ಕುಂದಾಪುರ: ಗಂಗೊಳ್ಳಿ ಸಮುದ್ರದಲ್ಲಿ ಮುಳುಗಿದ್ದ ‘ಶ್ರೀ ಬಾಲಾಂಜನೇಯ’ ಮೀನುಗಾರಿಕಾ ದೋಣಿಯ ಅವಶೇಷಗಳು ಪತ್ತೆ!

ಕುಂದಾಪುರ: ಗಂಗೊಳ್ಳಿ ನದೀಮುಖದ ಬಳಿ ಬುಧವಾರ ಸಮುದ್ರದಲ್ಲಿ ಮುಳುಗಿದ್ದ ‘ಶ್ರೀ ಬಾಲಾಂಜನೇಯ’ ಮೀನುಗಾರಿಕಾ ದೋಣಿಯ ಅವಶೇಷಗಳು ಗುರುವಾರ ಕೋಟ ಪಡುಕೆರೆಯ ಹಂದಟ್ಟು ಸಮುದ್ರ ತೀರದಲ್ಲಿ ಪತ್ತೆಯಾಗಿವೆ.

ಬಲವಾದ ಅಲೆಗಳಿಗೆ ಸಿಲುಕಿ ಸಮುದ್ರದಲ್ಲಿ ಮುಳುಗಿದ್ದ ದೋಣಿ ಸಂಪೂರ್ಣವಾಗಿ ಛಿದ್ರಗೊಂಡಿದ್ದು, ಅದರ ಅವಶೇಷಗಳು ಅಲೆಗಳ ರಭಸಕ್ಕೆ ದಡಕ್ಕೆ ಬಂದು ಕರಾವಳಿಯ ಒಂದು ಭಾಗದಲ್ಲಿ ಒಟ್ಟುಗೂಡಿವೆ. ಮಾಹಿತಿ ತಿಳಿದು ಗಂಗೊಳ್ಳಿ ಕರಾವಳಿ ಭದ್ರತಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಮೇಶ್ ಕೆ., ಸಬ್ಇನ್ಸ್ಪೆಕ್ಟರ್ ಸುಬ್ರಹ್ಮಣ್ಯ ಸೇರಿದಂತೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಭಟ್ಕಳದ ಮುಂಡಳ್ಳಿಯ ನಾಗರಾಜ್ ಮೊಗೇರ್ ಅವರ ಮಾಲೀಕತ್ವದ ‘ಶ್ರೀ ಬಾಲಾಂಜನೇಯ’ ಪರ್ಸ್ಸೀನ್ ದೋಣಿ ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಬಂದರಿನಿಂದ ಸ್ವಲ್ಪ ದೂರದಲ್ಲಿರುವ ನದೀಮುಖ ಪ್ರದೇಶದಲ್ಲಿ ದೋಣಿ ಬಲವಾದ ಅಲೆಗಳಿಗೆ ಸಿಲುಕಿ ಮುಳುಗಿತ್ತು. ದೋಣಿ ಅಪಾಯಕ್ಕೆ ಸಿಲುಕಿದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಮೀನುಗಾರರು ಹಾಗೂ ಗಂಗೊಳ್ಳಿ ಕರಾವಳಿ ಭದ್ರತಾ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ದೋಣಿಯಲ್ಲಿದ್ದ ಎಲ್ಲಾ 27 ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.ದೋಣಿ ಮುಳುಗಿದ ವೇಳೆ ಅದರಲ್ಲಿದ್ದ ಮೀನುಗಾರಿಕಾ ಬಲೆಗಳು ಹಾಗೂ ಇತರ ಉಪಕರಣಗಳು ಸಮುದ್ರದಲ್ಲಿ ಕೊಚ್ಚಿಹೋಗಿವೆ. ಇದೀಗ ದೋಣಿಯ ಅವಶೇಷಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ನಷ್ಟದ ಪ್ರಮಾಣದ ಕುರಿತು ಪರಿಶೀಲನೆ ನಡೆಯುತ್ತಿದೆ.