ಮೀರತ್: ಇಬ್ಬರು ಮುಸ್ಲಿಂ ಯುವಕರನ್ನು ಸಿಲುಕಿಸಲು ಸಂಚು; ಸಂಘ ಪರಿವಾರದ ಮುಖಂಡನ ವಿರುದ್ಧ ಪ್ರಕರಣ ದಾಖಲು!

ಮೀರತ್: ಹಿಂದೂ ಮಹಿಳೆಯೊಬ್ಬರ ಅಪಹರಣದ ಆರೋಪದ ಮೂಲಕ ಇಬ್ಬರು ಮುಸ್ಲಿಂ ಯುವಕರನ್ನು ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿಸಲು ಸಂಘ ಪರಿವಾರದ ಮುಖಂಡನೊಬ್ಬ ಸಂಚು ರೂಪಿಸಿದ್ದ ಎಂಬುದು ಮೀರತ್ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದ ಪ್ರಮುಖ ಆರೋಪಿ ನಕುಲ್ ಸಿಂಗ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು hindustantimes.com ವರದಿ ಮಾಡಿದೆ.
ಪೊಲೀಸರ ಪ್ರಕಾರ ಜೀಶನ್ ಮತ್ತು ಶವೇಜ್ ಎಂಬ ಇಬ್ಬರು ಯುವಕರ ವಿರುದ್ಧ ಸುಳ್ಳು ಆರೋಪ ಹೊರಿಸಲು ನಕುಲ್ ಸಿಂಗ್ ಈ ಸಂಚು ರೂಪಿಸಿದ್ದಾನೆ. ನಕುಲ್, ಜೀಶನ್ ಮತ್ತು ಶವೇಝ್ ಮೂವರೂ 20 ವರ್ಷ ವಯಸ್ಸಿನವರು.

ಶನಿವಾರ ನಕುಲ್ ಪೊಲೀಸರಿಗೆ ಕರೆ ಮಾಡಿ, ಜೀಶನ್ ಮತ್ತು ಶವೇಝ್ ಹಿಂದೂ ಮಹಿಳೆಯೊಬ್ಬರನ್ನು ಅಪಹರಿಸಿ ಕಾರಿನಲ್ಲಿ ಕರೆದೊಯ್ಯುತ್ತಿದ್ದಾರೆ ಎಂದು ಆರೋಪಿಸಿದ್ದ. ಇಬ್ಬರೂ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದು ಮೆಡಿಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ರಿಂಗ್ ರಸ್ತೆ ಪ್ರದೇಶದಲ್ಲಿ ಆಕೆಯನ್ನು ಬಿಟ್ಟು ಪರಾರಿಯಾಗಲು ಯತ್ನಿಸುತ್ತಿದ್ದಾರೆ ಎಂದೂ ಹೇಳಿದ್ದ.
ತಾನು ಮತ್ತು ತನ್ನ ಸಹಚರರು ಇಬ್ಬರು ಯುವಕರನ್ನು ತಡೆದಿದ್ದು, ಮಹಿಳೆ ಸ್ಥಳದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾಳೆ ಎಂದು ನಕುಲ್ ಪೊಲೀಸರಿಗೆ ಮಾಹಿತಿ ನೀಡಿದ್ದ. ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು ಮಹಿಳೆಯನ್ನು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ, ಜೀಶನ್ ಮತ್ತು ಶವೇಜ್ ಅವರನ್ನು ವಶಕ್ಕೆ ಪಡೆದು ವಾಹನವನ್ನು ಜಪ್ತಿ ಮಾಡಿದ್ದರು.
ನಕುಲ್ ನೀಡಿದ ದೂರಿನ ಆಧಾರದಲ್ಲಿ ಆರಂಭದಲ್ಲಿ ಇಬ್ಬರು ಯುವಕರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆದರೆ ತನಿಖೆ ಮುಂದುವರಿದಂತೆ ನಕುಲ್ ಹೇಳಿಕೆಯಲ್ಲಿ ಹಲವು ಅನುಮಾನಗಳು ಮೂಡಿದವು.
