‘ಆಪರೇಷನ್ ಸಿಂಧೂರ’ಕ್ಕೆ ಬೆಚ್ಚಿದ ಲಷ್ಕರ್ ಉಗ್ರರು: “ನಮ್ಮ ಮೂಲಸೌಕರ್ಯ ಧ್ವಂಸವಾಗಿದೆ” ಎಂದು ಒಪ್ಪಿಕೊಂಡ ಕಸೂರಿ!

ಇಸ್ಲಾಮಾಬಾದ್: ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಯ ಮೂಲಕ ಪಾಕಿಸ್ತಾನದಲ್ಲಿನ (Pakistan) ನಮ್ಮ ಮೂಲಸೌಕರ್ಯವನ್ನು ಭಾರತ ನಾಶಪಡಿಸಿದೆ ಎಂದು ಲಷ್ಕರ್-ಎ-ತೈಬಾ (Let) ಉಗ್ರ ಸಂಘಟನೆಯ ನಾಯಕ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಸೈಫುಲ್ಲಾ ಕಸೂರಿ (Saifullah Kasuri) ಒಪ್ಪಿಕೊಂಡಿದ್ದಾನೆ.


ಹಫೀಜ್ ಸಯೀದ್(Hafiz Saeed) ನೇತೃತ್ವದ ಸಂಘಟನೆಯ ಉಪ ಮುಖ್ಯಸ್ಥನಾಗಿರುವ ಸೈಫುಲ್ಲಾ ಕಸೂರಿ ಸಾವಿರಾರು ಎಲ್ಇಟಿ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಿ, ನಮ್ಮ ಶಿಬಿರಗಳ ಮೇಲೆ ದಾಳಿ ನಡೆಸಿ ಭಾರತ ತಪ್ಪು ಮಾಡಿದೆ ಎಂದು ಹೇಳಿದ್ದಾನೆ.

ಕಾಶ್ಮೀರ ಕಾರ್ಯಾಚರಣೆಯಿಂದ ಎಂದಿಗೂ ನಾವು ಹಿಂದೆ ಸರಿಯುವುದಿಲ್ಲ. ಇಡೀ ಜಗತ್ತನ್ನು ತಲೆಕೆಳಗಾಗಿ ಮಾಡಬಹುದು, ವ್ಯವಸ್ಥೆಯನ್ನು ಬದಲಾಯಿಸಬಹುದು. ಆದರೆ ನಾವು ಯಾವುದೇ ಕಾರಣಕ್ಕೂ ನಮ್ಮ ಉದ್ದೇಶಗಳಿಂದ ಹಿಂದೆ ಸರಿಯುವುದಿಲ್ಲ ಎಂದು ವಿಷ ಹೊರಹಾಕಿದ್ದಾನೆ.

ಕಾಶ್ಮೀರ, ಅಮೃತಸರ, ಹೋಶಿಯಾರ್ಪುರ, ಗುರುದಾಸ್ಪುರ್, ಜುನಾಗಢ್, ಮುನವದರ್ನ ಕೆಲವು ಭಾಗಗಳು, ಹೈದರಾಬಾದ್ ಡೆಕ್ಕನ್, ಬಂಗಾಳವನ್ನು ಪಾಕಿಸ್ತಾನದಿಂದ ಕಿತ್ತುಕೊಳ್ಳಲಾಗಿದೆ ಎಂದು ಆರೋಪಿಸಿದ್ದಾನೆ.