ಸಿಎಂ ವಿಜಯ್ ವಿರುದ್ಧ ಅವಹೇಳನಕಾರಿ ಭಾಷಣ: ಮಾಜಿ ಸಚಿವ ಅನಿತಾ ರಾಧಾಕೃಷ್ಣನ್ ವಿರುದ್ಧ ಕೇಸ್ ದಾಖಲು!

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ವಿರುದ್ಧ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ DMK ಶಾಸಕ ಹಾಗೂ ಮಾಜಿ ಸಚಿವ ಅನಿತಾ ರಾಧಾಕೃಷ್ಣನ್ ವಿರುದ್ಧ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜೂನ್ 20ರಂದು ತೂತುಕ್ಕುಡಿ ಜಿಲ್ಲೆಯ ಆಥರ್ನಲ್ಲಿ ನಡೆದ ಕಲ್ಯಾಣ ಯೋಜನೆಗಳ ನೆರವು ವಿತರಣಾ ಕಾರ್ಯಕ್ರಮದಲ್ಲಿ ಅನಿತಾ ರಾಧಾಕೃಷ್ಣನ್ ಅವರು ಮಾಡಿದ ಭಾಷಣದ ವಿರುದ್ಧ ದಾಖಲಾಗಿದ್ದ ದೂರಿನ ಆಧಾರದ ಮೇಲೆ ಆಥರ್ ಪೊಲೀಸರು ಎರಡು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅನಿತಾ ರಾಧಾಕೃಷ್ಣನ್, ಮುಖ್ಯಮಂತ್ರಿ ವಿಜಯ್ ಅವರ ವಿಧಾನಸಭೆಯ ನಡವಳಿಕೆ ಹಾಗೂ ಸಿನಿಮಾದಿಂದ ರಾಜಕೀಯಕ್ಕೆ ಬಂದಿರುವುದನ್ನು ಉಲ್ಲೇಖಿಸಿ ವ್ಯಂಗ್ಯವಾಡಿದ್ದರು. ಈ ಹೇಳಿಕೆಗಳು ವ್ಯಾಪಕ ಟೀಕೆಗೆ ಗುರಿಯಾಗಿದ್ದು, ನಂತರ ಪೊಲೀಸ್ ದೂರು ದಾಖಲಾಗಿತ್ತು.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಕೆಲವು ದಿನಗಳ ಹಿಂದೆ ವಿಧಾನಸಭೆಯಲ್ಲಿ ನಡೆದ ಚರ್ಚೆಯ ವೇಳೆ ಮುಖ್ಯಮಂತ್ರಿ ವಿಜಯ್ ಮತ್ತು ಡಿಎಂಕೆ ಶಾಸಕ ಎಸ್. ಆಸ್ಟಿನ್ ನಡುವೆ ವಾಗ್ವಾದ ನಡೆದಿತ್ತು. ಅದನ್ನು ಉಲ್ಲೇಖಿಸಿದ ಅನಿತಾ ರಾಧಾಕೃಷ್ಣನ್, “ಆಸ್ಟಿನ್ ಅವರು ಮುಖ್ಯಮಂತ್ರಿ ವಿಜಯ್ ಅವರನ್ನು ಉದ್ದೇಶಿಸಿ, ‘ನೀವು ಬಾಯಿ ತೆರೆದು ಮಾತನಾಡುವುದಿಲ್ಲವೇ?’ ಎಂದು ಪ್ರಶ್ನಿಸಿದ್ದರು. ಆಗ ವಿಜಯ್ ಅವರು ಸಿಕ್ಕಿಬಿದ್ದ ವ್ಯಕ್ತಿಯಂತೆ ಕಾಣುತ್ತಿದ್ದರು. ‘ನಾನು ಇಲ್ಲಿ ಹೇಗೆ ಸಿಲುಕಿಕೊಂಡೆ? ನಟಿಯೊಂದಿಗೆ ಮನೆಯಲ್ಲಿ ಎಷ್ಟು ಸಂತೋಷವಾಗಿದ್ದೆ. ಈಗ ಇಲ್ಲಿ ಸಿಕ್ಕಿಬಿದ್ದಿದ್ದೇನೆ’ ಎಂದು ಯೋಚಿಸುತ್ತಿರುವಂತೆ ಭಾಸವಾಗುತ್ತಿತ್ತು” ಎಂದು ವ್ಯಂಗ್ಯವಾಡಿದ್ದರು.ಮುಂದುವರಿದು ಮಾತನಾಡಿದ ಅನಿತಾ ರಾಧಾಕೃಷ್ಣನ್, “ನಾನು ವ್ಯಾಪಾರಿ. ಅಂಗಡಿಗೆ ಬರುವ ವ್ಯಕ್ತಿ ಏನನ್ನಾದರೂ ಖರೀದಿಸಲು ಬಂದಿದ್ದಾನೋ ಅಥವಾ ಹಣವನ್ನು ಸಾಲವಾಗಿ ಪಡೆಯಲು ಬಂದಿದ್ದಾನೋ ಎಂಬುದು ನನಗೆ ತಕ್ಷಣ ಅರ್ಥವಾಗುತ್ತದೆ. ಅದೇ ರೀತಿ, ವಿಧಾನಸಭೆಯಲ್ಲಿ ಮುಖ್ಯಮಂತ್ರಿ ವಿಜಯ್ ಅವರ ಮುಖಭಾವ ಮತ್ತು ನಡವಳಿಕೆ ನೋಡಿದಾಗ ಅವರು ಅಲ್ಲಿ ಸಹಜವಾಗಿಲ್ಲ, ಸಿಕ್ಕಿಬಿದ್ದವರಂತೆ ಭಾಸವಾಗುತ್ತಿತ್ತು” ಎಂದು ಹೇಳಿದರು.
ಮುಖ್ಯಮಂತ್ರಿ ವಿಜಯ್ ಅವರ ರಾಜಕೀಯ ಪ್ರವೇಶಕ್ಕೂ ಮುನ್ನದ ಜೀವನವನ್ನು ಉಲ್ಲೇಖಿಸಿ ಅನಿತಾ ರಾಧಾಕೃಷ್ಣನ್ ಮಾಡಿದ ಈ ಹೇಳಿಕೆಗಳು ವಿವಾದಕ್ಕೆ ಕಾರಣವಾದವು. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಭಾಷಣದ ವಿಡಿಯೊ ವ್ಯಾಪಕವಾಗಿ ವೈರಲ್ ಆಗಿ, ಟೀಕೆಗೆ ಗುರಿಯಾಯಿತು.
ಈ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿದ್ದ ದೂರಿನ ಮೇರೆಗೆ ಆಥರ್ ಪೊಲೀಸರು ಅನಿತಾ ರಾಧಾಕೃಷ್ಣನ್ ವಿರುದ್ಧ ಎರಡು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