ಪ್ರಜ್ಞೆಗೆ ಮರಳಿದ ಬಳಿಕ ಮಹಿಳೆ, ನಕುಲ್ ಹಿಂದೂ ಸಂಘಟನೆಯೊಂದರೊಂದಿಗೆ ಸಂಪರ್ಕ ಹೊಂದಿದ್ದು, ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ತನ್ನನ್ನು ಸಂಪರ್ಕಿಸಿದ್ದ ಎಂದು ಪೊಲೀಸರಿಗೆ ತಿಳಿಸಿದ್ದಾಳೆ.
ಸಿವಿಲ್ ಲೈನ್ಸ್ ವೃತ್ತಾಧಿಕಾರಿ ಶುಭಿತಾ ಸಿಂಗ್ ಅವರ ಪ್ರಕಾರ, ನಕುಲ್ ಉದ್ದೇಶಪೂರ್ವಕವಾಗಿ ತನ್ನನ್ನು ಜೀಶನ್ ಮತ್ತು ಶವೇಝ್ ಅವರೊಂದಿಗೆ ಕಳುಹಿಸಿದ್ದಾನೆ ಎಂದು ಮಹಿಳೆ ಹೇಳಿಕೆ ನೀಡಿದ್ದಾಳೆ. ಪ್ರಾಥಮಿಕ ತನಿಖೆಯಲ್ಲಿ ಮಹಿಳೆಯನ್ನು ಇಬ್ಬರು ಯುವಕರೊಂದಿಗೆ ಕಳುಹಿಸಲು ನಕುಲ್ ವ್ಯವಸ್ಥೆ ಮಾಡಿದ್ದನು ಮತ್ತು ಬಳಿಕ ರಿಂಗ್ ರಸ್ತೆ ಪ್ರದೇಶದಲ್ಲಿ ಆಕೆಯನ್ನು ಬಿಟ್ಟುಬಿಡುವ ಯೋಜನೆ ರೂಪಿಸಿದ್ದನು ಎಂಬುದು ಗೊತ್ತಾಗಿದೆ. ಈ ಕಾರ್ಯಕ್ಕೆ ಸಹಕರಿಸಿದರೆ ಹಣ ನೀಡುವುದಾಗಿ ನಕುಲ್ ಭರವಸೆ ನೀಡಿದ್ದ ಎಂದು ಮಹಿಳೆ ಆರೋಪಿಸಿದ್ದಾಳೆ.
ವಿಚಾರಣೆ ವೇಳೆ ಜೀಶನ್ ಮತ್ತು ಶವೇಝ್ ತಾವು ನಿರಪರಾಧಿಗಳಾಗಿದ್ದು ಘಟನೆಗೆ ಮುನ್ನ ಮಹಿಳೆಯನ್ನು ಎಂದಿಗೂ ಭೇಟಿಯಾಗಿರಲಿಲ್ಲ ಎಂದು ತಿಳಿಸಿದ್ದಾರೆ.
ಪ್ರಕರಣದ ತನಿಖೆಯ ಭಾಗವಾಗಿ ಪೊಲೀಸರು 500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಸಂಬಂಧಪಟ್ಟ ಎಲ್ಲರ ಕರೆ ವಿವರಗಳ ದಾಖಲೆಯನ್ನು ವಿಶ್ಲೇಷಿಸಿದ್ದಾರೆ. ಅಲ್ಲದೆ, ಎಲ್ಲರನ್ನೂ ವಿವರವಾಗಿ ವಿಚಾರಣೆ ನಡೆಸಿದ್ದಾರೆ.
ಸಂಗ್ರಹಿಸಲಾದ ಸಾಕ್ಷ್ಯಗಳು ಮಹಿಳೆಯ ಹೇಳಿಕೆಯನ್ನು ದೃಢಪಡಿಸಿವೆ. ಜೊತೆಗೆ, ಜೀಶನ್ ಮತ್ತು ಶವೇಝ್ ವಿರುದ್ಧ ಮಾಡಲಾದ ಆರೋಪಗಳಿಗೆ ವಿರುದ್ಧವಾದ ಪುರಾವೆಗಳೂ ಲಭ್ಯವಾಗಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಲಭ್ಯವಿರುವ ಸಾಕ್ಷಾಧಾರಗಳ ಆಧಾರದಲ್ಲಿ ನಕುಲ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತನ ಬಂಧನಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.