ಬೆಂಗಳೂರಿನಲ್ಲಿ ಹಿಂದಿ ಹೇರಿಕೆ ದುರಹಂಕಾರ: ಉತ್ತರ ಭಾರತೀಯನಿಂದ ಕನ್ನಡ ಆಟೋ ಚಾಲಕನಿಗೆ ಧಮ್ಕಿ

ಬೆಂಗಳೂರು: ಹೊಟ್ಟೆಪಾಡಿಗಾಗಿ ಊರು ರಾಜ್ಯಗಳನ್ನು ಬಿಟ್ಟು ಬೆಂಗಳೂರಿಗೆ ಮಾತ್ರವಲ್ಲದೇ ಮಹಾರಾಷ್ಟ್ರವೂ ಸೇರಿದಂತೆ ಹಲವು ದಕ್ಷಿಣ ರಾಜ್ಯಗಳಿಗೆ ವಲಸೆ ಬಂದ ಈ ಉತ್ತರ ಭಾರತೀಯ ಹಿಂದಿವಾಲಾಗಳ ಹಾವಳಿ ದಿನೇ ದಿನೇ ಹೆಚ್ಚಾಗ್ತಾ ಇದೆ. ಮಹಾರಾಷ್ಟ್ರದಲ್ಲೂ ಮರಾಠಿ ಭಾಷಿಕರ ಬಳಿ ಹಿಂದಿ ಕಲಿಯುವಂತೆ ಧಮ್ಕಿ ಹಾಕಿದ್ದಂತಹ ಹಲವು ವೀಡಿಯೋಗಳು ಈ ಹಿಂದೆ ವೈರಲ್ ಆಗಿದ್ದವು, ರಾಜ್ಯ ಬಿಟ್ಟು ಬಂದು ಸ್ಥಳೀಯರಿಗೆ ಧಮ್ಕಿ ಹಾಕುತ್ತಿರುವ ಹಿಂದಿ ಜನರ ವಿರುದ್ಧ ಈಗ ವ್ಯಾಪಕ ಆಕ್ರೋಶ ಕೇಳಿ ಬರುತ್ತಿರುವುದರ ಮಧ್ಯೆಯೇ ಇಲ್ಲೊಂದು ಕಡೆ ಉತ್ತರ ಭಾರತೀಯನೋರ್ವ ಸ್ಥಳೀಯ ಕನ್ನಡ ಭಾಷೆ ಮಾತನಾಡುವ ಆಟೋ ಚಾಲಕನಿಗೆ ಹಿಂದಿ ಮಾತನಾಡುವಂತೆ ಧಮ್ಕಿ ಹಾಕಿದ್ದ, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಿಂದಿವಾಲಾನ ದುರಹಂಕಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ವೈರಲ್ ಆದ ವಿಡಿಯೋದಲ್ಲಿ ಆತ, ಆಟೋ ಚಾಲಕನಿಗೆ ನೀನು ಬೆಂಗಳೂರಿನಲ್ಲಿ ಇರಬೇಕಾದರೆ ಹಿಂದಿ ಕಲಿ ಎಂದು ಧಮ್ಕಿ ಹಾಕುತ್ತಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಆಟೋ ಚಾಲಕ ಏನ್ ಮಾಡಕ್ಕಾಗಲ್ಲ, ಕನ್ನಡ ಕಲಿ ನೀನು ಎಂದಿದ್ದಾನೆ. ನೀನು ಬೆಂಗಳೂರಿಗೆ ಬಂದಿರುವುದು ನೀನು ಕನ್ನಡ ಕಲಿತುಕೋ ಎಂದಿದ್ದಾನೆ. ನಾನು ಹಿಂದಿ ಮಾತನಾಡಲ್ಲ ಎಂದಿದ್ದಾನೆ. ಅಷ್ಟರಲ್ಲಿ ಹಿಂದಿ ಮಾತನಾಡ್ತಿದ್ದ ಆತನನ್ನು ಹುಡುಗಿಯೊಬ್ಬಳು ಎಳೆದುಕೊಂಡು ಹೋಗಿದ್ದಾಳೆ.
ವಿನಯ್. ಎಸ್. ರೆಡ್ಡಿ ಎಂಬುವವರು ಈ ವೀಡಿಯೋವನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದು, ‘ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ’ ಎಂದು ಬರೆದುಕೊಂಡಿದ್ದಾರೆ. ನಿನ್ನೆ ರಾತ್ರಿ ಪೋಸ್ಟ್ ಅಗಿರುವ ಈ ವೀಡಿಯೋವನ್ನು ಆರು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಪರ ವಿರೋಧದ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಈ ಟ್ವಿಟ್ನ್ನು 650ಕ್ಕೂಹೆಚ್ಚು ಜನ ಶೇರ್ ಮಾಡಿದ್ದರೆ, 400ಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿದ್ದಾರೆ.
