ಸುರತ್ಕಲ್: 12 ಲಕ್ಷ ರೂ. ಕೇರಳ ಲಾಟರಿ ಆಸೆ ತೋರಿಸಿ ವ್ಯಕ್ತಿಗೆ 1.85 ಲಕ್ಷ ರೂ. ವಂಚನೆ; ಖದೀಮರ ವಿರುದ್ಧ ಕೇಸ್ ದಾಖಲು!

ಮಂಗಳೂರು: ಕೇರಳದ ಲಾಟರಿ ಖರೀದಿಸಿದ ವ್ಯಕ್ತಿಗೆ 12 ಲಕ್ಷ ರೂ. ಬಹುಮಾನ ಬಂದಿದೆ ಎನ್ನುತ್ತಾ ವ್ಯಕ್ತಿಯೊಬ್ಬರಿಂದ 1.85 ಲಕ್ಷ ರೂ. ಪಡೆದು ಬಳಿಕ ವಂಚಿಸಿರುವ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇ 29ರಂದು ತಾನು ಫೇಸ್ಬುಕ್ ನೋಡುತ್ತಿದ್ದಾಗ ಕೇರಳ ಲಾಟರಿಯ ಜಾಹೀರಾತು ಬಂದಿದೆ. ಟಿಕೆಟ್ ದರ 50 ರೂ. ಮತ್ತು ಸಂಜೆ ಡ್ರಾ ಆಗುವ ಬಗ್ಗೆ ಅದರಲ್ಲಿ ತಿಳಿಸಲಾಗಿತ್ತು. ಅದರಂತೆ ತಾನು ಅದರಲ್ಲಿದ್ದ ನಂಬರ್ಗೆ ಕರೆ ಮಾಡಿದಾಗ ನವೀನ್ ಎಂಬ ಹೆಸರಿನ ವ್ಯಕ್ತಿ ಲಾಟರಿ ನಂಬರ್ ಕಳುಹಿಸಿದ್ದ. ತಾನು ಅದರಲ್ಲಿ 2 ನಂಬರ್ ಆಯ್ಕೆ ಮಾಡಿ, ಆತ ಕಳಹಿಸಿದ ಸ್ಕ್ಯಾನರ್ಗೆ 100 ರೂ. ಕಳಹಿಸಿದ್ದೆ. ಸಂಜೆ 4ಕ್ಕೆ ಆ ಅಪರಿಚಿತ ವ್ಯಕ್ತಿ ಕರೆ ಮಾಡಿ ಲಾಟರಿ ಡ್ರಾ ಆಗಿ 1 ನಂಬರ್ಗೆ 12 ಲಕ್ಷ ರೂ. ಬಂದಿದೆ ಎಂದಿದ್ದ. ಬಳಿಕ ತನ್ನ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ನಂಬರ್, ಐಎಫ್ಎಸ್ಸಿ ಕೋಡ್ ಇತ್ಯಾದಿ ಪಡೆದು 12 ಲಕ್ಷಕ್ಕೆ ಶೇ.1 ರೂ. ಪಾವತಿಸಬೇಕು ಎಂದಿದ್ದ.ಅಲ್ಲದೆ ದೀಪಕ್ ಹೆಸರಿನ ಗೂಗಲ್ ಪೇ ನಂಬರ್ ಕೊಟ್ಟಿದ್ದ. ತಾನು ಆ ನಂಬರ್ಗೆ 12,000 ರೂ. ಹಾಕಿದೆ. ನಂತರ ಆತ 24,981 ರೂ. ತೆರಿಗೆ ಕಟ್ಟಬೇಕು ಎಂದ. ಮತ್ತೆ 58,760 ರೂ. ಕಟ್ಟಬೇಕೆಂದು ತೆರಿಗೆ ಬಾಂಡ್ ಮತ್ತು ರಾಜ್ಕುಮಾರ್ ಹೆಸರಿನ ಗೂಗಲ್ ಪೇ ನಂಬರ್ ಕಳುಹಿಸಿದ. ಬಳಿಕ 89,895 ರೂ. ಮೊತ್ತದ ತೆರಿಗೆ ಪತ್ರ ಕಳುಹಿಸಿದ. ಅದನ್ನು ಪಾವತಿಸಿದರೆ 350 ರೂ. ಕಟ್ ಆಗಿ ಉಳಿದ ಮೊತ್ತ ಖಾತೆಗೆ ಜಮೆ ಆಗುತ್ತದೆ ಎಂದು ತಿಳಿಸಿದ್ದ.ಬಳಿಕ ತಾನು ಮೋಸ ಹೋಗಿರುವ ಬಗ್ಗೆ ಅನುಮಾನ ಬಂದು ಅಪರಿಚತ ವ್ಯಕ್ತಿಯ ಬಳಿ ಕಚೇರಿ ವಿಳಾಸ ಕೇಳಿದಾಗ ರೂಟ್ ಮ್ಯಾಪ್ ಸಹಿತ ಕಚೇರಿ ವಿಳಾಸ ಕಳುಹಿಸಿದ್ದ. ಹಾಗೇ ಸ್ನೇಹಿತರ ಜತೆ ಕೇರಳದ ತಿರುವನಂತಪುರಕ್ಕೆ ಜೂ.2ರಂದು ತಲುಪಿ ಅಲ್ಲಿ ಆತನಿಗೆ ಕರೆ ಮಾಡಿದಾಗ ಈಗ ಕಚೇರಿಯಲ್ಲಿ ಇಲ್ಲ ಬರುವಾಗ ಸಂಜೆಯಾಗುತ್ತದೆ ಎಂದಿದ್ದ. ಲಾಟರಿ ಆಫೀಸಿಗೆ ತೆರಳಿ ವಿಚಾರಿಸಿದಾಗ ಇದೊಂದು ಫೇಕ್ ಲಾಟರಿ ಎಂದು ತಿಳಿದು ಬಂದಿರುವುದಾಗಿ ಹಣ ಕಳಕೊಂಡ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.