್ರಯ ನೀಡುವ ತಾಣವಾಗಿ ಕುಖ್ಯಾತಿ ಪಡೆದಿದ್ದು, ಭಾರತವು ‘ಆಪರೇಷನ್ ಸಿಂಧೂರ’ದ ಅಡಿಯಲ್ಲಿ ಗುರಿಯಾಗಿಸಿಕೊಂಡಿದ್ದ ಪಾಕಿಸ್ತಾನದ ಸ್ಥಳಗಳಲ್ಲಿ ರಾವಲ್ಪಿಂಡಿ ಮತ್ತು ಇದೇ ಬಹವಾಲ್ಪುರ ಕೂಡ ಸೇರಿವೆ.
ಗುಪ್ತಚರ ಮೂಲಗಳ ಪ್ರಕಾರ, ಈ ಮೂವರೂ ಆಗಸ್ಟ್ ಎರಡನೇ ವಾರದಲ್ಲಿ ಕಠ್ಮಂಡುವಿಗೆ ಬಂದಿದ್ದರು. ಇವರುಗಳೆಲ್ಲ ಕಳೆದ ವಾರ ನೇಪಾಳದ ಅರಾರಿಯಾ ಜಿಲ್ಲೆಯ ಮೂಲಕ ಬಿಹಾರ ಪ್ರವೇಶಿಸಿರಬಹುದು ಎಂದು ಶಂಕಿಸಲಾಗಿದೆ. ಈ ಉಗ್ರರು ದೇಶದ ಯಾವುದಾದರೂ ಭಾಗದಲ್ಲಿ ವಿಧ್ವಂಸಕ ಕೃತ್ಯ ಎಸಗುವ ಆತಂಕವಿದ್ದು, ಬಿಹಾರದಲ್ಲಿ ಚುನಾವಣೆ ಸಮೀಪಿಸುತ್ತಿರುವುದರಿಂದ ಇಲ್ಲೇ ದುಷ್ಕೃತ್ಯಗಳನ್ನು ನಡೆಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತನಿಖೆ ಮುಂದುವರಿದಿದೆ.