ಕುಂದಾಪುರ: ಗಂಗೊಳ್ಳಿ ಅಳಿವೆ ಸಮುದ್ರದಲ್ಲಿ ಮುಳುಗಿದ ಮತ್ತೊಂದು ಮೀನುಗಾರಿಕಾ ಬೋಟ್; 6 ಮಂದಿ ಮೀನುಗಾರರ ರಕ್ಷಣೆ!

ಕುಂದಾಪುರ : ತಾಲೂಕಿನ ಗಂಗೊಳ್ಳಿ ಅಳಿವೆ ಪ್ರದೇಶದ ಅರಬ್ಬಿ ಸಮುದ್ರದಲ್ಲಿ ಬುಧವಾರ ಮತ್ತೊಂದು ಮೀನುಗಾರಿಕಾ ಬೋಟ್ ಮುಳುಗಡೆಯಾಗಿದ್ದು, ಬೋಟಿನಲ್ಲಿದ್ದ ಆರು ಮಂದಿ ಮೀನುಗಾರರನ್ನು ಸಹೋದ್ಯೋಗಿ ಮೀನುಗಾರರು ರಕ್ಷಿಸಿದ್ದಾರೆ. ಕಳೆದ ವಾರವಷ್ಟೇ ಇದೇ ಪ್ರದೇಶದಲ್ಲಿ ಪರ್ಸಿನ್ ಬೋಟ್ ಸಂಪೂರ್ಣ ಮುಳುಗಡೆಯಾಗಿತ್ತು. ಈ ಘಟನೆಯ ಬೆನ್ನಲ್ಲೇ ಇದೀಗ ಮತ್ತೊಂದು ಬೋಟ್ ದುರಂತಕ್ಕೀಡಾಗಿದೆ.

ಗಂಗೊಳ್ಳಿ ಬಂದರಿನಿಂದ ಬುಧವಾರ ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ್ದ ಕುಂಭಾಶಿ ಕೊರವಡಿಯ ಸಂತೋಷ್ ಎ. ಅವರಿಗೆ ಸೇರಿದ ‘ಮಂಜುನಾಥ ಸಾಗರ’ ಎಂಬ ಬೋಟ್ ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಹಠಾತ್ತನೆ ಮುಳುಗಡೆಯಾಗಿದೆ. ಬೋಟ್ ಅಪಾಯಕ್ಕೆ ಸಿಲುಕಿದ ಸುದ್ದಿ ತಿಳಿಯುತ್ತಿದ್ದಂತೆ ಸಮೀಪದಲ್ಲಿದ್ದ ಇತರೆ ಮೀನುಗಾರರು ತಕ್ಷಣವೇ ಪರ್ಸಿನ್ ಬೋಟ್ ಮೂಲಕ ತೆರಳಿ ಸಮುದ್ರದಲ್ಲಿ ಅಪಾಯದಲ್ಲಿದ್ದ ಆರೂ ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ.
ಬಳಿಕ ನೀರಿನಲ್ಲಿ ಭಾಗಶಃ ಮುಳುಗುತ್ತಿದ್ದ ಬೋಟ್ ಅನ್ನು ಮತ್ತೊಂದು ಬೋಟ್ನ ನೆರವಿನಿಂದ ಎಳೆದು ಗಂಗೊಳ್ಳಿ ಬಂದರಿಗೆ ತರಲಾಯಿತು. ಬೋಟ್ನೊಳಗೆ ನೀರು ಹೊಕ್ಕಿದ್ದರಿಂದ ಅದರಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಾರಿಕಾ ಬಲೆ ಹಾಗೂ ಇತರೆ ಸಾಮಗ್ರಿಗಳು ಸಂಪೂರ್ಣ ಹಾನಿಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.