ಕಾಸರಗೋಡು: ಜಿಲ್ಲೆಯ ನೂತನ ಎಸ್ಪಿಯಾಗಿ ಪಿ. ನಿತಿನ್ ರಾಜ್ ಅಧಿಕಾರ ಸ್ವೀಕಾರ; ಗಡಿ ಜಿಲ್ಲೆಗೆ ದಕ್ಷ ಅಧಿಕಾರಿಯ ಸಾರಥ್ಯ

ಕಾಸರಗೋಡು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪಿ. ನಿತಿನ್ ರಾಜ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ಹಾಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಭರತ್ ರೆಡ್ಡಿ ಅವರು ನೂತನ ಎಸ್ಪಿಯನ್ನು ಸ್ವಾಗತಿಸಿ ಅಧಿಕಾರ ಹಸ್ತಾಂತರಿಸಿದರು.
ಕಣ್ಣೂರು ನಗರ ಪೊಲೀಸ್ ಆಯುಕ್ತರಾಗಿ (ಸಿಟಿ ಪೊಲೀಸ್ ಕಮಿಷನರ್) ಕಾರ್ಯನಿರ್ವಹಿಸುತ್ತಿದ್ದ ನಿತಿನ್ ರಾಜ್ ಅವರನ್ನು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿಯೋಜಿಸಲಾಗಿದೆ.
ಕಾಸರಗೋಡು ಜಿಲ್ಲೆಯ ಇತಿಹಾಸದಲ್ಲೇ ಜಿಲ್ಲೆಯ ಮೂಲ ನಿವಾಸಿಯೊಬ್ಬರು ಜಿಲ್ಲಾ ಪೊಲೀಸ್ ಮುಖ್ಯಸ್ಥರ ಹುದ್ದೆಯನ್ನು ಅಲಂಕರಿಸುತ್ತಿರುವುದು ಇದೇ ಮೊದಲ ಬಾರಿಗೆ ಎನ್ನುವುದು ವಿಶೇಷ. ಕಾಸರಗೋಡು ಜಿಲ್ಲೆಯ ಕಾಂಞಂಗಾಡ್ನ ರಾವಣೇಶ್ವರಂ ಪ್ರದೇಶದವರಾದ ನಿತಿನ್ ರಾಜ್ ಅವರ ನೇಮಕಾತಿಗೆ ಸಾರ್ವಜನಿಕ ವಲಯದಲ್ಲಿ ಸಂತಸ ವ್ಯಕ್ತವಾಗಿದೆ.
ಇದಕ್ಕೂ ಮುನ್ನ ಅವರು ಕಣ್ಣೂರು ಹಾಗೂ ತಿರುವನಂತಪುರಂನಲ್ಲಿ ಡಿಸಿಪಿಯಾಗಿ, ವಡಕರ ಗ್ರಾಮೀಣ ವಿಭಾಗದ ಎಸ್ಪಿಯಾಗಿ ಸೇವೆ ಸಲ್ಲಿಸಿ ದಕ್ಷ ಹಾಗೂ ಪರಿಣಾಮಕಾರಿ ಆಡಳಿತದ ಮೂಲಕ ಗಮನ ಸೆಳೆದಿದ್ದರು.
ಅತ್ಯುತ್ತಮ ತನಿಖಾ ಕೌಶಲ್ಯಕ್ಕಾಗಿ ಡಿಜಿಪಿ ಅವರ ಪ್ರತಿಷ್ಠಿತ ‘ಬ್ಯಾಡ್ಜ್ ಆಫ್ ಆನರ್’ ಪ್ರಶಸ್ತಿಯನ್ನು ಪಡೆದಿರುವ ನಿತಿನ್ ರಾಜ್ ಅವರ ಅನುಭವ ಮತ್ತು ನಾಯಕತ್ವವು ಜಿಲ್ಲೆಯ ಕಾನೂನು ಸುವ್ಯವಸ್ಥೆ ಮತ್ತಷ್ಟು ಬಲಪಡಿಸಲು ನೆರವಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.
