ಮಲಯಾಳಂ ಚಿತ್ರರಂಗದ ಧ್ರುವತಾರೆ ಶ್ರೀನಿವಾಸನ್ ಅಸ್ತಮಯ: 69ನೇ ವಯಸ್ಸಿನಲ್ಲಿ ಹಿರಿಯ ನಟ-ನಿರ್ದೇಶಕ ನಿಧನ; ಕಂಬನಿ ಮಿಡಿದ ಸಿನಿಕಲಾ ಲೋಕ!

ಕೇರಳ: ಮಲಯಾಳಂ ಚಿತ್ರರಂಗದ ಖ್ಯಾತ ನಟ, ತೀಕ್ಷ್ಣ ಬರಹಗಾರ ಹಾಗೂ ಖ್ಯಾತ ನಿರ್ದೇಶಕ ಶ್ರೀನಿವಾಸನ್ (69) ಅವರು ಇಂದು (ಡಿಸೆಂಬರ್ 20) ಕೇರಳದ ಉದಯಂಪೆರೂರ್ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಕಳೆದ ಹಲವು ವರ್ಷಗಳಿಂದ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ಅವರು, ಇತ್ತೀಚೆಗೆ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟ ಹಿನ್ನೆಲೆಯಲ್ಲಿ ಸಿನಿಮಾ ರಂಗದಿಂದ ದೂರ ಉಳಿದು ವಿಶ್ರಾಂತಿ ಪಡೆಯುತ್ತಿದ್ದರು. ದಶಕಗಳ ಕಾಲ ಮಲಯಾಳಂ ಚಿತ್ರರಂಗದ ಆಧಾರಸ್ತಂಭಗಳಲ್ಲಿ ಒಬ್ಬರಾಗಿದ್ದ ಇವರು, ನಟನಾಗಿ ಮಾತ್ರವಲ್ಲದೆ ಚಿತ್ರಕಥೆಗಾರನಾಗಿ ಸಮಾಜದ ಅಂಕುಡೊಂಕುಗಳನ್ನು ಹಾಸ್ಯದ ಮೂಲಕ ವಿಡಂಬನೆ ಮಾಡುತ್ತಾ ಪ್ರೇಕ್ಷಕರ ಮನ ಗೆದ್ದಿದ್ದರು.


1956ರಲ್ಲಿ ಕಣ್ಣೂರಿನಲ್ಲಿ ಜನಿಸಿದ ಶ್ರೀನಿವಾಸನ್, ಅರ್ಥಶಾಸ್ತ್ರ ಪದವಿಯ ನಂತರ ಚೆನ್ನೈನಲ್ಲಿ ಸಿನಿಮಾ ತರಬೇತಿ ಪಡೆದು 1976ರ ‘ಮನಿಮುಳಕ್ಕಮ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಸುಮಾರು 40 ವರ್ಷಗಳ ವೃತ್ತಿಜೀವನದಲ್ಲಿ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಇವರು, ಮಲಯಾಳಂ ಚಿತ್ರರಂಗದ ಸುವರ್ಣ ಯುಗದ ಭಾಗವಾಗಿದ್ದರು.

ಶ್ರೀನಿವಾಸನ್ ಅವರು ಕೇವಲ ನಟನಾಗಿರದೇ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದರು. ಮಮ್ಮೂಟ್ಟಿ ಹಾಗೂ ನಿವೀನ್ ಪೌಲಿ ಅವರಂತಹ ಸ್ಟಾರ್ ನಟರಿಗೆ ಸಿನಿಮಾ ನಿರ್ದೇಶನ ಮಾಡಿದ್ದ ಇವರು, ಹಲವು ಕೇರಳ ರಾಜ್ಯ ಪ್ರಶಸ್ತಿ ಹಾಗೂ ಫಿಲ್ಮ್ಫೇರ್ ಗೌರವಗಳಿಗೆ ಪಾತ್ರರಾಗಿದ್ದಾರೆ. ಮೋಹನ್ಲಾಲ್ ಅವರೊಂದಿಗೆ ಇವರು ನಟಿಸಿದ ಸಿನಿಮಾಗಳು ಇಂದಿಗೂ ಮಲಯಾಳಂ ಚಿತ್ರರಂಗದ ಮಾಸ್ಟರ್ ಪೀಸ್ಗಳಾಗಿ ಉಳಿದಿವೆ. ಅವರ ಇಬ್ಬರು ಪುತ್ರರಾದ ವಿನೀತ್ ಹಾಗೂ ಧ್ಯಾನ್ ಶ್ರೀನಿವಾಸನ್ ಕೂಡ ಪ್ರಸ್ತುತ ಚಿತ್ರರಂಗದಲ್ಲಿ ಯಶಸ್ವಿ ನಟ ಮತ್ತು ನಿರ್ದೇಶಕರಾಗಿ ಸಕ್ರಿಯರಾಗಿದ್ದಾರೆ. ಶ್ರೀನಿವಾಸನ್ ಅವರ ಅಗಲಿಕೆಗೆ ದಕ್ಷಿಣ ಭಾರತದ ಚಿತ್ರರಂಗದ ಗಣ್ಯರು ಹಾಗೂ ಸಾವಿರಾರು ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದು, ಕಲಾ ಲೋಕದ ಅಪೂರ್ವ ಕೊಂಡಿಯೊಂದು ಕಳಚಿದಂತಾಗಿದೆ. ಅವರ ನಿಧನವು ಮಲಯಾಳಂ ಚಿತ್ರರಂಗಕ್ಕೆ ಎಂದೂ ತುಂಬಲಾರದ ನಷ್ಟವಾಗಿದೆ.
