ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ: ಮತಾಂತರ ಆರೋಪಿಸಿ ಕಿಡಿಗೇಡಿಗಳಿಂದ ಧ್ವಂಸ

ಜೈಪುರ: ರಾಜಸ್ಥಾನದ ನಾಗೌರ್ನಲ್ಲಿ ಖಾಸಗಿ ಶಾಲೆಯೊಂದರಲ್ಲಿ ಕ್ರಿಸ್ಮಸ್ ಆಚರಣೆಗೆ ಬಲಪಂಥೀಯ ಕಾರ್ಯಕರ್ತರು ಅಡ್ಡಿಪಡಿಸಿದ್ದಾರೆ. ಶಾಲೆಯಲ್ಲಿ ಅಕ್ರಮ ಧಾರ್ಮಿಕ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ಅಲಂಕಾರಿಕ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ವರದಿಯಾಗಿದೆ.


ಸ್ಥಳೀಯ ಪೊಲೀಸರ ಪ್ರಕಾರ, ಆರಂಭದಲ್ಲಿ ಬಜರಂಗದಳದ ಸದಸ್ಯರು ಎಂದು ಗುರುತಿಸಿಕೊಂಡ ಮೂವರು ವ್ಯಕ್ತಿಗಳು, ಸೇಂಟ್ ಕ್ಸೇವಿಯರ್ಸ್ ಶಾಲೆಗೆ ಆಗಮಿಸಿದರು. ಈ ಶಾಲೆಯು ಯಾವುದೇ ಮಿಷನರಿ ಟ್ರಸ್ಟ್ನ ಒಡೆತನದಲ್ಲಿರದೆ ಖಾಸಗಿ ಒಡೆತನದಲ್ಲಿದೆ. ಕ್ರಿಸ್ಮಸ್ ಆಚರಣೆಗಳಿಗೆ ಈ ಮೂವರು ಆಕ್ಷೇಪ ವ್ಯಕ್ತಪಡಿಸಿ, ಧಾರ್ಮಿಕ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಇತರರು ಕೂಡ ಅವರ ಜೊತೆ ಸೇರಿದ್ದಾರೆ ಎಂದು ಹೇಳಲಾಗಿದೆ.

ಶಾಲಾ ಮಾಲಕ ಶೈತಾನ್ ರಾಮ್ ಚಂಗಲ್ ಈ ಕುರಿತು ಪ್ರತಿಕ್ರಿಯಿಸಿದ್ದು, “ದುಷ್ಕರ್ಮಿಗಳ ಗುಂಪು ಮಕ್ಕಳನ್ನು ಬೆದರಿಸಿ ಶಿಕ್ಷಕರೊಂದಿಗೆ ಗಲಾಟೆಯಲ್ಲಿ ತೊಡಗಿತ್ತು. ನಾನು ಸ್ಥಳಕ್ಕೆ ತೆರಳಿದಾಗ ಅವರು ನನ್ನ ಮೇಲೆ ಕೂಡ ಹಲ್ಲೆ ನಡೆಸಲು ಪ್ರಾರಂಭಿಸಿದರು. ಶಾಲಾ ಸಿಬ್ಬಂದಿ ಮೂವರು ವ್ಯಕ್ತಿಗಳನ್ನು ತಡೆಯುವಲ್ಲಿ ಯಶಸ್ವಿಯಾದರು. ಗುಂಪು ಸ್ಥಳದಿಂದ ತೆರಳುವ ಮೊದಲು ಬಲೂನ್ಗಳು ಸೇರಿದಂತೆ ಕ್ರಿಸ್ಮಸ್ ಅಲಂಕಾರಿಕ ವಸ್ತುಗಳನ್ನು ಕಿತ್ತು ಹಾಕಿದೆ. ಮೇಜುಗಳು ಮತ್ತು ಸ್ಟೂಲ್ಗಳಿಗೆ ಹಾನಿ ಮಾಡಿದೆ,” ಎಂದು ತಿಳಿಸಿದ್ದಾರೆ.
ಘಟನೆ ಬಗ್ಗೆ ಶಾಲಾ ಸಿಬ್ಬಂದಿ ಕೊಟ್ವಾಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಟ್ವಾಲಿ ಪೊಲೀಸ್ ಠಾಣಾ ಎಸ್ಎಚ್ಒ ವೇದಪಾಲ್ ಶಿವರಾನ್ ಘಟನೆಯನ್ನು ದೃಢಪಡಿಸಿದ್ದು, “ಈ ಬಗ್ಗೆ ಶಾಲಾ ಆಡಳಿತ ಯಾವುದೇ ಲಿಖಿತ ದೂರು ದಾಖಲಿಸಿಲ್ಲ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ. ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ,” ಎಂದು ತಿಳಿಸಿದ್ದಾರೆ.