ಮೆಟ್ರೋದಲ್ಲಿ ಸ್ಪ್ರೇ ಮಾಡಿ ಪರಾರಿಯಾದ ಕಿಡಿಗೇಡಿ: ಇಂದಿರಾನಗರದಲ್ಲಿ ಪ್ರಯಾಣಿಕರ ಪರದಾಟ.

ಬೆಂಗಳೂರು: ಸಿಲಿಕಾನ್ ಸಿಟಿಯ ಅತ್ಯಂತ ಜನನಿಬಿಡ ಮೆಟ್ರೋ (Namma Metro) ನಿಲ್ದಾಣಗಳಲ್ಲಿ ಒಂದಾದ ಇಂದಿರಾನಗರ ಮೆಟ್ರೋ ಸ್ಟೇಷನ್ ಬಳಿ ಗುರುವಾರ ಸಂಜೆ ಭೀತಿ ಮೂಡಿಸುವಂತಹ ಅನುಮಾನಾಸ್ಪದ ಘಟನೆಯೊಂದು ನಡೆದಿದೆ. ಮೆಟ್ರೋ ನಿಲ್ದಾಣದ ಹೊರಗಿನ ಆವರಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಏಕಾಏಕಿ ಏನೋ ಸ್ಪ್ರೇ ಮಾಡಿ ಸ್ಥಳದಿಂದ ಓಡಿ ಹೋಗಿರುವ ಘಟನೆ ನಡೆದಿದೆ. ಸದ್ಯ ಅಪರಿಚಿತ ವ್ಯಕ್ತಿಗಾಗಿ ಬಿಎಂಆರ್ಸಿಎಲ್ (BMRCL) ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ.
ನಡೆದಿದ್ದೇನು?
ವೈಟ್ಫೀಲ್ಡ್ನಿಂದ ಚಲ್ಲಘಟ್ಟ ಪರ್ಪಲ್ ಲೈನ್ ವ್ಯಾಪ್ತಿಗೆ ಬರುವ ಇಂದಿರಾನಗರ ಮೆಟ್ರೋ ನಿಲ್ದಾಣದ ಬಳಿ ಸಂಜೆ 7:30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಕಚೇರಿ ಮುಗಿಸಿ ಮನೆಗೆ ಮರಳುವ ಪ್ರಯಾಣಿಕರ ದಟ್ಟಣೆ ಹೆಚ್ಚಿದ್ದ ಸಮಯದಲ್ಲಿ ಈ ಕೃತ್ಯ ನಡೆದಿದೆ.
ಪ್ರಯಾಣಿಕರಲ್ಲಿ ಆತಂಕ: ಮೂಗು ಮುಚ್ಚಿಗೊಂಡು ಓಡಾಟ
ಅನಾಮಿಕ ವ್ಯಕ್ತಿ ಸ್ಪ್ರೇ ಮಾಡಿದ ಬಳಿಕ ಸುತ್ತಮುತ್ತ ಹೊಗೆ ಆವರಿಸಿದರಿಂದ ಅಲ್ಲಿದ್ದ ಸಾರ್ವಜನಿಕರು ಹಾಗೂ ಪ್ರಯಾಣಿಕರು ಉಸಿರಾಡಲು ತೊಂದರೆಯಾಗಿ ಮೂಗು ಮುಚ್ಚಿಕೊಂಡು ಆತಂಕದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ವ್ಯಕ್ತಿ ಏನು ಸ್ಪ್ರೇ ಮಾಡಿದ ಮತ್ತು ಯಾವ ಉದ್ದೇಶಕ್ಕಾಗಿ ಇಂತಹ ಕೃತ್ಯ ಎಸಗಿದ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲಇನ್ನು ಈ ದಿಢೀರ್ ಘಟನೆಯಿಂದಾಗಿ ಇಂದಿರಾನಗರ ಮೆಟ್ರೋ ನಿಲ್ದಾಣದ ಆವರಣದಲ್ಲಿ ಕೆಲಕಾಲ ಸಾರ್ವಜನಿಕರು ತೀವ್ರ ಗಾಬರಿಗೊಂಡಿದ್ದರು. ಕೂಡಲೇ ಅಲರ್ಟ್ ಆದ ನಮ್ಮ ಮೆಟ್ರೋ ಭದ್ರತಾ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ಸ್ಪ್ರೇ ಮಾಡಿ ಪರಾರಿಯಾಗಿರುವ ಆ ಅನಾಮಿಕ ವ್ಯಕ್ತಿಗಾಗಿ ನಿಲ್ದಾಣ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
