‘ವಂದೇ ಮಾತರಂ’ ಸ್ಥಾನಮಾನಕ್ಕೆ ಉವೈಸಿ ಆಕ್ಷೇಪ: ಕೇಂದ್ರದ ನಿರ್ಧಾರಕ್ಕೆ ವಿರೋಧ.

ಹೊಸದಿಲ್ಲಿ: ಎಐಎಂಐಎಂ ಅಧ್ಯಕ್ಷ ಹಾಗೂ ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿಯವರು ‘ವಂದೇ ಮಾತರಂ’ ಗೀತೆಗೆ ರಾಷ್ಟ್ರಗೀತೆ ‘ಜನ ಗಣ ಮನ’ದ ಸ್ಥಾನಮಾನವನ್ನು ನೀಡುವ ಕೇಂದ್ರ ಸಂಪುಟದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಂದೇ ಮಾತರಂ ದೇವಿಯನ್ನು ಸ್ತುತಿಸುವ ಗೀತೆಯಾಗಿರುವುದರಿಂದ ಅದನ್ನು ರಾಷ್ಟ್ರಗೀತೆಗೆ ಸಮಾನವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ದೇಶವು ದೇವರ ಹೆಸರಿನಿಂದ ನಡೆಯುವುದಿಲ್ಲ ಮತ್ತು ದೇಶವು ಯಾವುದೇ ಒಂದು ದೇವರು ಅಥವಾ ದೇವಿಗೆ ಸೇರಿದ್ದಲ್ಲ ಎಂದು ಅವರು ಹೇಳಿದ್ದಾರೆ.

‘ಜನ ಗಣ ಮನ’ವು ಭಾರತ ಮತ್ತು ಅದರ ಜನತೆಯ ಕುರಿತಾಗಿದೆ, ಯಾವುದೇ ನಿರ್ದಿಷ್ಟ ಧರ್ಮವಲ್ಲ. ವಂದೇ ಮಾತರಂ ಅನ್ನು ರಚಿಸಿದ ವ್ಯಕ್ತಿ ಬ್ರಿಟಿಷ್ ಆಡಳಿತದ ಪರ ಸಹಾನುಭೂತಿ ಹೊಂದಿದ್ದರು ಮತ್ತು ಮುಸ್ಲಿಮರನ್ನು ದ್ವೇಷಿಸುತ್ತಿದ್ದರು. ನೇತಾಜಿ, ಗಾಂಧಿ, ನೆಹರು ಮತ್ತು ಟಾಗೋರ್ ಎಲ್ಲರೂ ವಂದೇ ಮಾತರಂ ಅನ್ನು ತಿರಸ್ಕರಿಸಿದ್ದರು ಎಂದು ಉವೈಸಿ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ವಂದೇ ಮಾತರಂ ಗೀತೆಗೆ ಜನ ಗಣ ಮನದ ಸ್ಥಾನಮಾನ ನೀಡಿಕೆಯನ್ನು ಕೇಂದ್ರ ಸಂಪುಟವು ಅನುಮೋದಿಸಿರುವ ಕುರಿತು ಮಾಧ್ಯಮ ವರದಿಯನ್ನೂ ಅವರು ಹಂಚಿಕೊಂಡಿದ್ದಾರೆ.
ಭಾರತದ ಸಂವಿಧಾನವನ್ನು ಪ್ರಸ್ತಾಪಿಸಿರುವ ಉವೈಸಿ, ಅದರ ಪೀಠಿಕೆಯು ‘ನಾವು, ಜನರು’ ಎಂಬ ಪದಗಳಿಂದ ಆರಂಭವಾಗುತ್ತದೆಯೇ ಹೊರತು ‘ಭಾರತ ಮಾತಾ’ದಿಂದಲ್ಲ. ಅದು ಚಿಂತನೆ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಆರಾಧನೆಯ ಸ್ವಾತಂತ್ರ್ಯವನ್ನು ನೀಡುತ್ತದೆ ಎಂದು ಹೇಳಿದ್ದಾರೆ. ಸಂವಿಧಾನದ ಪ್ರಥಮ ನಿಬಂಧನೆಯಾಗಿರುವ ವಿಧಿ 1 ‘ಇಂಡಿಯಾ, ಅಂದರೆ ಭಾರತ ರಾಜ್ಯಗಳ ಒಕ್ಕೂಟವಾಗಿದೆ’ ಎಂದು ಬಣ್ಣಿಸಿದೆ ಎಂದೂ ತಿಳಿಸಿದ್ದಾರೆ.
ಸಂವಿಧಾನ ಸಭೆಯಲ್ಲಿ ಕೆಲವು ಸದಸ್ಯರು ಪೀಠಿಕೆಯು ದೇವಿಯ ಹೆಸರಿನಿಂದ ಆರಂಭಗೊಳ್ಳಬೇಕು ಎಂದು ಬಯಸಿದ್ದರು ಮತ್ತು ಅವರು ವಂದೇ ಮಾತರಂ ಅನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದ್ದರು. ಇತರರು ಪೀಠಿಕೆಯು ‘ದೇವರ ಹೆಸರಿನಿಂದ’ ಆರಂಭಗೊಳ್ಳಬೇಕು ಮತ್ತು ‘ಅದರ ಪ್ರಜೆಗಳು’ ಬದಲಿಗೆ ‘ಆಕೆಯ ಪ್ರಜೆಗಳು’ ಎಂಬ ಪದಗಳನ್ನು ಬಳಸಬೇಕು ಎಂದು ಬಯಸಿದ್ದರು. ಆದರೆ ಈ ಎಲ್ಲ ತಿದ್ದುಪಡಿಗಳು ತಿರಸ್ಕೃತಗೊಂಡಿದ್ದವು ಎಂದು ಉವೈಸಿ ಹೇಳಿದ್ದಾರೆ.
ಬಿಜೆಪಿ ಟೀಕೆ
ಸರಕಾರದ ನಿರ್ಧಾರವನ್ನು ವಿರೋಧಿಸಿ ಉವೈಸಿ ನೀಡಿದ ಹೇಳಿಕೆಗಳನ್ನು ಆಕ್ಷೇಪಿಸಿರುವ ತೆಲಂಗಾಣ ಬಿಜೆಪಿ ಅಧ್ಯಕ್ಷ ಎನ್. ರಾಮಚಂದ್ರ ರಾವ್ ಅವರು, ಎಐಎಂಐಎಂ ನಾಯಕತ್ವವು ಯಾವುದೇ ರೀತಿಯ ಸಾಂಸ್ಕೃತಿಕ ಏಕೀಕರಣವನ್ನು ಧಾರ್ಮಿಕ ಬಹುತ್ವಕ್ಕೆ ಬೆದರಿಕೆಯಾಗಿ ನೋಡುತ್ತದೆ. ಅದು ಕೇವಲ ಉವೈಸಿಗೆ ಸೀಮಿತವಲ್ಲ, ಜಿನ್ನಾ ಕೂಡ ಇದೇ ದಾರಿಯನ್ನು ಅನುಸರಿಸಿದ್ದರು ಎಂದಿದ್ದಾರೆ.