ಹೊಟ್ಟೆಯಲ್ಲಿ ಚಿನ್ನದ ಸರ ಪತ್ತೆ! – ಮಧುರೈ ಮೂಲದ ಕಳ್ಳನಿಗೆ ಹಣ್ಣು ತಿನ್ನಿಸಿ ವಿಚಾರಣೆ ನಡೆಸಿದ ಪೊಲೀಸರು

ಕೇರಳ : ಖತರ್ನಾಕ್ ಕಳ್ಳರು ಪೊಲೀಸರಿಗೆ ಯಾಮಾರಿಸಿ ಚಳ್ಳೆಹಣ್ಣು ತಿನ್ನಿಸುವುದು ಹೊಸ ವಿಚಾರವಲ್ಲ. ಇನ್ನೇನು ಸಿಕ್ಕೆ ಬಿಟ್ಟ ಅನ್ನೋವಷ್ಟರಲ್ಲಿ ಕಳ್ಳ ಇಗೋ ಎಸ್ಕೇಪ್ ಆಗುತ್ತಿತ್ತಾರೆ.. ಆದರೆ ಪರಿಸ್ಥಿತಿ ಯಾವತ್ತೂ ಕೂಡ ಒಂದೇ ತರ ಇರಲ್ಲ.. ಕೆಲವೊಮ್ಮೆ ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿ ಕಳ್ಳನಿಗೆ ಬುದ್ದಿಕಲಿಸುತ್ತಾರೆ.

ಇದೀಗ ಅಂತಹದ್ದೇ ಒಂದು ಘಟನೆ ಕೇರಳದಲ್ಲಿ ನಡೆದಿದ್ದು, ತಮಿಳುನಾಡಿನ ಮಧುರೈ ಮೂಲದ 34 ವರ್ಷದ ಮುತ್ತಪ್ಪನ್ ಎಂಬಾತ ಭಾನುವಾರ ರಾತ್ರಿ 9 ಗಂಟೆಯ ಸುಮಾರಿಗೆ ಆಲತ್ತೂರು ಬಳಿಯ ಮೆಲಾರ್ಕೋಡ್ನಲ್ಲಿ ನಡೆದ ದೇವಾಲಯ ಉತ್ಸವದ ಸಂದರ್ಭದಲ್ಲಿ ಚಿತ್ತೂರಿನ ವಿನೋದ್ ಅವರ ಮಗಳು ಮೂರು ವರ್ಷದ ನಕ್ಷತ್ರಾ ಎಂಬ ಮಗುವಿನ ಕುತ್ತಿಗೆಯಲ್ಲಿದ್ದ 6ಗ್ರಾಂ ಚಿನ್ನದ ಸರವನ್ನು ಕದ್ದಿದ್ದಾನೆ.
ಈ ವೇಳೆ ಇದನ್ನು ಗಮನಿಸಿ ಬಾಲಕಿಯ ಅಜ್ಜಿ ಕಿರುಚಾಡಿದ್ದಾರೆ. ಕೂಡಲೇ ಸ್ಥಳೀಯರು ಮುತ್ತಪ್ಪನ್ ನನ್ನು ಹಿಡಿದು ಚಿನ್ನದ ಸರಕ್ಕಾಗಿ ದೇಹವೆಲ್ಲ ಹುಡುಕಾಡಿದ್ದಾರೆ. ಆದರೆ ಸರ ಎಲ್ಲೂ ಪತ್ತೆಯಾಗಿಲ್ಲ.. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ ಎಷ್ಟೇ ವಿಚಾರಣೆ ನಡೆಸಿದರು ಕೂಡ ಮುತ್ತಪ್ಪನ್ ನನಗೆ ಗೊತ್ತಿಲ್ಲ ಎಂದು ಉತ್ತರಿಸುತ್ತಿದ್ದ..
ಇದಾದ ಬಳಿಕ ಆತನನ್ನು ನೇರವಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಎಕ್ಸ್-ರೇ ತೆಗೆಸಿದ್ದಾರೆ. ಈ ವೇಳೆ ಸರ ಹೊಟ್ಟೆಯ ಒಳಗೆ ಇರುವುದು ಪತ್ತೆಯಾಗಿದೆ. ಅದನ್ನು ಹೊರತೆಗೆಯಲು ಬಾಳೆಹಣ್ಣು, ಪಪಾಯ ಹಣ್ಣುಗಳನ್ನು ನೀಡಿದರೆ ಸರಳವಾಗಿ ಸರ ಹೊರಕ್ಕೆ ಬರುತ್ತದೆ ಎಂದು ವೈದ್ಯರು ಸಲಹೆ ನೀಡಿದರು.
ಅಷ್ಟೇ ತಡ, ಪೊಲೀಸರು ಡಜನ್ಗಟ್ಟಲೆ ಬಾಳೆಹಣ್ಣು ಮತ್ತು ಪಪಾಯ ಹಣ್ಣುಗಳನ್ನು ತರಿಸಿದರು. ಬೇರೆ ಸಮಯದಲ್ಲಿ ಹೀಗೆ ಹಣ್ಣು ನೀಡಿದ್ದರೆ ಆತ ಖುಷಿಯಿಂದ ತಿನ್ನುತಿದ್ದನೇನೋ? ಆದರೆ ಪೊಲೀಸರ ಭಯಕ್ಕೆ ಒಲ್ಲದ ಮನಸಿನಿಂದಲೇ ತಿನ್ನಲು ಆರಂಭಿಸಿದ. ಆತನ ಹೊಟ್ಟೆ ತುಂಬಿದೆ ಎಂದರೂ ಪೊಲೀಸರು ಬಿಡುತ್ತಿಲ್ಲ..
ಸದ್ಯ ಆಸ್ಪತ್ರೆಯ ಹೊರಗಡೆಯೇ ಪೊಲೀಸರು ಬೀಡುಬಿಟ್ಟಿದ್ದು, ಸರ ಮರಳಿ ಪಡೆದ ನಂತರವೇ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