ನೇಣಿಗೆ ಶರಣಾದ ಹೋಟೆಲ್ ಉದ್ಯಮಿ

ಲಕ್ನೋ: ಪ್ರೀತಿಸಿ ಮದ್ವೆಯಾದ ಹೆಂಡ್ತಿ ಜೊತೆ ಜಗಳ ಮಾಡಿಕೊಂಡ ಹೋಟೆಲ್ ಉದ್ಯಮಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಲಕ್ನೋನಲ್ಲಿ ನಡೆದಿದೆ. ವರ್ಷಗಳ ಹಿಂದೆಯಷ್ಟೇ ಹೋಟೆಲ್ ಉದ್ಯಮಿ ಪ್ರೀತಿಸಿ ಮದುವೆಯಾಗಿದ್ದು, ಈ ಪ್ರೀತಿಗೆ ಸಾಕ್ಷಿಯಾಗಿ 8 ತಿಂಗಳ ಮಗುವಿದೆ. ಮೃತ ಹೋಟೆಲ್ ಉದ್ಯಮಿಯನ್ನು ಬದಾಯು ನಿವಾಸಿ ಶಿಶೀಷ್ ಕುಮಾರ್ ಎಂದು ಗುರುತಿಸಲಾಗಿದೆ. ಪತ್ನಿ ಮತ್ತು ಮಗಳೊಂದಿಗೆ ಶಿಶೀಷ್ ಕುಮಾರ್ ವಾಸವಾಗಿದ್ದರು. ಲೀಸ್ ಪಡೆದುಕೊಂಡು ಶಿಶೀಷ್ ಹೋಟೆಲ್ ನಡೆಸುತ್ತಿದ್ದರು. ಆದ್ರೆ ಎರಡು ತಿಂಗಳಿನಿಂದ ಹೋಟೆಲ್ ವ್ಯವಹಾರವನ್ನು ಶಿಶೀಷ್ ಬಂದ್ ಮಾಡಿಕೊಂಡಿದ್ದರು.

ಪತ್ನಿಯೊಂದಿಗೆ ಜಗಳದ ಬಳಿಕ ಕೋಪದಲ್ಲಿ ಶಿಶೀಷ್ ಕುಮಾರ್ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ಗಾರೆ ಎಂಬ ಮಾಹಿತಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ನೇಣಿಗೆ ಶರಣಾದ ಪತಿಯನ್ನು ಪತ್ನಿಯೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪರಿಶೀಲಿಸಿದ ವೈದ್ಯರು ಶಿಶೀಷ್ ಕುಮಾರ್ ಮೃತವಾಗಿರೋದನ್ನು ಖಚಿತಪಡಿಸಿದ್ದಾರೆ.
ಅವರಿಬ್ಬರಿಂದ ಮಗನಿಗೆ ಜೀವ ಬೆದರಿಕೆ ಇತ್ತು!
ಇತ್ತ ಶಿಶೀಷ್ ಕುಮಾರ್ ತಂದೆ ಕುಮಾರ್ ಸಿಂಗ್, ಸೊಸೆ ಮತ್ತು ಹೋಟೆಲ್ ಮಾಲೀಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮಗನ ಸಾವಿಗೆ ಇವರಿಬ್ಬರೇ ಕಾರಣ ಎಂದು ಆರೋಪಿಸಿರುವ ಕುಮಾರ್ ಸಿಂಗ್, ಇವರಿಬ್ಬರಿಂದಲೇ ಮಗನಿಗೆ ಜೀವ ಬೆದರಿಕೆ ಇತ್ತು ಎಂದು ಹೇಳಿದ್ದಾರೆ. ಸೊಸೆ ಮತ್ತು ಹೋಟೆಲ್ ಮಾಲೀಕರಿಂದ ಪ್ರಾಣ ಬೆದರಿಕೆ ಇದೆ ಎಂದು ಮಗ ಹೇಳಿಕೊಂಡಿದ್ದನು. ಹಾಗಾಗಿ ಕೂಡಲೇ ಲಕ್ನೋಗೆ ಬರುವಂತೆ ಹೇಳಿದ್ದ ಅಂತ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಪೋಷಕರ ಸಂಪರ್ಕಕ್ಕೆ ಸಿಗದ ಶಿಶೀಷ್ ಕುಮಾರ್
ಇದಾದ ಬಳಿಕ ಕುಟುಂಬಸ್ಥರು ಮಗನಿಗೆ ಕಾಲ್ ಮಾಡಲು ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಸೊಸೆ ಕಾಲ್ ರಿಸೀವ್ ಮಾಡಿದರೂ ಮಗನೊಂದಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಅದೇ ದಿನ ಸಂಜೆ ಮಾವನಿಗೆ ಕಾಲ್ ಮಾಡಿದ ಸೊಸೆ, ಲಕ್ನೋಗೆ ಬರುವಂತೆ ಹೇಳಿದ್ದಳು. ಲಕ್ನೋಗೆ ಪೋಷಕರು ಹೋಗುವಷ್ಟರಲ್ಲಿ ಶಿಶೀಷ್ ಕುಮಾರ್ ಮೃತರಾಗಿದ್ದರು. ಪತ್ನಿಯನ್ನು ಬದೌನ್ಗೆ ಹೋಗುವಂತೆ ಹೇಳಿದ್ದನು. ಆದ್ರೆ ಸೊಸೆ ಬದೌನ್ಗೆ ಹೋಗಿರಲಿಲ್ಲ ಎಂದು ಕುಮಾರ್ ಸಿಂಗ್ ಹೇಳಿದ್ದಾರೆ.
ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮೃತನ ತಂದೆ
ಶಿಶೀಷ್ ಕುಮಾರ್ ಲೀಸ್ ಪಡೆದು ನಡೆಸುತ್ತಿದ್ದ ಹೋಟೆಲ್ನಲ್ಲಿಯೇ ಪತ್ನಿ ರಿಸ್ಪೆನನಿಷ್ಟ್ ಆಗಿ ಕೆಲಸ ಮಾಡಿಕೊಂಡಿದ್ದಳು. ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿ, 2024ರಲ್ಲಿ ಮದುವೆಯಾಗಿದ್ದರು. ಮದುವೆ ಬಳಿಕ ಪತ್ನಿ ಹೋಟೆಲ್ನಲ್ಲಿ ಕೆಲಸ ಮಾಡೋದನ್ನ ಶಿಶೀಷ್ ಕುಮಾರ್ ನಿಲ್ಲಿಸಿದ್ದರು. ಪೊಲೀಸರ ಹೇಳಿಕೆ ಪ್ರಕಾರ, ಶಿಶೀಷ್ ಕುಮಾರ್ ಸಾವಿಗೆ ನೇಣು ಬಿಗಿದಿರೋದು ಕಾರಣವಾಗಿದೆ. ಶಿಶೀಷ್ ಕುಮಾರ್ ತಂದೆ ವಿಭೂತಿ ಪೊಲೀಸ್ ಠಾಣೆಯಲ್ಲಿ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು, ಹೇಳಿಕೆ ದಾಖಲಿಸಿಕೊಂಡು ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.
