ಇರಾನ್ ಉಪ ರಾಯಭಾರಿಯನ್ನು ಕರೆಸಿಕೊಂಡ ಭಾರತ; ಘಟನೆಗೆ ತೀವ್ರ ಆಕ್ಷೇಪ ವ್ಯಕ್ತ!

ಹೊಸದಿಲ್ಲಿ : ಹಾರ್ಮುಝ್ ಜಲಸಂಧಿಯಲ್ಲಿ ಯುಎಇಯ ಎರಡು ಟ್ಯಾಂಕರ್ಗಳ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಓರ್ವ ಭಾರತೀಯ ನಾವಿಕ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇರಾನ್ ಉಪ ರಾಯಭಾರಿಯನ್ನು ಕರೆಸಿಕೊಂಡು ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ.
ಒಮಾನ್ ಪ್ರಾದೇಶಿಕ ಜಲಪ್ರದೇಶಕ್ಕೆ ಒಳಪಡುವ ಹಾರ್ಮುಝ್ ಜಲಸಂಧಿಯ ದಕ್ಷಿಣ ಮಾರ್ಗದಲ್ಲಿ ಮೊಂಬಾಸಾ ಮತ್ತು ಬಹಿಯಾ ಎಂಬ ಟ್ಯಾಂಕರ್ಗಳ ಮೇಲೆ ಕ್ಷಿಪಣಿ ದಾಳಿ ನಡೆದಿದೆ ಎಂದು ಯುಎಇ ಹೇಳಿದ ಬೆನ್ನಲ್ಲೆ ಈ ರಾಜತಾಂತ್ರಿಕ ಕ್ರಮವನ್ನು ಕೈಗೊಳ್ಳಲಾಗಿದೆ. ಯುಎಇ ಪ್ರಕಾರ, ಗಾಯಗೊಂಡವರಲ್ಲಿ ಆರು ಭಾರತೀಯರು ಮತ್ತು ಇಬ್ಬರು ಉಕ್ರೇನ್ ಪ್ರಜೆಗಳು ಸೇರಿದ್ದಾರೆ.
ಘಟನೆಯ ಹಿನ್ನೆಲೆ ಭಾರತದಲ್ಲಿರುವ ಇರಾನ್ ರಾಯಭಾರಿ ಕಚೇರಿಯ ಉಪ ಮುಖ್ಯಸ್ಥ ಮುಹಮ್ಮದ್ ಜವಾದ್ ಹೊಸೈನಿ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕರೆಸಿಕೊಂಡಿದೆ. ಸಚಿವಾಲಯದಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಇರಾನ್ ವಿಭಾಗದ ಜಂಟಿ ಕಾರ್ಯದರ್ಶಿ ಆನಂದ್ ಪ್ರಕಾಶ್ ಈ ಘಟನೆಯ ಬಗ್ಗೆ ಭಾರತದ ತೀವ್ರ ಆಕ್ಷೇಪವನ್ನು ದಾಖಲಿಸಿ, ಅಧಿಕೃತ ಪ್ರತಿಭಟನೆ ಸಲ್ಲಿಸಿದರು ಎಂದು ವರದಿಯಾಗಿದೆ.
