ಲೋ ಬಿಪಿಯ ಅವಾಂತರ: ತೆಂಗಿನಮರದಿಂದ ಬಿದ್ದು ವ್ಯಕ್ತಿ ಸಾವು

ಉಳ್ಳಾಲ : ತೆಂಗಿನ ಮರವೇರಿ ಶೇಂದಿ ತೆಗೆಯುತ್ತಿದ್ದ ವೇಳೆ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಮೂರ್ತೆದಾರನೋರ್ವ ಸಾವನ್ನಪ್ಪಿದ ಘಟನೆ ಕೊಲ್ಯ ಕಣೀರುತೋಟ ಎಂಬಲ್ಲಿ ನಡೆದಿದೆ.
ಕೊಲ್ಯ ಕಣೀರುತೋಟ, ಬಲ್ಯ ನಡುಪೊಲಿಕೆ ನಿವಾಸಿ ಯಶೋಧರ (46) ಮೃತಪಟ್ಟ ದುರ್ದೈವಿ. ಯಶೋಧರ್ ಅವರು ಇಂದು ಬೆಳಗ್ಗೆ ತನ್ನ ಮನೆ ಬಳಿಯ ತೋಟವೊಂದರಲ್ಲಿ ಮೂರ್ತೆದಾರಿಕೆ ನಡೆಸುತ್ತಿದ್ದಾಗ ಆಯ ತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಯಶೋಧರ್ ಅವರನ್ನ ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.
ಯಶೋಧರ್ ಅವರು ಇಂದು ಮುಂಜಾನೆಯೇ ಸೋಮೇಶ್ವರ ಸೋಮನಾಥ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವದ ಕುರಿತಂತೆ ತನ್ನ ಮೊಬೈಲ್ ನಲ್ಲಿ ಸ್ಟೇಟಸ್ ಹಾಕಿರೋದನ್ನ ಸ್ನೇಹಿತರು ನೋಡಿದ್ದರು. ಯಶೋಧರ್ ಅವರು ಈ ಹಿಂದೊಮ್ಮೆ ಲೋ ಬಿಪಿಯಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದರಂತೆ. ಲೋ ಬಿಪಿಯಿಂದಲೇ ಅವರಿಂದು ತೆಂಗಿನ ಮರದಿಂದ ಬಿದ್ದಿರೋದಾಗಿ ಹೇಳಲಾಗುತ್ತಿದೆ. ಅವರ ಅಕಾಲಿಕ ಸಾವು ಮನೆಮಂದಿ, ಬಂಧು ಮಿತ್ರರನ್ನ ಆಘಾತಗೊಳಿಸಿದೆ. ಮೃತ ಯಶೋಧರ್ ಪತ್ನಿ, ಪುತ್ರ, ಪುತ್ರಿಯನ್ನ ಅಗಲಿದ್ದಾರೆ.