ಮಂಗಳೂರು: ಅಕ್ರಮ ಬಾಂಗ್ಲಾದೇಶಿ ನುಸುಳುಕೋರರ ಜಾಲ ಪತ್ತೆ; ಕೋಲ್ಕತ್ತಾದಲ್ಲಿ ಪ್ರಮುಖ ಕಿಂಗ್ಪಿನ್ ಸೆರೆ!

ಮಂಗಳೂರು: ಮಂಗಳೂರು ನಗರದ ಉರ್ವಾ ಠಾಣಾ ವ್ಯಾಪ್ತಿಯಲ್ಲಿ ಕಟ್ಟಡ ಕಾರ್ಮಿಕರ ಸೋಗಿನಲ್ಲಿ ಅಕ್ರಮವಾಗಿ ನೆಲೆಸಿದ್ದ 11 ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿದ್ದ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಇವರನ್ನು ಮಂಗಳೂರಿಗೆ ಸಾಗಿಸುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಅಂತರರಾಜ್ಯ ಮಾನವ ಕಳ್ಳಸಾಗಣೆ ಜಾಲದ ಪ್ರಮುಖ ಕಿಂಗ್ಪಿನ್ಗಳನ್ನು ಮಂಗಳೂರು ಪೊಲೀಸರು ಸೆರೆಹಿಡಿದಿದ್ದಾರೆ.

ಬಾಂಗ್ಲಾದೇಶಿಗಳನ್ನು ಭಾರತದೊಳಗೆ ನುಸುಳಿಸಿ ಮಂಗಳೂರಿಗೆ ತರುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಮೊಯಿದಿನ್ ಇಸ್ಲಾಂ, ರಸುಲ್ ಇಸ್ಲಾಂ ಹಾಗೂ ದಿಲ್ವಾರ್ ಹುಸೇನ್ ಎಂಬ ಮೂವರು ಪ್ರಮುಖ ಏಜೆಂಟರ ವಿರುದ್ಧ ಪೊಲೀಸರು ಗಂಭೀರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಈ ಪೈಕಿ ಮೊಯಿದಿನ್ ಇಸ್ಲಾಂ ಹಾಗೂ ದಿಲ್ವಾರ್ ಹುಸೇನ್ನನ್ನು ಈಗಾಗಲೇ ಮಂಗಳೂರಿನಲ್ಲೇ ಬಂಧಿಸಲಾಗಿದೆ.
ಪ್ರಕರಣದ ತನಿಖೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಮಂಗಳೂರು ನಗರ ಪೊಲೀಸ್ ಆಯುಕ್ತರು, ಪಶ್ಚಿಮ ಬಂಗಾಳದಲ್ಲಿ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಮುಖ್ಯ ಆರೋಪಿ ರಸುಲ್ ಇಸ್ಲಾಂ ಪತ್ತೆಗೆ ವಿಶೇಷ ತಂತ್ರ ರೂಪಿಸಿದ್ದರು. ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ (DCP Law & Order) ಅವರು ಪಶ್ಚಿಮ ಬಂಗಾಳದ ಕೋಲ್ಕತ್ತಾ ಪೊಲೀಸರೊಂದಿಗೆ ತಕ್ಷಣವೇ ಸಮನ್ವಯ ಸಾಧಿಸಿ ರಹಸ್ಯ ಕಾರ್ಯಾಚರಣೆ ನಡೆಸಿದ್ದಾರೆ. ಇದರ ಫಲವಾಗಿ ಪ್ರಮುಖ ಸೂತ್ರಧಾರಿ ರಸುಲ್ ಇಸ್ಲಾಂನನ್ನು ಕೋಲ್ಕತ್ತಾದಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಆರೋಪಿಗಳು ಉತ್ತರ ಭಾರತದ ವಿವಿಧ ರಾಜ್ಯಗಳಿಂದ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದ ಮೂಲಕ ಬಡ ಕಾರ್ಮಿಕರನ್ನು ಮಂಗಳೂರಿಗೆ ಕಟ್ಟಡ ಕೆಲಸಗಳಿಗಾಗಿ ಕರೆತರುತ್ತಿದ್ದರು. ಇದೇ ನೆಪವನ್ನು ಬಳಸಿಕೊಂಡು, ಭಾರತೀಯ ಕಾರ್ಮಿಕರ ಗುಂಪಿನ ನಡುವೆ ಅಕ್ರಮ ಬಾಂಗ್ಲಾದೇಶಿ ಪ್ರಜೆಗಳನ್ನೂ ಸೇರಿಸಿ ಮಂಗಳೂರಿಗೆ ಸಾಗಿಸುತ್ತಿದ್ದರು ಎಂಬ ಆಘಾತಕಾರಿ ಸತ್ಯ ತನಿಖೆಯಲ್ಲಿ ಬಯಲಾಗಿದೆ.
ಬಂಧಿತ ರಸುಲ್ ಇಸ್ಲಾಂನನ್ನು ಟ್ರಾನ್ಸಿಟ್ ವಾರಂಟ್ ಮೇಲೆ ಮಂಗಳೂರಿಗೆ ಕರೆತರಲು ಮಂಗಳೂರು ಸಿಸಿಬಿ ಅಥವಾ ಉರ್ವಾ ಪೊಲೀಸರ ವಿಶೇಷ ತಂಡ ಈಗಾಗಲೇ ಕೋಲ್ಕತ್ತಾಕ್ಕೆ ಧಾವಿಸಿದೆ.