ಮದುವೆ ಮನೆಯಲ್ಲಿ ಅಕ್ರಮ ಜೂಜು: ಕೊಡಗು ಜಿಲ್ಲೆಯ ವಿರಾಜಪೇಟೆ ಕಲ್ಯಾಣ ಮಂಟಪದ ಮೇಲೆ ಪೊಲೀಸರ ದಾಳಿ; 8 ಮಂದಿ ವಶಕ್ಕೆ, ₹4 ಲಕ್ಷಕ್ಕೂ ಹೆಚ್ಚು ನಗದು ಜಪ್ತಿ!

ಮಡಿಕೇರಿ: ಮದುವೆ ಮನೆಯಲ್ಲಿ (Marriage Hall) ಜೂಜಾಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ (Virajpet) ಪಟ್ಟಣದ ಮೊಗರಗಲ್ಲಿರುವ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ದಾಳಿ ನಡೆದಿ ಜೂಜಿಗೆ ಬಳಸಿದ್ದ ಸುಮಾರು 4 ಲಕ್ಷ ರೂ.ಗಳನ್ನ ಜಪ್ತಿ ಮಾಡಿದ್ದು, 8 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಮದುವೆ ಸಮಾರಂಭವೊಂದಕ್ಕೆ ಬಂದಿದ್ದ ಕೆಲವರು ಹೆಚ್ಚಿನ ಪ್ರಮಾಣದ ಹಣ ಇಟ್ಕೊಂಡು ಜೂಜಾಟದಲ್ಲಿ ತೊಡಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಲ್ಯಾಣ ಮಂಟಪದ ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ್ದು, ಸುಮಾರು 4.25,545 ರೂ. ಗಳನ್ನ ಜಪ್ತಿ ಮಾಡಿದ್ದಾರೆ. ಅಲ್ಲದೇ ಜೂಜಾಟದಲ್ಲಿ ತೊಡಗಿದ್ದ 8 ಮಂದಿ ವಿರುದ್ಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದ್ದಾರೆ.
ವೀರಾಜಪೇಟೆ ಉಪ ವಿಭಾಗದ ಪ್ರಬಾರ ಪೊಲೀಸ್ ಉಪ ಅಧೀಕ್ಷಕ ಪಿ.ಚಂದ್ರಶೇಖರ್ ನಿರ್ದೇಶನದ ಮೇರೆಗೆ ವೀರಾಜಪೇಟೆ ವೃತ್ತ ನೀರಿಕ್ಷಕ ಪಿ.ಅನೂಪ್ ಮಾದಪ್ಪ ಮಾರ್ಗದರ್ಶನದಲ್ಲಿ ವೀರಾಜಪೇಟೆ ನಗರ ಠಾಣೆಯ ಪಿಎಸ್ಐ ಹೆಚ್.ಎಸ್ ಪ್ರಮೋದ್, ಅಪರಾಧ ವಿಭಾಗದ ಪಿಎಸ್ಐ ಟಿ.ಎಂ ಕಾವೇರಪ್ಪ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.