ಮಂಗಳೂರು: ಎನ್ಐಟಿಕೆ ಸಮುದ್ರದಲ್ಲಿ ಮುಳುಗಿದ ಮೀನುಗಾರಿಕಾ ದೋಣಿ; ಆರು ಮಂದಿ ಮೀನುಗಾರರ ಪ್ರಾಣ ರಕ್ಷಣೆ!

ಮಂಗಳೂರು,: ಎನ್ಐಟಿಕೆ (NITK) ಬೀಚ್ ಸಮೀಪದ ನಡುಸಮುದ್ರದಲ್ಲಿ ಶುಕ್ರವಾರ ಭಾರೀ ಗಾಳಿ ಹಾಗೂ ಅಲೆಗಳ ಹೊಡೆತಕ್ಕೆ ಸಿಲುಕಿ ಮೀನುಗಾರಿಕಾ ನಾಡದೋಣಿಯೊಂದು ಮುಳುಗಡೆಯಾಗಿದ್ದು, ಅದರಲ್ಲಿದ್ದ ಆಂಧ್ರಪ್ರದೇಶ ಮೂಲದ ಆರು ಮಂದಿ ಮೀನುಗಾರರನ್ನು ಸ್ಥಳೀಯರು ಜಂಟಿಯಾಗಿ ರಕ್ಷಿಸಿದ್ದಾರೆ. ಕಣ್ಣುಮುಚ್ಚಿ ಬಿಡುವಷ್ಟರಲ್ಲಿ ಸಂಭವಿಸಿದ ಈ ದುರಂತದಿಂದ ಮೀನುಗಾರರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೂಲಗಳ ಪ್ರಕಾರ, ಈ ಆರು ಮಂದಿ ಆಂಧ್ರಪ್ರದೇಶದ ಮೀನುಗಾರರು ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಿಂದ ನಾಡದೋಣಿಯ ಮೂಲಕ ಮೀನುಗಾರಿಕೆಗೆ ಸಮುದ್ರಕ್ಕೆ ಇಳಿದಿದ್ದರು. ಸುರತ್ಕಲ್ನ ಎನ್ಐಟಿಕೆ ಕರಾವಳಿ ತೀರದ ಸಮೀಪ ಸಾಗುತ್ತಿದ್ದಾಗ, ಸಮುದ್ರದಲ್ಲಿ ದಿಢೀರನೆ ಎದ್ದ ಭಾರೀ ಗಾಳಿ ಹಾಗೂ ದೈತ್ಯ ಅಲೆಗಳ ರೌದ್ರಾವತಾರಕ್ಕೆ ಸಿಲುಕಿದ ದೋಣಿ ನಿಯಂತ್ರಣ ತಪ್ಪಿ ನಡುಸಮುದ್ರದಲ್ಲೇ ಪಲ್ಟಿಯಾಗಿದೆ.
ದೋಣಿ ಮುಳುಗಡೆಯಾಗುತ್ತಿದ್ದಂತೆ ಅದರಲ್ಲಿದ್ದ ಆರು ಮೀನುಗಾರರು ಸಮುದ್ರದ ಉಬ್ಬರವಿಳಿತಕ್ಕೆ ಸಿಲುಕಿದ್ದರು. ತೀರದಲ್ಲಿದ್ದ ಹಾಗೂ ಸಮೀಪದಲ್ಲೇ ಮೀನುಗಾರಿಕೆಯಲ್ಲಿ ತೊಡಗಿದ್ದ ಸ್ಥಳೀಯ ಸಾಹಸಿ ಮೀನುಗಾರರು ತಕ್ಷಣವೇ ಪರಿಸ್ಥಿತಿಯನ್ನು ಅರಿತು ತಮ್ಮ ದೋಣಿಗಳೊಂದಿಗೆ ಧಾವಿಸಿದ್ದಾರೆ. ರಕ್ಕಸ ಅಲೆಗಳನ್ನೂ ಲೆಕ್ಕಿಸದೆ ಕಾರ್ಯಾಚರಣೆ ನಡೆಸಿ, ಮುಳುಗುತ್ತಿದ್ದ ಆರೂ ಮಂದಿಯನ್ನು ಸುರಕ್ಷಿತವಾಗಿ ದಡಕ್ಕೆ ತಂದು ಜೀವದಾನ ಮಾಡಿದ್ದಾರೆ.