ನಾವು ಯಾವ ಪ್ರದೇಶಕ್ಕೆ ಹೋಗುತ್ತೇವೆಯೋ ಆ ಪ್ರದೇಶದ ಸ್ಥಳೀಯ ಸಂಸ್ಕೃತಿ ಭಾಷೆಯನ್ನು ಗೌರವಿಸಬೇಕು ಎಂಬುದು ಸಂಪ್ರದಾಯ ವಿದೇಶಕ್ಕೂ ಹೋದರೂ ಸರಿಯೇ ಭಾರತೀಯರು ಅಲ್ಲಿನ ಭಾಷೆಯನ್ನು ಕಲಿಯುತ್ತಾರೆ. ಅಲ್ಲಿನ ಆಚಾರ ವಿಚಾರಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಆದರೆ ಈ ಉತ್ತರ ಭಾರತೀಯ ಕೆಲವರು ಬೇಕಾದರೆ ವಿದೇಶದ ಸಂಸ್ಕೃತಿ ಭಾಷೆಯನ್ನು ಕಲಿಯುವುದಕ್ಕೆ ಇಷ್ಟಪಡುತ್ತಾರೆ ಆದರೆ ನಮ್ಮ ದೇಶದೊಳಗೆ ಇರುವ ತಮಗೆ ಸ್ಥಳೀಯವಾಗಿ ವ್ಯವಹರಿಸಲು ಅಗತ್ಯವಾಗಿರುವ ಭಾಷೆಯನ್ನು ಕಲಿಯಲು ದುರಂಕಾರ ಅಡ್ಡ ಬರುತ್ತಿದೆ. ಐಟಿ ಸಿಟಿಯಾಗಿರುವ ಬೆಂಗಳೂರಿನಲ್ಲಿ ದೇಶದ ವಿವಿಧೆಡೆಯ ಲಕ್ಷಾಂತರ ಜನ ಕೆಲಸ ಮಾಡುತ್ತಿದ್ದಾರೆ. ಅವರು ಇಲ್ಲಿನ ಭಾಷೆ ಸಂಸ್ಕೃತಿಗೆ ಗೌರವ ನೀಡಬೇಕು ಎಂಬುದು ಇಲ್ಲಿನ ಜನರ ಆಗ್ರಹ ಆದರೆ ಅದಕ್ಕವರು ಒಪ್ಪದೇ ಹಿಂದೆ ರಾಷ್ಟ್ರಭಾಷೆ ಹಿಂದಿ ಕಲಿಯಿರಿ ಎಂದು ಸ್ಥಳೀಯರಿಗೆ ಧಮ್ಕಿ ಹಾಕುತ್ತಿದ್ದಾರೆ.
ನಗರದಲ್ಲಿರುವ ಹಿಂದಿ ಭಾಷಿಕರಿಗೆಯೇ ಈ ದುರಂಕಾರವಿರುವುದು, ಬೇರೆ ಯಾವುದೇ ಭಾಷೆ ಮಾತನಾಡುವವರೂ ಕೂಡ ತಮ್ಮ ಸ್ವಂತ ಭಾಷೆಯಲ್ಲಿ ಮಾತನಾಡಲು ಸ್ಥಳೀಯರಿಗೆ ಹೇಳುವಷ್ಟು ಧೈರ್ಯ ತೋರುವುದಿಲ್ಲ, ಹೊಂದಿಕೊಳ್ಳುವಿಕೆ ಯಾವುದೇ ಭಾಷೆಯ ಸ್ವಭಾವವಾಗಿರಬೇಕು ಆದರೆ ಹಿಂದಿ ಭಾಷಿಕರರಿಗೆ ಇತರರ ಮೇಲೆ ತಮ್ಮದನ್ನು ಹೇರಲು ಮಾತ್ರ ತಿಳಿದಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ನಾನು ಕನ್ನಡ ಪರ ಗೂಂಡಾಗಿರಿಯನ್ನು ಬೆಂಬಲಿಸುವುದಿಲ್ಲ ಆದರೆ ವೀಡಿಯೊದಲ್ಲಿರುವ ಹಿಂದಿ ವ್ಯಕ್ತಿ ಬೆಲ್ಟ್ ಚಿಕಿತ್ಸೆಗೆ ಅರ್ಹ, ಅವನು ಬೇರೆಡೆಯಿಂದ ಇಲ್ಲಿಗೆ ಬಂದಿದ್ದಾನೆ ಮತ್ತು ಸ್ಥಳೀಯರು ಅವನ ಭಾಷೆಯನ್ನು ಮಾತನಾಡಬೇಕೆಂದು ಅವನು ನಿರೀಕ್ಷಿಸುತ್ತಿದ್ದಾನೆಯೇ? ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.
ಹಿಂದಿ ಭಾಷೆಯ ಮೇಲೆ ಅಷ್ಟೊಂದು ದ್ವೇಷ ಏಕೆ ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ ಇದಕ್ಕೆ ಪ್ರತಿಕ್ರಿಯಿಸಿದ ಒಬ್ಬರು ನೀವು ಜರ್ಮನಿಗೆ ಹೋಗಿ ನಿಮ್ಮ ಭಾಷೆ ಮಾತನಾಡಿ ಎಂದು ಹೇಳಿದರೆ ಹೇಗಿರುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ. ಹಾಗೆಯೇ ಇನ್ನೊಬ್ಬರು ನಾನು ತಮಿಳುನಾಡಿನವನು, ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಇಲ್ಲಿ ಎಲ್ಲರೂ ಹಿಂದಿ ಮಾತನಾಡುತ್ತಿದ್ದಾರೆ ಎಂಬುದನ್ನು ನೋಡಿ ನನಗೆ ಆಘಾತವಾಯಿತು. ಅವರಲ್ಲಿ 70% ಉತ್ತರ ಭಾರತದವರು. ಈ ಮಣ್ಣಿನ ಭಾಷೆ ಕನ್ನಡವನ್ನು ಸಹ ಅವರು ಗೌರವಿಸುವುದಿಲ್ಲ. ನಾನು ಕನ್ನಡವನ್ನು ಗೌರವಿಸುತ್ತೇನೆ. ಏಕೆಂದರೆ ನನಗೆ ಕೆಲಸ ಮತ್ತು ಉತ್ತಮ ವಾತಾವರಣವನ್ನು ಅದು ನೀಡುತ್ತಿದೆ ಎಂದು ಒಬ್ಬರು ಹೇಳಿದ್ದಾರೆ.