ಸುಳ್ಯ: ಅರಂತೋಡು ಸರಕಾರಿ ಜಾಗದಿಂದ ಅಕ್ರಮವಾಗಿ ಮರ ಕಡಿದು ಸಾಗಿಸುತ್ತಿದ್ದ ಲಾರಿ ಹಾಗೂ ಮರ ವಶಕ್ಕೆ; ನಾಲ್ವರ ಬಂಧನ!

ಸುಳ್ಯ: ಅರಂತೋಡು ಸರಕಾರಿ ಜಾಗದಿಂದ ಮರ ಕಡಿದು ಸಾಗಾಟ ಮಾಡುತ್ತಿದ್ದಾಗ ಲಾರಿ, ಮರ ಸಹಿತ ನಾಲ್ವರನ್ನು ವಶಕ್ಕೆ ಪಡೆದು ಸುಳ್ಯ ಅರಣ್ಯ ಇಲಾಖೆಯವರು ಪ್ರಕರಣ ದಾಖಲಿಸಿಕೊಂಡ ಘಟನೆ ವರದಿಯಾಗಿದೆ.

ನೆಲ್ಲೂರು ಕೆಮ್ರಾಜೆ ಗ್ರಾಮದ ದೊಡ್ಡತೋಟದಿಂದ ಮರ್ಕಂಜ ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯ ಹೈದಂಗೂರು ಎಂಬಲ್ಲಿ ಆ.26 ರ ರಾತ್ರಿ ಸುಳ್ಯ ವಲಯದ ರಾತ್ರಿ ಗಸ್ತು ಸಿಬ್ಬಂದಿಗಳು ಗಸ್ತು ಮಾಡುವಾಗ ಅಕ್ರಮ ಮರ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ವಾಹನ ತಡೆದು ನಿಲ್ಲಿಸಿ ತಪಾಸಣೆ ಮಾಡಿದಾಗ 14 ಕಿರಾಲ್ಬೋಗಿ ಜಾತಿಯ ದಿಮ್ಮಿಗಳಿರುವುದು ಕಂಡುಬಂತು. ಲಾರಿಯಲ್ಲಿದ್ದ ವ್ಯಕ್ತಿಗಳನ್ನು ವಿಚಾರಿಸಿದಾಗ ಈ ಮರದ ದಿಮ್ಮಿಗಳ ಸಾಗಾಟದ ಅನುಮತಿ ಪತ್ರ ಇಲ್ಲದಿರುವುದು ಕಂಡುಬಂದಿದೆ. ಲಾರಿ ಮತ್ತು ಸೊತ್ತುಗಳನ್ನು ಅಮಾನತು ಮಾಡಿ ಆರೋಪಿಗಳನ್ನು ಬಂಧಿಸಲಾಯಿತು.ಆರೋಪಿಗಳಾದ ಯಶವಂತ ಯು.ಜಿ., ತರುಣ್ ಯು.ವೈ, ಲಾರಿಯ ಚಾಲಕ ದೀಕ್ಷಿತ್ ಡಿ, ಲಾರಿಯ ಮಾಲೀಕ ಗಗನ್ ಕೆ. ಇವರನ್ನು ಬಂಧಿಸಿ ಕೇಸು ದಾಖಲಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು. ವಶಪಡಿಸಿಕೊಂಡ ಮರದ ದಿಮ್ಮಿ ಮತ್ತು ಲಾರಿಯ ಒಟ್ಟು ಮೊತ್ತ 8,40,144/ ಎಂದು ಅಂದಾಜಿಸಲಾಗಿದೆ.