ಮಂಗಳೂರು ಆಟೋ ಚಾಲಕನ ಮೇಲೆ ಹಲ್ಲೆ ಸುದ್ದಿ ಸುಳ್ಳು: ತನಿಖೆಯಲ್ಲಿ ಬಯಲಾದ ನಾಟಕ

ಮಂಗಳೂರು : ಇತ್ತೀಚೆಗೆ ಆಟೋ ಚಾಲಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂಬ ಕುರಿತಂತೆ ಪ್ರಕರಣ ದಾಖಲಾಗಿತ್ತು, ಆದರೆ ಪೊಲೀಸರು ತನಿಖೆ ನಡೆಸಿದಾಗ ಇದೀಗ ಆಟೋ ಚಾಲಕನೇ ತನ್ನ ಮೇಲೆ ತಾನೇ ಹಲ್ಲೆ ಮಾಡಿಕೊಂಡು ಬಳಿಕ ಹಲ್ಲೆ ನಡೆಸಿದ್ದಾಗಿ ಸುಳ್ಳು ಸುದ್ದಿ ಹಬ್ಬಿಸಿರುವುದು ತಿಳಿದು ಬಂದಿದೆ.

ಆಗಸ್ಟ್ 31ರ ಭಾನುವಾರ ರಾತ್ರಿ ಬಶೀರ್ ಎನ್ನುವ ಹೆಸರಿನ ಆಟೋ ಚಾಲಕ ಮೂತ್ರ ಮಾಡಲೆಂದು ಫಳ್ನೀರ್ ನಲ್ಲಿ ಆಟೋ ನಿಲ್ಲಿಸಿದ್ದಾಗ ತನ್ನ ಮೇಲೆ ತಂಡವೊಂದು ಹಲ್ಲೆ ನಡೆಸಿದೆ ಎಂದು ಸುದ್ದಿ ಹಬ್ಬಿಸಿದ್ದರು. ಅಲ್ಲದೆ, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಇದರ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ತೆರಳಿ ಆಟೋ ಚಾಲಕನ ಹೇಳಿಕೆ ಪಡೆದು ಕೇಸು ದಾಖಲಿಸಿದ್ದರು. ಬ್ಯಾರಿ ಭಾಷೆ ಮಾತನಾಡುತ್ತಿದ್ದವರು ನೀನು ಪೊಲೀಸರಿಗೆ ಮಾಹಿತಿ ನೀಡ್ತಿಯಲ್ವಾ ಎಂದು ಹೇಳಿ ಹಲ್ಲೆ ನಡೆಸಿದ್ದಾಗಿ ಬಶೀರ್ ತಿಳಿಸಿದ್ದರು. ಇದರಂತೆ, ಹಲ್ಲೆ ನಡೆಸಿದವರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದರು.
ಆದರೆ ತನಿಖೆ ವೇಳೆ ಆಟೋಚಾಲಕನಿಗೆ ಹಲ್ಲೆಯಾದ ಸ್ಥಳ ತೋರಿಸಲು ಹೇಳಿದಾಗ ಆತ ಸ್ಥಳ ತೋರಿಸಿದ ಜಾಗದ ಸಿಸಿಟಿವಿ ಪರಿಶೀಲನೆ ವೇಳೆ ಹಲ್ಲೆ ನಡೆದಿದ್ದು ಕಂಡುಬರಲಿಲ್ಲ. ಹೀಗಾಗಿ ದೂರುದಾರನನ್ನು ಮತ್ತಷ್ಟು ತನಿಖೆ ನಡೆಸಿದಾಗ ಸುಳ್ಳು ದೂರು ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ಹಿಂದೆ ಪೊಲೀಸರಿಗೆ ಮಾಹಿತಿ ಕೊಟ್ಟ ವಿಚಾರದಲ್ಲಿ ಕೆಲವರು ಬೆದರಿಕೆ ಹಾಕಿದ್ದರು. ಇದರಿಂದಾಗಿ ಅವರು ದಾಳಿ ಮಾಡುತ್ತಾರೆಂಬ ಭಯ ಇದ್ದುದರಿಂದ ಅದಕ್ಕು ಮೊದಲೇ ದಾಳಿಯ ನಾಟಕ ಮಾಡಿದ್ದೇನೆ ಎಂದು ಹೇಳಿದ್ದಾನೆ.
ತಾನೇ ಹೊಟ್ಟೆಯ ಭಾಗಕ್ಕೆ ಸ್ವಲ್ಪ ತಿವಿದು ಗಾಯ ಮಾಡಿಕೊಂಡಿದ್ದು ಯಾರೋ ಹಲ್ಲೆ ನಡೆಸಿದ್ದಾರೆಂದು ಹೇಳಿದ್ದ. ಪೊಲೀಸ್ ತನಿಖೆಯಲ್ಲಿ ನೈಜ ವಿಷಯ ತಿಳಿಯುತ್ತಲೇ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಸ್ಪಷ್ಟನೆ ಹಾಕಿದ್ದಾರೆ. ಸುಳ್ಳು ಭಾರೀ ವೇಗದಲ್ಲಿ ಓಡುತ್ತದೆ, ಸತ್ಯ ಕುಂಟುತ್ತಾ ಬಂದು ಎದುರು ನಿಲ್ಲುತ್ತದೆ. ಈ ವಿಚಾರದಲ್ಲು ಅದೇ ರೀತಿ ಆಗಿದೆ. ಆಟೋ ಚಾಲಕನಿಗೆ ಹಲ್ಲೆಯೆಂದು ಭಾರೀ ವೇಗದಲ್ಲಿ ಸುದ್ದಿ ಓಡಿತ್ತು. ಒಂದ್ವೇಳೆ, ಹಿಂದುಗಳು ಹಲ್ಲೆ ಮಾಡಿದ್ದಾರೆಂದು ಆತ ಹೇಳಿರುತ್ತಿದ್ದರೆ ಪರಿಸ್ಥಿತಿ ಬೇರೆಯೇ ಆಗುತ್ತಿತ್ತು. ಜಾಲತಾಣದಲ್ಲಿ ವಿಭಿನ್ನ ರೀತಿಯಲ್ಲಿ ಸುದ್ದಿ ಓಡುತ್ತಿತ್ತು. ಪೊಲೀಸರ ವಿಚಾರಣೆಯಲ್ಲಿ ಹಲ್ಲೆಯೇ ಆಗಿಲ್ಲ ಎನ್ನುವ ನೈಜ ವಿಷಯ ಗೊತ್ತಾಗಿದೆ. ಸುದ್ದಿ ಹಂಚಿಕೊಳ್ಳುವಾಗ ಸಾರ್ವಜನಿಕರು ಜಾಗ್ರತೆ ವಹಿಸಬೇಕು ಎಂದು ಸುಧೀರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
