ಇಟಾನಗರ: ಎಫ್ಸಿಆರ್ಎ ನಿಯಮ ಉಲ್ಲಂಘನೆ ಆರೋಪ – ಪರಿಸರ ಕಾರ್ಯಕರ್ತೆ ಭಾನು ತಾತಕ್ ವಿರುದ್ಧ ಸಿಬಿಐ ಪ್ರಕರಣ ದಾಖಲು!

ಇಟಾನಗರ: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್ಸಿಆರ್ಎ) ಉಲ್ಲಂಘಿಸಿ ವಿದೇಶದಿಂದ ನಿಧಿಯನ್ನು ಸ್ವೀಕರಿಸಿದ ಆರೋಪದಲ್ಲಿ ಅರುಣಾಚಲ ಪ್ರದೇಶದ ನ್ಯಾಯವಾದಿ ಹಾಗೂ ಪರಿಸರ ಕಾರ್ಯಕರ್ತೆ ಭಾನು ತಾತಕ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.
ತಾತಕ್ ಸಿಯಾಂಗ್ ಸ್ಥಳೀಯ ರೈತರ ವೇದಿಕೆ’ಯ ಕಾನೂನು ಸಲಹೆಗಾರರಾಗಿದ್ದಾರೆ, ಜೊತೆಗೆ ಸಾಮಾಜಿಕ ಸಂಘಟನೆ ‘ದಿಬಾಂಗ್ ರೆಸಿಸ್ಟೆನ್ಸ್’ನ ಸಂಯೋಜಕರೂ ಆಗಿದ್ದಾರೆ.
ತಾತಕ್ ಮತ್ತು ಈ ಸಂಘಟನೆಗಳು ಅರುಣಾಚಲ ಪ್ರದೇಶದ ಸಿಯಾಂಗ್ ನದಿಗೆ ಅಡ್ಡವಾಗಿ ನಿರ್ಮಿಸಲು ಉದ್ದೇಶಿಸಲಾಗಿರುವ 12,500 ಮೆಗಾವ್ಯಾಟ್ ಸಾಮರ್ಥ್ಯದ ‘ಸಿಯಾಂಗ್ ವಿವಿಧೋದ್ದೇಶ ಯೋಜನೆ’ಯ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ದಿಬಾಂಗ್ ರೆಸಿಸ್ಟೆನ್ಸ್ ದಿಬಾಂಗ್ ನದಿಗೆ ಅಡ್ಡವಾಗಿ 2,880 ಮೆಗಾವ್ಯಾಟ್ ವಿದ್ಯುತ್ ಯೋಜನೆಯನ್ನು ಸಹ ವಿರೋಧಿಸುತ್ತಿದೆ.
ತಾತಕ್ ಎಫ್ಸಿಆರ್ಎ ಅಡಿ ಕಡ್ಡಾಯ ನೋಂದಣಿ ಪ್ರಮಾಣಪತ್ರವನ್ನು ಪಡೆಯದೆ ವಿವಿಧ ವಿದೇಶಿ ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ ನೇರವಾಗಿ ತನ್ನ ವೈಯಕ್ತಿಕ ಉಳಿತಾಯ ಬ್ಯಾಂಕ್ ಖಾತೆಯಲ್ಲಿ 17.6 ಲಕ್ಷ ರೂ.ಗಳಿಗೂ ಹೆಚ್ಚು ಹಣವನ್ನು ಸ್ವೀಕರಿಸಿದ್ದಾರೆ ಎಂದು ಸಿಬಿಐ ತನ್ನ ಎಫ್ಐಆರ್ನಲ್ಲಿ ಆರೋಪಿಸಿದೆ.
