ಬಸ್ ನಿಲ್ದಾಣದಲ್ಲಿ ವೃದ್ಧೆಗೆ ಜ್ಯೂಸ್ ನೀಡಿ ಅಸ್ವಸ್ಥಗೊಳಿಸಿ₹10 ಲಕ್ಷ ಮೌಲ್ಯದ ನಗದು, ಚಿನ್ನಾಭರಣ ದರೋಡೆ!

ಧರ್ಮಸ್ಥಳ : ಇಲ್ಲಿನ ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳದ ದೇವಸ್ಥಾನದ ಮುಖ್ಯದ್ವಾರದ ಮುಂಭಾಗದ ಬಸ್ ನಿಲ್ದಾಣದಲ್ಲಿ ವೃದ್ಧೆಯೊಬ್ಬರಿಗೆ ಮತ್ತು ಬರಿಸುವ ಪಾನೀಯ ನೀಡಿ ಅಸ್ವಸ್ಥಗೊಳಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿರುವ ಘಟನೆ ಮೇ 25 ರಂದು ರಾತ್ರಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ನಿವಾಸಿ ಶ್ರೀಮತಿ ಪ್ರೇಮಾ ಕೆ (70) ಎಂಬುವರೇ ದರೋಡೆಗೊಳಗಾದ ದುರ್ದೈವಿ. ಇವರಿಂದ 112 ಗ್ರಾಂ ತೂಕದ ಚಿನ್ನದ ಆಭರಣಗಳು ಮತ್ತು 7,000/- ರೂಪಾಯಿ ನಗದನ್ನು ಕಳವು ಮಾಡಲಾಗಿದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 10,00,700/- ರೂಪಾಯಿ ಎಂದು ಅಂದಾಜಿಸಲಾಗಿದೆ.
ಘಟನೆಯ ವಿವರ:
ದಿನಾಂಕ 25-05-2026 ರಂದು ಮಧ್ಯಾಹ್ನ ಧರ್ಮಸ್ಥಳ ದೇವಸ್ಥಾನಕ್ಕೆ ಬಂದಿದ್ದ ಪ್ರೇಮಾ ಅವರು ದೇವರ ದರ್ಶನ ಮುಗಿಸಿದ್ದರು. ರಾತ್ರಿ ವಾಪಾಸು ಬೆಂಗಳೂರಿಗೆ ಹೋಗುವ ಸಲುವಾಗಿ ದೇವಸ್ಥಾನದ ಮುಖ್ಯದ್ವಾರದ ಮುಂಭಾಗದಲ್ಲಿರುವ ಬಸ್ ನಿಲ್ದಾಣಕ್ಕೆ ಬಂದು ಬಸ್ಸಿಗಾಗಿ ಕಾಯುತ್ತಾ ಕುಳಿತಿದ್ದರು. ಈ ವೇಳೆ ಅವರ ಬಳಿ ಬಂದು ಕುಳಿತ ಅಪರಿಚಿತ ವ್ಯಕ್ತಿಯೊಬ್ಬ ಅಜ್ಜಿಯ ಜೊತೆ ಅತ್ಯಂತ ಆತ್ಮೀಯವಾಗಿ ಮಾತನಾಡಿದ್ದಾನೆ. ಬಳಿಕ ತಾನು ತಂದಿದ್ದ ದೇವರ ಪ್ರಸಾದ ಹಾಗೂ ಕುಡಿಯಲು ಜ್ಯೂಸ್ ನೀಡಿದ್ದಾನೆ.
ಅಪರಿಚಿತನ ಮಾತನ್ನು ನಂಬಿದ ವೃದ್ಧೆ ಪ್ರೇಮಾ ಅವರು ಜ್ಯೂಸ್ ಅನ್ನು ಸ್ವಲ್ಪ ಕುಡಿದು ವಾಪಾಸು ಕೊಟ್ಟಿದ್ದಾರೆ. ಆದರೆ, ಜ್ಯೂಸ್ ಕುಡಿದ ಕೆಲವೇ ನಿಮಿಷಗಳಲ್ಲಿ ಅವರು ಪ್ರಜ್ಞೆ ತಪ್ಪಿ ಅಸ್ವಸ್ಥರಾಗಿದ್ದಾರೆ. ವೃದ್ಧೆ ಅಸ್ವಸ್ಥರಾಗುತ್ತಿದ್ದಂತೆ ಹೊಂಚು ಹಾಕಿ ಕುಳಿತಿದ್ದ ಆ ಕಿರಾತಕ, ಪ್ರೇಮಾ ಅವರ ಮೈಮೇಲಿದ್ದ 112 ಗ್ರಾಂ ಚಿನ್ನಾಭರಣ ಹಾಗೂ ಬ್ಯಾಗ್ನಲ್ಲಿದ್ದ 7,000 ರೂ. ನಗದು ದೋಚಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.
ಬಸ್ ನಿಲ್ದಾಣದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವೃದ್ಧೆಯನ್ನು ಸ್ಥಳೀಯರು ತಕ್ಷಣವೇ ಗಮನಿಸಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ವೃದ್ಧೆ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಿಚಿತನ ವಿರುದ್ಧ ಗಂಭೀರ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.