ಕೇರಳದಲ್ಲಿ ತೆಂಗಿನಕಾಯಿ ಕಳ್ಳತನ ಹೆಚ್ಚಳ: ಬೆಲೆ ಏರಿಕೆಯೇ ಕಾರಣ!

ತಿರುವನಂತಪುರಂ : ಕರ್ನಾಟಕದಲ್ಲಷ್ಟೇ ಅಲ್ಲ, ನೆರೆಯ ರಾಜ್ಯ ಕೇರಳದಲ್ಲೂ ತೆಂಗಿನ ಕಾಯಿ ಬೆಲೆ ಗಗನಕ್ಕೇರಿದ್ದು, ಹೀಗಾಗಿ ರಾಜ್ಯದ ಕಲ್ಲಿಕೋಟೆಯ ಗ್ರಾಮವೊಂದರಲ್ಲಿ ಖದೀಮರು ತೆಂಗಿನ ಕಾಯಿಗಳನ್ನೇ ಕಳ್ಳತನ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಈ ಹಿಂದೆ ಇಲ್ಲಿ ತೆಂಗಿನ ಕಾಯಿಯ ಬೆಲೆ ಕೇಜಿಗೆ 30 ರು.ನಷ್ಟಿತ್ತು.

ಆದರೆ ಏಕಾಏಕಿ 80 ರು.ಗೆ ಏರಿಕೆ ಕಂಡಿರುವುದರಿಂದ ಖದೀಮರು ಕಳ್ಳತನದ ಹಾದಿ ಹಿಡಿದಿದ್ದಾರೆ. ನಿರಂತರವಾಗಿ ಗ್ರಾಮದಲ್ಲಿ ತೆಂಗಿನ ಕಾಯಿಗಳ ಕಳ್ಳತನಕ್ಕೆ ಬೇಸತ್ತ ಅಂಗಡಿಗಳು ಹಾಗೂ ತೋಟಗಳ ಮಾಲೀಕರು ತಮ್ಮ ಜಾಗದಲ್ಲಿ ಸಿಸಿಟೀವಿಗಳನ್ನು ಕೂಡ ಅಳವಡಿಸಿದ್ದಾರೆ. ಮಾತ್ರವಲ್ಲದೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದೂರು ದಾಖಲಿಸಿದ್ದಾರೆ.
ಸ್ಥಳೀಯ ಪೊಲೀಸರಿಗೆ 500 ತೆಂಗಿನಕಾಯಿ ತನಕ ಕಳವಾಗಿದೆ ಎಂದು ಸುಮಾರು 5 ದೂರುಗಳು ಬಂದಿವೆ. ಹೀಗಾಗಿ ಪೊಲೀಸರು ಅಂಗಡಿಕಾರರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ತೆಂಗಿನಕಾಯಿಗಳನ್ನು ಅಂಗಡಿಗಳ ಒಳಗೇ ಸುರಕ್ಷಿತವಾಗಿ ಇರಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಅಲ್ಲದೆ, ತಳ್ಳು ಗಾಡಿಯಲ್ಲಿ ತೆಂಗಿನಕಾಯಿ ಮಾರುವವರು ಸದಾ ಎಚ್ಚರಿಕೆ ವಹಿಸಬೇಕು ಎಂದು ತಾಕೀತು ಮಾಡಿದ್ದಾರೆ.
ಆಂಧ್ರದಲ್ಲಿ ಸೊಳ್ಳೆ ಮೇಲೆ ಕಣ್ಣಿಡಲು ಎಐ ಟೆಕ್ ಬಳಕೆ: ಕೃತಕ ಬುದ್ಧಿಮತ್ತೆಯು ಊಹೆಗೂ ಮೀರಿ ಎಲ್ಲಾ ಕ್ಷೇತ್ರಗಳನ್ನು ಆವರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ, ಸೊಳ್ಳೆಗಳ ಮೇಲೆ ಕಣ್ಣಿಡಲು ಮತ್ತು ಅವುಗಳನ್ನು ನಿಯಂತ್ರಿಸಲು ಎಐ ಬಳಸಲು ಆಂಧ್ರಪ್ರದೇಶ ಮುಂದಾಗಿದೆ. ಈ ಬಗ್ಗೆ ಟಿಡಿಪಿ ಪ್ರಕಟಣೆ ಹೊರಡಿಸಿದ್ದು, ‘ಸೊಳ್ಳೆಗಳ ಪ್ರಭೇದ, ಲಿಂಗ ಮತ್ತು ಸಾಂದ್ರತೆಯನ್ನು ಪತ್ತೆಹಚ್ಚಲು ಪುರಸಭೆ ಆಡಳಿತ ಮತ್ತು ನಗರಾಭಿವೃದ್ಧಿ ಇಲಾಖೆಯು ಎಐ ಚಾಲಿತ ಸೆನ್ಸಾರ್ ಮತ್ತು ಡ್ರೋನ್ಗಳನ್ನು ನಿಯೋಜಿಸಲಿದೆ. ಇವುಗಳನ್ನು 6 ಮಹಾನಗರ ಪಾಲಿಕೆಗಳ 66 ಸ್ಥಳಗಳಲ್ಲಿ ನಿಯೋಜಿಸಲಾಗುವುದು’ ಎಂದು ತಿಳಿಸಲಾಗಿದೆ.
ಡ್ರೋನ್ಗಳಲ್ಲಿರುವ ಸೆನ್ಸಾರ್ಗಳು ಸೊಳ್ಳೆಗಳ ಸಾಂದ್ರತೆ ಮತ್ತು ತಾಪಮಾನದಂತಹ ಹವಾಮಾನ ಪರಿಸ್ಥಿತಿಗಳ ನೈಜಸಮಯದ ಮೇಲ್ವಿಚಾರಣೆಯನ್ನು ನಡೆಸುತ್ತವೆ. ಇದರಿಂದ, ರಾಸಾಯನಿಕವನ್ನು ಸುಮ್ಮನೆ ಎಲ್ಲೆಡೆ ಸಿಂಪಡಿಸುವುದು ತಪ್ಪುತ್ತದೆ. ಅಂತೆಯೇ, ರಾಸಾಯನಿಕ ಸಿಂಪಡಿಸಲು ಡ್ರೋನ್ ಬಳಸುವುದರಿಂದ ಸಮಯ, ರಾಸಾಯನಿಕ ಪ್ರಮಾಣ, ವೆಚ್ಚಗಳು ಇಳಿಕೆಯಾಗುತ್ತವೆ. ಕೆಲ ತಿಂಗಳುಗಳ ಹಿಂದೆ ಗುಜರಾತ್ನ ಸೂರತ್ನಲ್ಲೂ ಸೊಳ್ಳೆ ಪತ್ತೆ ಮತ್ತು ನಾಶಕ್ಕೆ ಡ್ರೋನ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿತ್ತು.