ಫಿಲಿಪೈನ್ಸ್ ಮೂಲದ ‘ಏಷ್ಯಾ ಇಂಡಿಜಿನಸ್ ಪೀಪಲ್ಸ್ ನೆಟ್ವರ್ಕ್ ಆನ್ ಎಕ್ಸ್ಟ್ರಾಕ್ಟಿವ್ ಇಂಡಸ್ಟ್ರೀಸ್ ಆ್ಯಂಡ್ ಎನರ್ಜಿ ಮತ್ತು ‘ಇಂಡಿಜಿನಸ್ ಪೀಪಲ್ಸ್ ರೈಟ್ಸ್ ಇಂಟರ್ನ್ಯಾಷನಲ್, ಐರ್ಲೆಂಡ್ ಮೂಲದ ‘ಫ್ರಂಟ್ ಲೈನ್ ಹಾಗೂ ಬ್ರಿಟನ್ ಮೂಲದ ‘ಹೂಮನ್ ರೈಟ್ಸ್ ರಿಸೋರ್ಸ್ ಸೆಂಟರ್ನಂತಹ ವಿದೇಶಿ ಸಂಸ್ಥೆಗಳಿಂದ ತಾತಕ್ ಹಣ ಸ್ವೀಕರಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ತಾತಕ್ ಎಂದಿಗೂ ಆದಾಯ ತೆರಿಗೆ ರಿಟರ್ನ್ಗಳನ್ನು ಸಲ್ಲಿಸಿಲ್ಲ ಮತ್ತು ಅವರು ಸ್ವೀಕರಿಸಿರುವ ವಿದೇಶಿ ಹಣವನ್ನು ಯಾವುದೇ ಅಧಿಕೃತ ದಾಖಲೆಗಳಲ್ಲಿ ತೋರಿಸಿಲ್ಲ ಎಂದು ಸಿಬಿಐ ಪ್ರತಿಪಾದಿಸಿದೆ.
ಈ ಹಣವನ್ನು ಅರುಣಾಚಲ ಪ್ರದೇಶದಲ್ಲಿ ಅಣೆಕಟ್ಟು ವಿರೋಧಿ ಪ್ರತಿಭಟನೆಗಳನ್ನು ಸಂಘಟಿಸಲು ಬಳಸಲಾಗುತ್ತಿದ್ದು ಇದು ದೇಶದ ಆರ್ಥಿಕ ಮತ್ತು ವೈಹಾತ್ಮಕ ಹಿತಾಸಕ್ತಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದೂ ಸಿಬಿಐ ಆರೋಪಿಸಿದೆ.
ಸಿಯಾಂಗ್ ವಿವಿಧೋದ್ದೇಶ ಯೋಜನೆಯು ಸ್ಥಳೀಯ ಆದಿ ಬುಡಕಟ್ಟು ಸಮುದಾಯದ ಅಸ್ತಿತ್ವಕ್ಕೆ ಬೆದರಿಕೆಯೊಡ್ಡಿದೆ ಎಂದು ಸಿಯಾಂಗ್ ಸ್ಥಳೀಯ ರೈತರ ವೇದಿಕೆಯು ಆರೋಪಿಸಿದೆ.
2025,ಸೆಪ್ಟೆಂಬರ್ನಲ್ಲಿ ಅರುಣಾಚಲ ಪ್ರದೇಶ ಪೊಲೀಸರು ಹೊರಡಿಸಿದ್ದ ಲುಕ್ಔಟ್ ಸುತ್ತೋಲೆಯ ಆಧಾರದಲ್ಲಿ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಐರ್ಲೆಂಡ್ಗೆ ತೆರಳಲಿದ್ದ ವಿಮಾನವನ್ನು ಹತ್ತುತ್ತಿದ್ದ ತಾತಕ್ ಅವರನ್ನು ವಲಸೆ ಅಧಿಕಾರಿಗಳು ತಡೆದಿದ್ದರು. ಡಬ್ಲಿನ್ ಸಿಟಿ ಯೂನಿವರ್ಸಿಟಿಯಲ್ಲಿ ಮೂರು ತಿಂಗಳ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ತೆರಳಬೇಕಿತ್ತು.
